ಭಾರತದೊಳಗೆ ಉಗ್ರರನ್ನು ನುಗ್ಗಿಸಲು ಪಾಕಿಸ್ತಾನದಿಂದ ಕುತಂತ್ರ
ನವದೆಹಲಿ, ಆಗಸ್ಟ್ 9: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನವು ಭಾರತದ ವಿರುದ್ಧ ವಿವಿಧ ತಂತ್ರಗಳನ್ನು ಹೆಣೆಯುತ್ತಿದೆ. ರಾಜತಾಂತ್ರಿಕ, ಆರ್ಥಿಕ ನೀತಿಗಳ ವಿಚಾರದಲ್ಲಿ ಪಾಕಿಸ್ತಾನ ತೆಗೆದುಕೊಳ್ಳುವ ನಿರ್ಧಾರಗಳನ್ನು ಭಾರತದ ಮೇಲೆ ಅಷ್ಟೇನೂ ಪರಿಣಾಮ ಬೀರಲಾರದು. ಹೀಗಾಗಿ ಅದು ಬೇರೊಂದು ಕುಟಿಲ ತಂತ್ರ ಅನುಸರಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಕೆಲವು ಸ್ಥಳೀಯ ಯುವಕರನ್ನು ಪಾಕಿಸ್ತಾನ ಗುರುತಿಸಿದೆ. ಅವರನ್ನು ದೇಶದಲ್ಲಿನ ಉಗ್ರರ ತರಬೇತಿ ಶಿಬಿರಗಳಿಗೆ ಕರೆದೊಯ್ದು ಸೇನಾ ತರಬೇತಿಗಳನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸಾಬೀತುಪಡಿಸಿದ ಇಮ್ರಾನ್ ಖಾನ್!"
ಪಿಓಕೆಯಲ್ಲಿನ ಸುಮಾರು 150-200 ಸ್ಥಳೀಯರನ್ನು ಪಾಕಿಸ್ತಾನವು ಉಗ್ರರ ಕೇಂದ್ರಗಳಲ್ಲಿ ತರಬೇತಿ ನೀಡಲು ಸಾಗಿಸಿದೆ. ಈ ಸ್ಥಳೀಯರು ಭಾರತದ ಗಡಿಯಲ್ಲಿಯೇ ಇರುವುದರಿಂದ ದಾಳಿ ನಡೆಸಲು ಅನುಕೂಲವಾಗುತ್ತದೆ ಎನ್ನುವುದು ಪಾಕಿಸ್ತಾನದ ಸಂಚು. ಈ ಸ್ಥಳೀಯರು ತರಬೇತಿ ಪಡೆದ ಬಳಿಕ ಭಾರತದ ಗಡಿಯೊಳಗೆ ನುಸುಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸಲು, ಉಗ್ರರ ನೆಲೆಗಳನ್ನು ಸ್ಥಾಪಿಸಲು ಮತ್ತು ಸ್ಥಳೀಯರ ಬೆಂಬಲವನ್ನು ಪಡೆದುಕೊಂಡು ಘಟಕಗಳನ್ನು ಆರಂಭಿಸಲು ಅವರು ಸಂಚು ರೂಪಿಸಿದ್ದಾರೆ.
ಭಾರತ ಕಡಲ ತೀರದ ಮೂಲಕ ಪಾಕ್ ಉಗ್ರರ ದಾಳಿ ಸಾಧ್ಯತೆ: ಹೈ ಅಲರ್ಟ್
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯು ಆಂತರಿಕ ಸಮಸ್ಯೆಯಾಗಿದೆ ಎಂದು ಬಿಂಬಿಸಲು ಕಾಶ್ಮೀರಿಗಳನ್ನು ಅದು ಬಳಸಿಕೊಳ್ಳುವ ಗುರಿ ಹೊಂದಿದೆ. ಜತೆಗೆ ಕಣಿವೆ ಪ್ರದೇಶಗಳಲ್ಲಿ ಗುಪ್ತಚರ ಇಲಾಖೆ ಬಲಗೊಂಡು ಸೇನಾ ಕಾರ್ಯಾಚರಣೆಗಳಿಂದಾಗಿ ಉಗ್ರರ ಸಂಖ್ಯೆ ಕಡಿಮೆಯಾಗಿರುವುದರಿಂದ ಉಗ್ರರ ಬಲವನ್ನು ಹೆಚ್ಚಿಸುವುದು ಕೂಡ ಅವರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.