ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು
ನವದೆಹಲಿ, ಸೆಪ್ಟೆಂಬರ್ 21: ಕೃಷಿ ಸಂಬಂಧಿ ಮಸೂದೆಗಳನ್ನು ವಿರೋಧಿಸಿ ಭಾನುವಾರ ರಾಜ್ಯಸಭೆಯಲ್ಲಿ ನಡೆದ ಸಂಸದರ ಅನುಚಿತ ವರ್ತನೆ ವಿರುದ್ಧ ಗೊತ್ತುವಳಿ ಮಂಡಿಸಿ ಅವರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಸಿಂಗ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಸದರನ್ನು ರಾಜ್ಯಸಭೆಯ 256ನೇ ನಿಯಮದಡಿ ಅಮಾನತುಗೊಳಿಸುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸೋಮವಾರ ಮಂಡಿಸಲು ನಿರ್ಧರಿಸಿದ್ದರು.
ಕೆಲವು ಸಂಸದರು ಸದನದಲ್ಲಿ ಕೀಳಾಗಿ ವರ್ತಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಅಧ್ಯಕ್ಷರ ಕರ್ತವ್ಯಕ್ಕೆ ತೊಂದರೆ ನೀಡಿ, ಮೇಜಿನ ಮೇಲೆ ಕುಣಿದು, ರೂಲ್ ಬುಕ್ ಎಸೆದು, ಪತ್ರಗಳನ್ನು ಹರಿದು ಕೆಟ್ಟ ವರ್ತನೆ ಪ್ರದರ್ಶಿಸಿದ್ದಾರೆ. ಅದನ್ನು ಸದನದ ಹೊರಗೆ ಒಪ್ಪಿಕೊಂಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಸದನದಲ್ಲಿ ಇಂತಹ ವರ್ತನೆ ನಡೆಯಬಾರದು. ನಿಮಗೆ ಯಾವುದೇ ವಿರೋಧ ಇದ್ದರೆ ಅದರ ವಿರುದ್ಧ ಚರ್ಚಿಸಬೇಕೇ ವಿನಾ ಇಂತಹ ಕೆಟ್ಟ ವರ್ತನೆ ಪ್ರದರ್ಶಿಸಬಾರದು ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು. ಮುಂದೆ ಓದಿ.
ನಿನ್ನ ರಾಜ್ಯಸಭೆಗೆ ಕೆಟ್ಟ ದಿನ
ಉಪಾಧ್ಯಕ್ಷರ ವಿರುದ್ಧ ಕೆಟ್ಟ ಭಾಷೆಗಳನ್ನು ಬಳಸಿ ಅವರಿಗೆ ಗಾಸಿ ಮಾಡಲಾಗಿದೆ. ಅಧ್ಯಕ್ಷರ ಸ್ಥಾನಕ್ಕೆ ಯಾವ ರೀತಿ ಗೌರವ ಸಲ್ಲಿಸಬೇಕು ಎನ್ನುವುದು ನಿಮಗೆ ತಿಳಿದಿಲ್ಲ. ಇಲ್ಲಿ ಸಂಸದೀಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿದೆ. ನಿನ್ನೆ ಸದನದ ಪಾಲಿಗೆ ಕರಾಳ ದಿನ. ಇದನ್ನು ಖಂಡಿಸುತ್ತೇನೆ. ಇದರ ವಿರುದ್ಧ ನನಗೆ ಪತ್ರ ಬರೆಯಲಾಗಿದೆ ಎಂದರು.
ಅಮಾನತುಗೊಂಡ ಸಂಸದರು
ಡೆರೆಕ್ ಒಬ್ರಿಯಾನ್, ಸಯ್ಯದ್ ನಸೀರ್ ಹುಸೇನ್, ಸಂಜಯ್ ಸಿಂಗ್, ಕೆಕೆ ರಾಜೇಶ್, ರಿಪುನ್ ಬೋರಾ, ರಾಜೀವ್ ಸಟವ್, ಡೋಲಾ ಸೇನ್, ಎಲಮಾರಮ್ ಕರೀಮ್ ಅವರನ್ನು ಒಂದು ವಾರದವರೆಗೆ ಅಮಾನತುಗೊಳಿಸಿದ್ದಾಗಿ ವೆಂಕಯ್ಯ ನಾಯ್ಡು ಘೋಷಿಸಿದರು.
