ಮಸೂದೆ ವಿರುದ್ಧ ಅಹೋರಾತ್ರಿ ಧರಣಿ: ಸಂಸದರಿಗೆ ಟೀ ನೀಡಿದ ರಾಜ್ಯಸಭೆ ಉಪಾಧ್ಯಕ್ಷ
ನವದೆಹಲಿ, ಸೆಪ್ಟೆಂಬರ್ 22: ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ತಮ್ಮನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಎಂಟು ಸಂಸದರು ಸಂಸತ್ ಭವನದ ಹೊರಗೆ ಸೋಮವಾರ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಭಾನುವಾರ ಅಧಿವೇಶನದ ವೇಳೆ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಸಿಂಗ್ ಅವರು ಕೃಷಿ ಸಂಬಂಧಿ ಮಸೂದೆಗಳನ್ನು ಅಂಗೀಕರಿಸಲು ಅನುವು ಮಾಡಿಕೊಟ್ಟಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ವಿಪಕ್ಷ ಸಂಸದರು ಕಾಗದ ಪತ್ರಗಳನ್ನು ಹರಿದು, ಮೈಕ್ಗಳನ್ನು ಕಿತ್ತೆಸೆದಿದ್ದರು. ಇದರಿಂದ ಸೋಮವಾರದ ಕಲಾಪದ ವೇಳೆ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಎಂಟು ಸದಸ್ಯರನ್ನು ಅಮಾನತುಗೊಳಿಸಿದರು.
8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ
ರೈತರಿಗೆ ಮಾರಕವಾಗುವ ಮಸೂದೆಗಳನ್ನು ಸರಿಯಾಗಿ ಚರ್ಚೆ ಮಾಡಿಲ್ಲ. ಮತ ವಿಭಜನೆಗೂ ಅವಕಾಶ ನೀಡಿಲ್ಲ. ಏಕಪಕ್ಷೀಯವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಸಂಸದರು ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಧರಣಿ ನಡೆಸುತ್ತಿದ್ದಾರೆ. ಮುಂದೆ ಓದಿ...
ಟೀ ಕೊಟ್ಟ ಉಪಾಧ್ಯಕ್ಷ
ತಮ್ಮ ಸುತ್ತಲೂ ಭಿತ್ತಿಪತ್ರಗಳನ್ನು ಅಂಟಿಸಿರುವ ಪ್ರತಿಭಟನಾ ನಿರತರು, ಪ್ಲೇಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಧರಣಿ ನಿರತರನ್ನು ಸಮಾಧಾನಪಡಿಸಲು ಸ್ವತಃ ಹರಿವಂಶ್ ಸಿಂಗ್, ಸ್ಥಳಕ್ಕೆ ತೆರಳಿದ್ದಾರೆ. ಮಂಗಳವಾರ ಬೆಳಿಗ್ಗೆ ಎಂಟು ಮಂದಿಗೂ ಟೀ ಕೊಂಡೊಯ್ದಿದ್ದಾರೆ. ಸಂಸದರೊಂದಿಗೆ ಮಾತುಕತೆ ನಡೆಸಿ ಅವರಿಗೆ ಟೀ ನೀಡಿದ್ದಾರೆ.
ಮಾಧ್ಯಮಕ್ಕೆ ಪೋಸ್ ನೀಡುವ ನಾಟಕ
ಆದರೆ, ಇದು ದೊಡ್ಡ ನಾಟಕ ಎಂದು ಧರಣಿನಿರತ ಸಂಸದರು ಟೀಕಿಸಿದ್ದಾರೆ. 'ಒಬ್ಬ ಸಹೋದ್ಯೋಗಿಯಾಗಿ ಬಂದಿದ್ದೇನೆಯೇ ವಿನಾ, ರಾಜ್ಯಸಭೆ ಉಪಾಧ್ಯಕ್ಷರಾಗಿ ಬಂದಿಲ್ಲ ಎಂದು ಹರಿವಂಶ್ ಸಿಂಗ್ ನಮಗೆ ಹೇಳಿದ್ದಾರೆ. ಅವರು ನಮಗೆ ಟೀ ಮತ್ತು ತಿಂಡಿಯನ್ನು ತಂದಿದ್ದರು. ಆದರೆ ಇದು ಕಣ್ಣೊರೆಸುವ ತಂತ್ರ. ಮಾಧ್ಯಮಗಳ ಜತೆಗೆ ಪೋಸ್ ನೀಡುವ ಸಲುವಾಗಿ ಈ ನಾಟಕ ಮಾಡಿದ್ದಾರೆ' ಎಂದು ಸಂಸದರು ಟೀಕಿಸಿದ್ದಾರೆ.
ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು
ಸರ್ಕಾರದಿಂದ ಒಬ್ಬರೂ ಬಂದಿಲ್ಲ
'ಇಲ್ಲಿ ಹಗಲು ರಾತ್ರಿ ಧರಣಿ ಮಾಡುತ್ತಿದ್ದರೂ ಸರ್ಕಾರದ ಒಬ್ಬರೂ ನಮ್ಮನ್ನು ವಿಚಾರಿಸಲು ಬಂದಿಲ್ಲ. ವಿರೋಧ ಪಕ್ಷಗಳ ಅನೇಕ ಸದಸ್ಯರು ಬಂದು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ವಿರೋಧಿ ಕ್ರಮದ ವಿರುದ್ಧ ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ' ಎಂದು ಕಾಂಗ್ರೆಸ್ ಸಂಸದ ರಿಪುನ್ ಬೋರಾ ತಿಳಿಸಿದ್ದಾರೆ.
ನೀವೇ ಕಾರಣ ಎಂದ ಸಂಸದ
'ಇಂದು ಬೆಳಿಗ್ಗೆ ರಾಜ್ಯಸಭೆ ಉಪಾಧ್ಯಕ್ಷರು ನಮ್ಮನ್ನು ಭೇಟಿಯಾಗಲು ಬಂದಿದ್ದರು. ರಾಜ್ಯಸಭೆಯಲ್ಲಿ ಬಿಜೆಪಿ ಅಲ್ಪಸಂಖ್ಯೆಯಲ್ಲಿದ್ದರೂ ರೈತ ವಿರೋಧಿ ಮಸೂದೆಯನ್ನು ಮತಕ್ಕೆ ಹಾಕದೆಯೇ ಅಂಗೀಕರಿಸಲಾಗಿದೆ. ಇದಕ್ಕೆ ನೀವೂ ಕೂಡ ಹೊಣೆಗಾರರು ಎಂದು ಅವರಿಗೆ ಹೇಳಿದ್ದೇವೆ' ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.