ಚೀನಾದಿಂದ ಲಡಾಖ್ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 15: ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಎರಡೂ ದೇಶಗಳ ಗ್ರಹಿಕೆ ಬೇರೆ ಬೇರೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಎರಡನೆಯ ದಿನದ ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತ ಹಾಗೂ ಚೀನಾ ಸಂಘರ್ಷದ ಕುರಿತು ಸುದೀರ್ಘ ಭಾಷಣ ಮಾಡಿದರು. ಉಭಯ ದೇಶಗಳ ನಡುವೆ ನಡೆದ ಶಾಂತಿ ಸ್ಥಾಪನೆ ಪ್ರಯತ್ನಗಳ ಬಗ್ಗೆ ಹಾಗೂ ಉದ್ವಿಗ್ನತೆಯ ಕುರಿತು ಮಾಹಿತಿ ನೀಡಿದರು.
ವಿಶ್ವಸಂಸ್ಥೆ: ಚೀನಾವನ್ನು ಸೋಲಿಸಿ ಪ್ರತಿಷ್ಠಿತ ಸದಸ್ಯತ್ವ ಪಡೆದ ಭಾರತ
ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್ಎಸಿ) ನಿಖರವಾಗಿ ಗುರುತಿಸಿಲ್ಲ ಎಂದೇ ಚೀನಾ ನಂಬಿದೆ. ಎಲ್ಎಸಿ ವಿವಾದಕ್ಕೆ ಸಂಬಂಧಿಸಿದಂತೆ ನಾವು ಶಾಂತಿಯುತ ಪರಿಹಾರವನ್ನು ಬಯಸಿದ್ದೇವೆ. ಭಾರತ ಮತ್ತು ಚೀನಾ ಎರಡೂ ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಕೊಂಡಿವೆ ಎಂಬುದನ್ನು ತಿಳಿಸಲು ಇಚ್ಛಿಸುತ್ತೇನೆ. ಎಲ್ಎಸಿಯಲ್ಲಿನ ಎಲ್ಲ ಚಟುವಟಿಕೆಗಳೂ ಎರಡೂ ದೇಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು. ಮುಂದೆ ಓದಿ...
ಚೀನಾಕ್ಕೆ ಎಚ್ಚರಿಕೆ
ಭಾರತ ಹಾಗೂ ಚೀನಾ ದೇಶಗಳ ಎಲ್ಎಸಿ ಗ್ರಹಿಕೆ ವಿಭಿನ್ನವಾಗಿದೆ. ಸರ್ಕಾರವು ವಿಭಿನ್ನ ಗುಪ್ತಚರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಏಪ್ರಿಲ್ನಿಂದಲೂ ಚೀನಾ ಗಡಿಯಲ್ಲಿ ಸೈನಿಕರನ್ನು ಹಾಗೂ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿದೆ. ರಾಜತಾಂತ್ರಿಕ ಹಾಗೂ ಸೇನಾ ಕ್ರಮಗಳ ಮೂಲಕ ಚೀನಾಕ್ಕೆ ಭಾರತ ಯಶಸ್ವಿಯಾಗಿ ಎಚ್ಚರಿಕೆ ನೀಡಿದೆ ಎಂದರು.
ಎಲ್ಎಸಿಯನ್ನು ಚೀನಾ ಗುರುತಿಸುತ್ತಿಲ್ಲ
ಚೀನಾವು ಸಾಂಪ್ರದಾಯಿಕ ಹಾಗೂ ಪರಂಪರೆಯ ಗಡಿ ಹೊಂದಾಣಿಕೆಯನ್ನು ಗುರುತಿಸುತ್ತಿಲ್ಲ. ನಾವು ಭೌಗೋಳಿಕ ರಚನೆಯ ಆಧಾರದಲ್ಲಿ ಈ ಗಡಿ ವ್ಯವಸ್ಥೆಯನ್ನು ಗುರುತಿಸಿದ್ದೇವೆ. ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿ ಯಥಾಸ್ಥಿತಿಯನ್ನು ಬದಲಿಸುವ ಏಕಪಕ್ಷೀಯ ಪ್ರಯತ್ನಗಳ ಬಗ್ಗೆ ಚೀನಾಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ತೀಕ್ಷ್ಣವಾಗಿ ಉತ್ತರ ನೀಡಿದ್ದೇವೆ. ಭಾರತ ಮತ್ತು ಚೀನಾ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು.