ಈ ಅಧಿವೇಶನದ ಉಳಿದ ಅವಧಿಗಳಿಂದ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಸಂಸತ್ನ ವ್ಯವಸ್ಥೆ. ದಯವಿಟ್ಟು ಸದನದಿಂದ ಹೊರ ಹೋಗಿ. ನೀವು ಸದನದ ನಿಯಮ ಮೀರಿ ಕೆಟ್ಟ ವರ್ತನೆ ತೋರಿಸಿದ್ದೀರಿ. ಇದರಲ್ಲಿ ಸೂಚಿಸಲಾಗಿರುವ ಸಂಸದರು ಸದನದಿಂದ ಹೊರ ನಡೆಯಿರಿ ಎಂದು ಹೇಳಿದರು.
ಕಲಾಪ ನಡೆಸಲು ಅಡ್ಡಿ
ಅಮಾನತಿನ ಬಳಿಕ ಇತರೆ ಮಸೂದೆಗಳ ಚರ್ಚೆಗೆ ಮಂಡನೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಅದಕ್ಕೆ ವಿರೋಧಪಕ್ಷದ ಸದಸ್ಯರು ಅಡ್ಡಿಪಡಿಸಿದರು. ಸದನದ ನಿಯಮಗಳನ್ನು ಪಾಲಿಸುವಂತೆ ವೆಂಕಯ್ಯ ನಾಯ್ಡು ಮಾಡಿದ ಮನವಿಗೆ ಕಿಮ್ಮತ್ತು ನೀಡಲಿಲ್ಲ. ಇದರಿಂದ ಸದನವನ್ನು ಹತ್ತು ಗಂಟೆಗೆ ಮುಂದೂಡಲಾಯಿತು.
ಸದನದಲ್ಲಿ ನಡೆದಿದ್ದೇನು?
ಕೃಷಿ ಮಸೂದೆಗಳನ್ನು ವಿರೋಧಿಸಿ ಸದನದ ಬಾವಿಗೆ ಇಳಿದಿದ್ದ ವಿರೋಧಪಕ್ಷಗಳ ಸಂಸದರು, ಅಧ್ಯಕ್ಷರ ವೇದಿಕೆಗೆ ನುಗ್ಗಿ ಮೈಕ್ರೋಫೋನ್ಗಳನ್ನು ಕಿತ್ತುಹಾಕಿದ್ದರು. ಜತೆಗೆ ಕಾಗದ ಪತ್ರಗಳನ್ನು ಹರಿದೆಸೆದಿದ್ದರು. ಕೆಲವು ಸಂಸದರು ಅಧ್ಯಕ್ಷರ ಕುರ್ಚಿಯ ಬಳಿ ನಿಂತು ಪ್ರತಿಭಟನೆ ನಡೆಸುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, ರೂಲ್ ಬುಕ್ಅನ್ನು ಅಧ್ಯಕ್ಷರ ಕುರ್ಚಿಯತ್ತ ಎಸೆದಿದ್ದರು. ಗದ್ದಲ ನಡೆಸಿದ ಎಎಪಿಯ ಸಂಸದ ಸಂಜಯ್ ಸಿಂಗ್ ಅವರನ್ನು ಮಾರ್ಷಲ್ಗಳು ಸದನದಿಂದ ಹೊರಗೆ ಕರೆದೊಯ್ದಿದ್ದರು. ಕನಿಷ್ಠ 12 ಸಂಸದರು ಪ್ರತಿಭಟನೆಗೆ ಇಳಿದಿದ್ದರು. ಕಲಾಪ ಮುಗಿದ ಬಳಿಕ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಸಂಸದರ ಈ ವರ್ತನೆ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರೊಂದಿಗೆ ರಾಜ್ಯಸಭೆ ಅಧ್ಯಕ್ಷರು ಸಭೆ ನಡೆಸಿ ಚರ್ಚಿಸಿದ್ದರು.