ರಕ್ತಪಾತಕ್ಕಾಗಿ ಕಾದಿರುವ ಪಾಕಿಗಳು; ಭಾರತಕ್ಕೆ ನುಸುಳಲು 100 ಉಗ್ರರು ಸಜ್ಜು
ಶ್ರೀನಗರ, ಆಗಸ್ಟ್ 23: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಕಲಂ 370 ರದ್ದುಗೊಳಿಸಿದ ಭಾರತ ಸರ್ಕಾರದ ವಿರುದ್ಧ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಕಿಡಿಕಾರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ನಡೆ ತಪ್ಪು ಎಂದು ಸಾಬೀತುಪಡಿಸಲು ಇನ್ನಿಲ್ಲದ್ದಂತೆ ಪ್ರಯತ್ನಿಸಿ ವಿಫಲವಾಗುತ್ತಿದೆ. ಈ ನಡುವೆ, ಗಡಿ ಭಾಗದಲ್ಲಿ ಶೀತಲ ಸಮರ ಮುಂದುವರೆಸಿರುವ ಪಾಕಿಸ್ತಾನ, ಈಗ ದೊಡ್ಡ ಮಟ್ಟದ ಸಾಹಸಕ್ಕೆ ಕೈ ಹಾಕಿದೆ.
"ಅಫ್ಘಾನಿಸ್ತಾನದಲ್ಲಿ ಯುದ್ಧ ತರಬೇತಿ ಹೊಂದಿರುವ ಪಾಕ್ ಬೆಂಬಲಿತ 100 ಉಗ್ರರನ್ನು ಭಾರತದೊಳಗೆ ನುಸುಳಿಸುವ ಸುದ್ದಿ ಬಂದಿದೆ" ಎಂದು ಭಾರತೀಯ ಬೇಹುಗಾರಿಕಾ ಪಡೆ ಮಾಹಿತಿ ನೀಡಿದೆ.
ಪಾಕ್ ಆಕ್ರಮಿತ ಕಾಶ್ಮೀರ ಕಣಿವೆಯಲ್ಲಿ ಈಗ ಉಗ್ರರಿಗೆ ಸೂಕ್ತವಾದ ತರಬೇತಿ ಇಲ್ಲ. ಈ ಹಿಂದೆ ಇದ್ದ ದೊಡ್ಡ ಉಗ್ರ ಸಂಘಟನೆಗಳು ಇಬ್ಭಾಗವಾಗಿವೆ. ಸ್ವಯಂಪ್ರೇರಣೆಯಿಂದ ಭಾರತದೊಳಗೆ ಉಗ್ರರನ್ನು ನುಗ್ಗುವಂತೆ ಮಾಡಬಲ್ಲ ಉಗ್ರ ನಾಯಕತ್ವದ ಕೊರತೆ ಇದೆ. ಹೀಗಾಗಿ ಅಫ್ಘಾನಿಸ್ತಾನ ಮೂಲದ ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡಿ, ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸೂಚಿಸಲಾಗಿದೆ.
Recommended Video
"ಪಾಕ್ನಿಂದ ಭಾರತದೊಳಗೆ ನುಸುಳುವ 100ಕ್ಕೂ ಹೆಚ್ಚು ಉಗ್ರರು ಗುಂಪಾಗಿ ಹಂಚಿ ಹೋಗಿ, ಮುಂದಿನ ಕೆಲವು ವಾರಗಳಲ್ಲಿ ಭಾರತದಾದ್ಯಂತ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ" ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಭವಾಲ್ಪುರದಲ್ಲಿರುವ ಜೈಷ್ ಎ ಮೊಹಮ್ಮದ್ನ ಮುಖ್ಯ ಸ್ಥಳದಲ್ಲಿ ಉಗ್ರ ಮೌಲಾನ ಮಸೂದ್ ಅಜರ್ನ ಸಹೋದರ ಮುಫ್ತಿ ರೌಫ್ ಅಸ್ಗರ್ ಭಯೋತ್ಪಾದನಾ ಸಂಘಟನೆಯ ಪ್ರಮುಖ ಉಗ್ರರೊಂದಿಗೆ ಚರ್ಚಿಸಿರುವ ಸುದ್ದಿ ಬಂದಿದೆ. ಆಗಸ್ಟ್ 19 ಹಾಗೂ 20ರಂದು ನಡೆದ ಈ ಸಭೆಯಲ್ಲಿ ಕಣಿವೆ ರಾಜ್ಯದೊಳಗೆ ಉಗ್ರರನ್ನು ನುಸುಳುವಂತೆ ಮಾಡುವುದು ಪ್ರಮುಖ ವಿಷಯವಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮೋದಿ ಸರ್ಕಾರ ಘೋಷಿಸಿದ ಬಳಿಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಪುಲ್ವಾಮಾ ದಾಳಿ ಮಾದರಿಯ ದಾಳಿಗಳು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.