ಭಾರತದ ಮೇಲೆ ಚೀನಿ ಗ್ಯಾಂಗ್ನ ಸೈಬರ್ ಯುದ್ಧ
ತಿರುಗೇಟು ನೀಡಿದ್ದೇವೆ
ಗಡಿಯಲ್ಲಿ ಚೀನಾ ನಡೆಸಿದ ಹಿಂಸಾಚಾರಗಳು ಈ ಹಿಂದಿನ ಎಲ್ಲ ಒಪ್ಪಂದಗಳ ಉಲ್ಲಂಘನೆ. ನಮ್ಮ ಗಡಿಯನ್ನು ರಕ್ಷಿಸುವ ಸಲುವಾಗಿ ಸೇನಾ ಪಡೆಗಳು ಪ್ರತಿ ಚಟುವಟಿಕೆಗಳನ್ನು ಮಾಡಿದೆ. ಚೀನಾವು ಎಲ್ಎಸಿ ಉದ್ದಕ್ಕೂ ಹಾಗೂ ಒಳಭಾಗದಲ್ಲಿ ಅಪಾರ ಪ್ರಮಾಣದ ಸೇನಾ ಬೆಟಾಲಿಯನ್ಗಳನ್ನು ನಿಯೋಜಿಸಿದೆ. ಪೂರ್ವ ಲಡಾಖ್, ಗೊಗ್ರಾ, ಕೊಂಗ್ಕಾ ಲಾ, ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಲ್ಲಿ ತಿಕ್ಕಾಟದ ಸ್ಥಳಗಳಿವೆ. ಭಾರತೀಯ ಸೇನೆಯು ಈ ಸ್ಥಳಗಳಲ್ಲಿ ಎದಿರೇಟು ನೀಡಿವೆ. ನಾವು ಯಾವುದೇ ಸನ್ನಿವೇಶ ಎದುರಿಸಲೂ ಸಿದ್ಧವಾಗಿದ್ದೇವೆ ಎಂದು ಹೇಳಿದರು.
38,000 ಚದರ ಕಿಮೀ ಆಕ್ರಮಣ
1960ರಿಂದಲೂ ಗಡಿ ವಿಚಾರವಾಗಿ ಯಾವುದೇ ಒಪ್ಪಂದವಿಲ್ಲ. ಈ ವಿಚಾರವನ್ನು ಬಗೆಹರಿಸಲು ನಮಗೆ ತಾಳ್ಮೆ ಬೇಕು. ಶಾಂತಿ ಹಾಗೂ ನೆಮ್ಮದಿ ಮುಖ್ಯವಾಗಿದ್ದು, ಅದಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಲಡಾಖ್ನಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ. ಭೂಮಿಯನ್ನು ಅತಿಕ್ರಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ 5,000 ಚದರ ಕಿಮೀಗೂ ಹೆಚ್ಚು ಪ್ರದೇಶ ಬಿಟ್ಟುಕೊಟ್ಟಿದೆ. ಅರುಣಾಚಲ ಪ್ರದೇಶವೂ ತನ್ನದೆಂದು ಹೇಳುತ್ತಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾದರೆ ದ್ವಿಪಕ್ಷೀಯ ಸಂಬಂಧ ಹದಗಡೆಲಿದೆ ಎಂದು ರಾಜನಾಥ್ ತಿಳಿಸಿದರು.
ಭೂತಾನ್ನ ಮತ್ತಷ್ಟು ಪ್ರದೇಶ ಆಕ್ರಮಿಸುತ್ತಿದೆ ಚೀನಾ
ಸೈನಿಕರಿಗೆ ಬೆಂಬಲ ನೀಡಿ
ಭಾರತದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡಲು ಗಡಿಯಲ್ಲಿ ಕಾವಲು ಕಾಯುತ್ತಿರುವ ನಮ್ಮ ಸಶಸ್ತ್ರ ಪಡೆಯ ಯೋಧರಿಗೆ ಹೆಗಲಿಗೆ ಹೆಗಲು ನೀಡುವ ನಿರ್ಣಯವನ್ನು ರವಾನಿಸಬೇಕು ಎಂದು ಸದನಕ್ಕೆ ಮನವಿ ಮಾಡುತ್ತೇನೆ. ನಮ್ಮ ಸೇನಾ ಪಡೆಗಳ ನೈತಿಕ ಸಾಮರ್ಥ್ಯ ಉನ್ನತ ಮಟ್ಟದಲ್ಲಿರುತ್ತದೆ. ಅದರ ಬಗ್ಗೆ ಸಂದೇಹ ಬೇಡ. ಪ್ರಧಾನಿ ಲಡಾಖ್ಗೆ ನೀಡಿದ ಭೇಟಿಯು ಭಾರತದ ಜನರು ಸೇನಾ ಪಡೆಗಳ ಹಿಂದೆ ಇದ್ದಾರೆ ಎಂಬ ಸಂದೇಶ ನೀಡಿದೆ ಎಂದರು.
ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲ
ಗಡಿ ನಿರ್ವಹಣೆಯಲ್ಲಿ ನಮ್ಮ ಸೇನೆಯು ಯಾವಾಗಲೂ ಜವಾಬ್ದಾರಿಯುತ ನಡೆ ತೆಗೆದುಕೊಳ್ಳುತ್ತದೆ. ಆದರೆ ಅದೇ ಸಮಯಕ್ಕೆ ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ರಕ್ಷಿಸುವ ನಮ್ಮ ದೃಢ ನಿರ್ಧಾರದ ಬಗ್ಗೆಯೂ ಯಾವುದೇ ಅನುಮಾನ ಬೇಡ ಎಂದು ಚೀನಾ ರಕ್ಷಣಾ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿರುವುದಾಗಿ ತಿಳಿಸಿದರು.