ಸಂಸದರಲ್ಲಿ ಕೊರೊನಾ ವೈರಸ್: ಸಂಸತ್ ಮುಂಗಾರು ಅಧಿವೇಶನ ಮೊಟಕು?
ನವದೆಹಲಿ, ಸೆಪ್ಟೆಂಬರ್ 19: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಪ್ರಹ್ಲಾದ್ ಪಟೇಲ್ ಸೇರಿದಂತೆ 30ಕ್ಕೂ ಹೆಚ್ಚು ಸಂಸದರಲ್ಲಿ ಕಳೆದ ಒಂದು ವಾರದಿಂದ ಕೊರೊನಾ ವೈರಸ್ ಸೊಂಕು ಇರುವುದು ದೃಢಪಟ್ಟಿರುವುದರಿಂದ ಸಂಸತ್ನಲ್ಲಿ ಕೋವಿಡ್ ಹರಡುವ ಭೀತಿ ಹೆಚ್ಚಾಗಿದೆ. ಇದರಿಂದ ನಿಗದಿಯಂತೆ ಕೊನೆಯ ದಿನಾಂಕದವರೆಗೂ ಸಂಸತ್ ಅಧಿವೇಶನ ಮುಂದುವರಿಯುವುದು ಅನುಮಾನವಾಗಿದೆ.
ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಅನೇಕ ಸಂಸದರೊಂದಿಗೆ ಉಳಿದವರು ಕೂಡ ಸಂಪರ್ಕಕ್ಕೆ ಬಂದಿದ್ದರು. ಅವರೊಂದಿಗೆ ಮಾತನಾಡುವ, ಊಟ ಮಾಡುವ ಚಟುವಟಿಕೆಗಳನ್ನು ನಡೆಸಿದ್ದರು. ಇದರಿಂದ ಮತ್ತಷ್ಟು ಸಂಸದರಿಗೆ ಸೋಂಕು ಹರಡಿರುವ ಆತಂಕ ಉಂಟಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಹೊರಡಿಸಲಾದ 11 ಸುಗ್ರೀವಾಜ್ಞೆಗಳು ಮಸೂದೆ ರೂಪದಲ್ಲಿ ಎರಡೂ ಸದನಗಳಲ್ಲಿ ಅಂಗೀಕಾರಗೊಂಡರೆ ಅಧಿವೇಶನವನ್ನು ಅಂತ್ಯಗೊಳಿಸುವ ಸಾಧ್ಯತೆ ಇದೆ. ಮುಂದಿನ ವಾರದ ಮೊದಲಾರ್ಧದಲ್ಲಿ ಈ ಮಸೂದೆಗಳನ್ನು ಮಂಡಿಸಿ ಅವುಗಳನ್ನು ಅಂಗೀಕರಿಸಲು ಸರ್ಕಾರ ಮುಂದಾಗಲಿದೆ. ಮುಂದಿನ ವಾರದ ಮಧ್ಯಭಾಗದ ವೇಳೆ ಅಧಿವೇಶನ ಅಂತ್ಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಎರಡೂ ಸದನಗಳು ಶನಿವಾರ ಮತ್ತು ಭಾನುವಾರ ಕೂಡ ಕಲಾಪ ನಡೆಸುತ್ತಿವೆ. ಒಟ್ಟು 47 ಮಸೂದೆಗಳು ಎರಡೂ ಸದನಗಳಲ್ಲಿ ಮಂಡಿಸಿ, ಚರ್ಚೆಯಾಗಬೇಕಿತ್ತು. ಆದರೆ ಈ ಬಾರಿ ಎಲ್ಲ ಮಸೂದೆಗಳೂ ಮಂಡನೆಯಾಗುವುದು ಅನುಮಾನ. ಸೆ. 14ರಂದು ಆರಂಭವಾದ ಮುಂಗಾರು ಅಧಿವೇಶನವು ಅ. 1ಕ್ಕೆ ಮುಕ್ತಾಯಗೊಳ್ಳುವಂತೆ ನಿಗದಿಗೊಳಿಸಲಾಗಿದೆ.
Recommended Video
ಮಸೂದೆ ಚರ್ಚೆ ವೇಳೆ ಸಚಿವರೊಂದಿಗೆ ಹಾಜರಾಗುವ ಅಧಿಕಾರಿಗಳು ಸಂಸತ್ ಸಂಕೀರ್ಣ ಪ್ರವೇಶಿಸುವ 72 ಗಂಟೆಗಳ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆಗಳಿಂದ ನೆಗೆಟಿವ್ ಇರುವ ವರದಿಯನ್ನು ನೀಡಬೇಕು ಎಂದು ರಾಜ್ಯಸಭೆ ಮತ್ತು ಲೋಕಸಭೆ ವಾರ್ತಾಪತ್ರಗಳಲ್ಲಿ ಸೂಚನೆ ನೀಡಲಾಗಿದೆ.