ಕೋವಿಡ್ ಭೀತಿಯ ನಡುವೆ ಲೋಕಸಭೆ ಅಧಿವೇಶನದ ಮೊದಲ ದಿನ ಹೇಗಿತ್ತು?
ನವದೆಹಲಿ, ಸೆಪ್ಟೆಂಬರ್ 14: ಸಂಸತ್ನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನ ಸೋಮವಾರದಿಂದ ಶುರುವಾಗಿದೆ. ಕೊರೊನಾ ವೈರಸ್ ಭೀತಿಯ ಕಾರಣ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ಪ್ರತಿ ಬೆಂಚ್ಗಳಿಗೂ ಗಟ್ಟಿಯಾದ ಪ್ಲೆಕ್ಸಿಗ್ಲಾಸ್ ಶೀಲ್ಡ್ಗಳನ್ನು ಅಳವಡಿಸಲಾಗಿದೆ. ಇದರಿಂದ ಈ ಹಿಂದೆಆರು ಸಂಸದರು ಕೂರಲು ಸಾಧ್ಯವಾಗುತ್ತಿದ್ದ ಒಂದು ಬೆಂಚ್ನಲ್ಲಿ ಈಗ ಮೂರು ಮಂದಿ ಮಾತ್ರವೇ ಕೂರಬಹುದಾಗಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಸತ್ನ ಎರಡೂ ಸದನಗಳಲ್ಲಿ ಸದಸ್ಯರ ಅನುಕೂಲತೆ ಹಾಗೂ ಸುರಕ್ಷತೆಗಾಗಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಪೀಕರ್ ಕೂರುವ ಜಾಗಕ್ಕೂ ಶೀಲ್ಡ್ ಅಳವಡಿಸಲಾಗಿದೆ.
ಕೊರೊನಾ ವೈರಸ್ ಸೋಂಕು ನಿಯಂತ್ರಣದಲ್ಲಿದೆ ಎಂದ ಆರೋಗ್ಯ ಸಚಿವ
ಸೀಟುಗಳ ನಡುವೆ ಅಂತರ ಕಲ್ಪಿಸಲಾಗಿದ್ದು, ಸದನಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಜತೆಗೆ ಆಗಾಗ ಕೈಗಳನ್ನು ಸ್ಯಾನಿಟೈಸ್ ಮಾಡುತ್ತಿರಬೇಕು. ಬಾಗಿಲುಗಳನ್ನು ಮುಟ್ಟುವಂತಿಲ್ಲ. ಹೆಚ್ಚು ವಯಸ್ಸಾದ ಸಂಸದರು ಲೋಕಸಭೆ ಅಧಿವೇಶನದ ಮೊದಲ ದಿನ ಹಾಜರಾಗಿರಲಿಲ್ಲ.
ಇದೇ ಮೊದಲ ಬಾರಿಗೆ ಸಂಸದರು ತಮ್ಮ ಹಾಜರಾತಿಯನ್ನು ಹಾಜರಾತಿ ರಿಜಿಸ್ಟರ್ ಆಪ್ ಮೂಲಕ ನೋಂದಾಯಿಸಿದರು. ಈ ಮುಂದೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲಾಗುತ್ತಿತ್ತು.
ಸಂಸತ್ನ ಮೊದಲ ಅರ್ಧದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ 13 ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಲವು ಸಂಸದರು ಮಾಸ್ಕ್ ಜತೆಗೆ ಫೇಸ್ ಶೀಲ್ಡ್ಗಳನ್ನು ಕೂಡ ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ಚೇಂಬರ್ಗೆ ಆಗಮಿಸುತ್ತಿದ್ದಂತೆ ಬಿಜೆಪಿ ಸಂಸದರು 'ಭಾರತ್ ಮಾತಾಕಿ ಜೈ' ಎಂದು ಘೋಷಣೆ ಕೂಗಿ ಚಪ್ಪಾಳೆ ತಟ್ಟಿದರು.
ಸಂಸತ್ತು ಸೈನಿಕರೊಂದಿಗೆ ದೇಶವಿದೆ ಎಂಬ ಸಂದೇಶ ನೀಡಲಿದೆ: ಪ್ರಧಾನಿ ಭರವಸೆ
ಸ್ಪೀಕರ್ ವೇದಿಕೆಯ ಬಲಭಾಗದ ಟ್ರೆಸರಿ ಬೆಂಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಸೀಟುಗಳನ್ನು ಸಿದ್ಧಪಡಿಸಲಾಗಿತ್ತು. ವಿರೋಧಪಕ್ಷದ ಬೆಂಚುಗಳಲ್ಲಿ ಮೊದಲ ಆಸನಗಳನ್ನು ಡಿಎಂಕೆ ಸಂಸದ ಟಿಆರ್ ಬಾಲು, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರಿಗೆ ಮೀಸಲಿಡಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಅವರ ವಾರ್ಷಿಕ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವುದರಿಂದ ಅವರು ಕಲಾಪಕ್ಕೆ ಹಾಜರಾಗಲಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜಧಾನಿ ದೆಹಲಿಗೆ ಆಗಮಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ವಿರೋಧ ಪಕ್ಷದ ಬೆಂಚಿನ ಎರಡನೆಯ ಸಾಲಿನಲ್ಲಿ ಕುಳಿತಿದ್ದರು.
ಇಂದಿನಿಂದ ಸಂಸತ್ ಅಧಿವೇಶನ: ಮಂಡನೆಯಾಗಲಿರುವ ಮಸೂದೆಗಳು ಯಾವುವು?
Recommended Video
ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಯಾವುದೇ ವಿರಾಮವಿಲ್ಲದೆ ಪಾಳಿಗಳಲ್ಲಿ ನಡೆಯಲಿವೆ. ಸೋಮವಾರ ಲೋಕಸಭೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ನಡೆದಿದ್ದರೆ, ರಾಜ್ಯಸಭೆ 3 ಗಂಟೆಯಿಂದ ಕಲಾಪ ನಡೆಸುತ್ತಿದೆ. ಮಂಗಳವಾರದಿಂದ ರಾಜ್ಯಸಭೆಯು ಬೆಳಿಗ್ಗೆ ನಾಲ್ಕು ಗಂಟೆ ಕಲಾಪ ನಡೆಸಿದರೆ, ಲೋಕಸಭೆ ಸಂಜೆಯ ಅವಧಿಯಲ್ಲಿ ಸೇರಲಿದೆ.