ಕೇಂದ್ರ ಬಜೆಟ್ ಅಧಿವೇಶನ: ಬೆಳಗ್ಗೆ ರಾಜ್ಯಸಭೆ, ಸಂಜೆ ಲೋಕಸಭೆ ಕಲಾಪ
ನವದೆಹಲಿ, ಜನವರಿ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗಿದೆ. ಇದರ ಮಧ್ಯೆ ಜನವರಿ 31 ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೊವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಕೊರೊನಾವೈರಸ್ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಸತ್ ಅನ್ನು ಎರಡು ಪ್ರತ್ಯೇಕ ಪಾಳೆಗಳಲ್ಲಿ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಮೊದಲಾರ್ಧದ 5 ಗಂಟೆಗಳಲ್ಲಿ ರಾಜ್ಯಸಭೆ ಮತ್ತು ದ್ವಿತೀಯಾರ್ಧದ 5 ಗಂಟೆಗಳಲ್ಲಿ ಲೋಕಸಭೆ ಕಲಾಪಗಳು ನಡೆಸಲಿವೆ.
ಕೇಂದ್ರ ಬಜೆಟ್ 2022; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಪ್ರಮುಖ ನಿರೀಕ್ಷೆಗಳೇನು?
ಸಂಸತ್ತಿನ ಕೆಳಮನೆಯ ಅಧಿವೇಶನಗಳ ಸಮಯದಲ್ಲಿ, ಲೋಕಸಭೆ ಮತ್ತು ರಾಜ್ಯಸಭಾ ಚೇಂಬರ್ಗಳು ಮತ್ತು ಅವುಗಳ ಗ್ಯಾಲರಿಗಳನ್ನು COVID-19 ಸಾಂಕ್ರಾಮಿಕ ನಿರ್ಬಂಧಗಳ ದೃಷ್ಟಿಯಿಂದ ಸದಸ್ಯರ ಆಸನಕ್ಕಾಗಿ ಬಳಸಲಾಗುವುದು ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.
ಎರಡು
ಅವಧಿಗಳಲ್ಲಿ
ಸಂಸತ್
ಅಧಿವೇಶನ:
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗಾಗಿ ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಾಗುತ್ತಿದ್ದು, ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಸಂಜೆ 4 ರಿಂದ ರಾತ್ರಿ 9 ರವರೆಗೆ ಲೋಕಸಭೆ ಕಲಾಪಗಳು ನಡೆಯಲಿದೆ. ರಾಜ್ಯಸಭೆಯ ಕಲಾಪದ ನಿಖರವಾದ ಸಮಯವನ್ನು ಇನ್ನೂ ಔಪಚಾರಿಕವಾಗಿ ತಿಳಿಸಬೇಕಾಗಿದ್ದರೂ, ಸಂಸತ್ತಿನ ಮೇಲ್ಮನೆಯು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ವೆಂಕಯ್ಯ ನಾಯ್ಡುರಿಗೆ ಕೊವಿಡ್-19 ಪಾಸಿಟಿವ್:
ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡುರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಅವರು ಹೈದರಾಬಾದ್ನಲ್ಲಿ ಐಸೋಲೇಟ್ ಆಗಿದ್ದಾರೆ. ಈ ಹಿನ್ನೆಲೆ ಸಮಯದ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ರಾಷ್ಟ್ರಪತಿ ಭಾಷಣದೊಂದಿಗೆ ಅಧಿವೇಶನ ಶುರು:
ಜನವರಿ 31 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣದೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತದೆ. ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಸತ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ಆದರೆ ಎರಡನೇ ಅವಧಿಯ ಅಧಿವೇಶನಕ್ಕೆ ಸಮಯ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದು ಬಂದಿದೆ.
2020ರ ಅಧಿವೇಶನ ಮಾದರಿ:
ಕಳೆದ 2020 ರ ಮಾನ್ಸೂನ್ ಅಧಿವೇಶನವನ್ನು ಕೊವಿಡ್ ಪ್ರೋಟೋಕಾಲ್ ಅಡಿಯಲ್ಲಿ ಮೊದಲ ಬಾರಿ ಪೂರ್ಣ ಅಧಿವೇಶನ ನಡೆಸಲಾಗಿತ್ತು. ಆ ದಿನದ ಮೊದಲಾರ್ಧದಲ್ಲಿ ರಾಜ್ಯಸಭೆಯ ಮತ್ತು ದ್ವಿತೀಯಾರ್ಧದಲ್ಲಿ ಲೋಕಸಭೆ ಅಧಿವೇಶನವನ್ನು ನಡೆಸಲಾಗಿತ್ತು. ಈ ಬಾರಿ ನಡೆಸಲಾಗುತ್ತಿರುವ ಬಜೆಟ್ ಅಧಿವೇಶನಕ್ಕೂ 2020ರ ಮಾದರಿಯನ್ನು ಅಳವಡಿಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ.
ಕಳೆದ ವರ್ಷದ ಬಜೆಟ್ ಅಧಿವೇಶನ ಮತ್ತು ಮುಂಗಾರು ಹಾಗೂ ಚಳಿಗಾಲದ ಅಧಿವೇಶನಗಳನ್ನು ಸಾಮಾನ್ಯವಾಗಿ ಎಂದಿನಂತೆ ನಡೆಸಲಾಗಿತ್ತು. ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳ ಸಮಯದಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಅದರ ಬದಲಿಗೆ ಸದಸ್ಯರು ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ಆಯಾ ಸದನಗಳ ಚೇಂಬರ್ ಮತ್ತು ಗ್ಯಾಲರಿಗಳಲ್ಲಿ ಕುಳಿತಿದ್ದರು.
ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
Recommended Video