ಮುತ್ಸದ್ಧಿತನದ ಸಂಕೇತ: ಟೀ ಕೊಟ್ಟ ಹರಿವಂಶ್ ಅವರನ್ನು ಕೊಂಡಾಡಿದ ಪ್ರಧಾನಿ ಮೋದಿ
ನವದೆಹಲಿ, ಸೆಪ್ಟೆಂಬರ್ 22: ರಾಜ್ಯಸಭೆಯಲ್ಲಿ ತಮ್ಮ ವಿರುದ್ಧವೇ ದಾಳಿ ನಡೆಸಿ ಗದ್ದಲ ನಡೆಸಿದ ಸಂಸದರಿಗೆ ಸ್ವತಃ ಟೀ ನೀಡಿದ ಉಪಾಧ್ಯಕ್ಷ ಹರಿವಂಶ್ ಸಿಂಗ್ ಅವರ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಮುತ್ಸದ್ಧಿಯೊಬ್ಬರು ತೋರುವ ಸ್ಫೂರ್ತಿದಾಯಕ ನಡೆ ಎಂದು ಅವರು ಕೊಂಡಾಡಿದ್ದಾರೆ.
'ಕೆಲವು ದಿನಗಳ ಹಿಂದೆ ತಮ್ಮ ಮೇಲೆ ದಾಳಿ ನಡೆಸಿದ ಮತ್ತು ಅವಮಾನಿಸಿದವರು ಹಾಗೂ ಧರಣಿ ನಡೆಸುತ್ತಿರುವ ಜನರ ಬಳಿಗೆ ಖುದ್ದಾಗಿ ಹೋಗಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಸಿಂಗ್ ಟೀ ನೀಡಿರುವುದು ಅವರು ಹೃದಯ ವೈಶಾಲ್ಯ ಹಾಗೂ ವಿನಮ್ರತೆಯ ಮನಸ್ಸನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ಅವರ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಹರಿವಂಶ್ ಅವರನ್ನು ಅಭಿನಂದಿಸುವುದಕ್ಕಾಗಿ ನಾನು ದೇಶದ ಜನತೆಯೊಂದಿಗೆ ಸೇರಿಕೊಳ್ಳುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮಸೂದೆ ವಿರುದ್ಧ ಅಹೋರಾತ್ರಿ ಧರಣಿ: ಸಂಸದರಿಗೆ ಟೀ ನೀಡಿದ ರಾಜ್ಯಸಭೆ ಉಪಾಧ್ಯಕ್ಷ
ಭಾನುವಾರ ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದ ಕಾರಣಕ್ಕೆ ಎಂಟು ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಸೋಮವಾರ ಆದೇಶ ಹೊರಡಿಸಿದ್ದರು. ರೈತ ವಿರೋಧಿ ಮಸೂದೆ ವಿರುದ್ಧ ಪ್ರತಿಭಟಿಸುವ ಅಧಿಕಾರ ತಮಗೆ ಇದೆ. ಇಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ಕಾರ ಮಸೂದೆಯನ್ನು ಅಂಗೀಕರಿಸುತ್ತಿದೆ ಎಂದು ಆರೋಪಿಸಿ ಸಂಸದರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮುಂದೆ ಓದಿ...
ಪ್ರಜಾಪ್ರಭುತ್ವವಾದಿಗಳಿಗೆ ಹೆಮ್ಮೆ
'ಶತಮಾನಗಳಿಂದಲೂ ಬಿಹಾರದ ಮಹಾನ್ ಭೂಮಿಯು ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸುತ್ತಾ ಬಂದಿದೆ. ಈ ಅದ್ಭುತ ಸಂಸ್ಕೃತಿಯ ಭಾಗವಾಗಿ ಬಿಹಾರದ ಸಂಸದ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸಿಂಗ್ ಅವರು ಈ ಬೆಳಿಗ್ಗೆ ನಡೆದ ರೀತಿ ಸ್ಫೂರ್ತಿದಾಯಕ ಮತ್ತು ಮುತ್ಸದ್ಧಿತನ ಪ್ರತಿ ಪ್ರಜಾಪ್ರಭುತ್ವ ಪ್ರೇಮಿಗೆ ಹೆಮ್ಮೆ ಉಂಟುಮಾಡುತ್ತದೆ' ಎಂದು ಅವರು ಹೇಳಿದ್ದಾರೆ.
