Union Budget 2023; ಮಂಗಳವಾರ ರಾಷ್ಟ್ರಪತಿಗಳ ಭಾಷಣ
ಲೋಕಸಭೆ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ.
ನವದೆಹಲಿ, ಜನವರಿ 30; ಲೋಕಸಭೆ ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಬುಧವಾರ 2023-24ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ.
ಸೋಮವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದರು. "ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ" ಎಂದರು.
ಬಜೆಟ್ 2023: ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ಏನನ್ನು ನಿರೀಕ್ಷಿಸುತ್ತಾರೆ?
ಬಜೆಟ್ ಅಧಿವೇಶನಕ್ಕೂ ಮುನ್ನ ಸುಗಮ ಕಲಾಪಕ್ಕಾಗಿ ಸಂಪ್ರದಾಯದಂತೆ ಸೋಮವಾರ ಸಂಜೆ ಸಂಸತ್ ಭನನದಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಯಿತು. ಕಾಂಗ್ರೆಸ್ ನಾಯಕರು ಸರ್ವಪಕ್ಷಗಳ ಸಭೆಗೆ ಗೈರಾಗಿದ್ದರು.
Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
ಸಭೆ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ, "ಸಂಸತ್ತಿನ ಸೆಂಟ್ರಲ್ಹಾಲ್ ನಲ್ಲಿ ರಾಷ್ಟ್ರಪತಿ ಮುರ್ಮು ಭಾಷಣದೊಂದಿಗೆ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು" ಎಂದರು.
Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ?
"2023-24ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಬಳಿಕ ರಾಜ್ಯಸಭೆಯಲ್ಲಿ ಬಜೆಟ್ ಮಂಡನೆಯಾಗಲಿದೆ" ಎಂದು ಸಚಿವರು ಮಾಹಿತಿ ನೀಡಿದರು.
ಗುರುವಾರದಿಂದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ ಮೇಲೆ ಚರ್ಚೆ ಆರಂಭವಾಗಲಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರಿಸಲಿದ್ದಾರೆ.
ವಂದನಾ ನಿರ್ಣಯ ಹಾಗೂ ಪ್ರಧಾನಿಗಳ ಉತ್ತರ ಸೇರಿದಂತೆ ಬಜೆಟ್ ಅಧಿವೇಶನದ ಮೊದಲ ಭಾಗದ ಕಾರ್ಯ ಕಲಾಪಗಳು ಫೆಬ್ರವರಿ 13ರ ತನಕ ನಡೆಯಲಿವೆ.
ವಿರಾಮದ ಬಳಿಕ ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 13ರಂದು ಪ್ರಾರಂಭವಾಗಿ ಏಪ್ರಿಲ್ 6ರವರೆಗೆ ನಡೆಯಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನಕ್ಕಾಗಿ ಬೇಡಿಕೆಯ ಕುರಿತು ಚರ್ಚೆ ನಡೆಯಲಿದ್ದು, ಕೇಂದ್ರ ಬಜೆಟ್ ಅನ್ನು ಅಂಗೀಕರಿಸುವ ಕಾರ್ಯಕಲಾಪಗಳು ಈ ಭಾಗದಲ್ಲಿ ಸೇರಿವೆ. ಅಲ್ಲದೇ ಇತರ ಶಾಸಕಾಂಗದ ವ್ಯವಹಾರಗಳು, ವಿಧೇಯಕಗಳ ಮೇಲಿನ ಚರ್ಚೆಯನ್ನು ಸಹ ಸರ್ಕಾರವು ತೆಗೆದುಕೊಳ್ಳಲಿದೆ.
ಸರ್ವ ಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್, ಅರ್ಜುನ, ರಾಮ್ ಮೇಘವಾಲ್ ಮತ್ತು ವಿ. ಮುರಳೀಧರನ್ ಸೇರಿದಂತೆ 27 ಪಕ್ಷದ 37 ನಾಯಕರು ಪಾಲ್ಗೊಂಡಿದ್ದರು.
ಡಿಎಂಕೆ ನಾಯಕ ಟಿ. ಆರ್. ಬಾಲು, ಟಿಎಂಸಿ ನಾಯಕರು, ಸುದೀಪ್ ಬಂಡೋಪಾಧ್ಯಾಯ, ಟಿಆರ್ಎಸ್ನಿಂದ ಕೆ. ಕೇಶವ ರಾವ್, ವೈಎಸ್ಆರ್ ಕಾಂಗ್ರೆಸ್ನಿಂದ ವಿಜಯಸಾಯಿ ರೆಡ್ಡಿ, ನ್ಯಾಷನಲ್ ಕಾನ್ಫರೆನ್ಸ್ನಿಂದ ಫಾರೂಕ್ ಅಬ್ದುಲ್ಲಾ, ಆರ್ಜೆಡಿಯಿಂದ ಪ್ರೊಫೆಸರ್ ಮನೋಜ್ ಝಾ, ಜೆಡಿಯುನ ರಾಮ್ ನಾಥ್ ಠಾಕೂರ್ ಸೇರಿದಂತೆ ಶಿವಸೇನೆ (ಉದ್ಧವ್ ಠಾಕ್ರೆ) ಅವರ ಪರವಾಗಿ ಪ್ರಿಯಾಂಕಾ ಚತುರ್ವೇದಿ ಪ್ರತಿನಿಧಿಸಿದ್ದರು
ಕಾಂಗ್ರೆಸ್ ನಾಯಕರು ಸಭೆಗೆ ಗೈರುಹಾಜರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಇಬ್ಬರೂ ಶ್ರೀನಗರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿರುವ ಕಾರಣ ದೆಹಲಿಯಲ್ಲಿ ನಡೆದ ಸಭೆಗೆ ಗೈರಾಗಿದ್ದಾರೆ.
ಬಜೆಟ್ ಮಂಡನೆ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಬುಧವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿ 9 ರಾಜ್ಯಗಳ ವಿಧಾನಸಭೆ ಚುನಾವಣೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇದೆ. ಆದ್ದರಿಂದ ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳ ನಿರೀಕ್ಷೆ ಇದೆ.