ಬಿಹಾರದ ಹೆಮ್ಮೆಗೆ ಚ್ಯುತಿ
ಹರಿವಂಶ್ ಸಿಂಗ್ ಅವರ ವಿರುದ್ಧ ಸಂಸದರು ನಡೆದುಕೊಂಡ ರೀತಿ 'ಬಿಹಾರದ ಹೆಮ್ಮೆ'ಯ ಮೇಲಿನ ದಾಳಿ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಖಂಡಿಸಿದ್ದಾರೆ. 'ಈ ಘಟನೆಯು ಬಿಹಾರದ ಪ್ರತಿ ಜನತೆಗೂ ನೋವುಂಟುಮಾಡಿದೆ. ಹರಿವಂಶ್ ಅವರಿಗೆ ಬಿಹಾರ ಮತ್ತು ದೇಶದೆಲ್ಲೆಡೆ ಗೌರವವಿದೆ. ಸಂಸತ್ನಲ್ಲಿ ಭಾನುವಾರ ನಡೆದ ಘಟನೆ ಬಿಹಾರದ ಜನತೆ ಮತ್ತು ಹೆಮ್ಮೆಗೆ ಗಾಸಿಯುಂಟುಮಾಡಿದೆ. ಈ ವರ್ತನೆಗೆ ಬಿಹಾರದ ಜನರು ವಿಧಾನಸಭೆ ಚುನಾವಣೆಯಲ್ಲಿ ತೀಕ್ಷ್ಣ ಉತ್ತರ ನೀಡಲಿದ್ದಾರೆ' ಎಂದು ಅವರು ಹೇಳಿದ್ದಾರೆ.
8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ
ಚಿದಂಬರಂ ಆಕ್ರೋಶ
'ಸರ್ಕಾರವು ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಳ್ಳುವ ಜಾಹೀರಾತುಗಳನ್ನು ನೀಡಿದೆ. ಇದರಲ್ಲಿ ಒಂದು ಸಾಲಿದೆ, 'ಒಂದು ದೇಶ ಒಂದು ಮಾರುಕಟ್ಟೆ' ರೈತರಿಗೆ ಸ್ವಾತಂತ್ರ್ಯ ನೀಡಲಿದೆ ಎಂದು. ದೊಡ್ಡ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಸಾವಿರಾರು ರೈತ ಮಾರುಕಟ್ಟೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಈ ಮಸೂದೆಗಳು ಯಾವ ನೆರವು ನೀಡುತ್ತವೆ? ಸಾವಿರಾರು ಮಾರುಕಟ್ಟೆಗಳು ರೈತರಿಗೆ ಸ್ವಾತಂತ್ರ್ಯ ನೀಡಬಲ್ಲವು. ಸರ್ಕಾರವು ಎಂಎಸ್ಪಿ ಖಾತರಿಯನ್ನು ನೀಡುವ ಉದ್ದೇಶ ಹೊಂದಿದ್ದರೆ ಉತ್ಪನ್ನಕ್ಕೆ ಎಂಎಸ್ಪಿಗಿಂತ ಕಡಿಮೆ ದರ ಇರಬಾರದು ಎಂಬ ಅಂಶ ಮಸೂದೆಯಲ್ಲಿ ಏಕಿಲ್ಲ?' ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
2-3 ನಿಮಿಷದಲ್ಲಿ ಏನು ಹೇಳಲು ಸಾಧ್ಯ?
ಸದನದಲ್ಲಿ ನಡೆದ ಘಟನೆಯಿಂದ ಯಾರೂ ಸಂತುಷ್ಟರಾಗಿಲ್ಲ. ತಮ್ಮ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳಲು ಅವಕಾಶ ಬೇಕು ಎಂದು ಜನರು ಬಯಸುತ್ತಿದ್ದಾರೆ. 2-3 ನಿಮಿಷಗಳಲ್ಲಿ ಯಾರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.