ಶಾಕಿಂಗ್: ಅಫ್ಘಾನ್ ಪಾಸ್ಪೋರ್ಟ್ ಜೊತೆ ಭಾರತೀಯ ವೀಸಾ ಕದ್ದ ಐಎಸ್ಐ!
ಕಾಬೂಲ್, ಆಗಸ್ಟ್ 25: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ ನಂತರ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಕಾಬೂಲ್ನಲ್ಲಿರುವ ಖಾಸಗಿ ಟ್ರಾವೆಲ್ ಏಜೆನ್ಸಿಗೆ ನುಗ್ಗಿದ ವ್ಯಕ್ತಿಯೊಬ್ಬ ಅಫ್ಘಾನ್ ಪಾಸ್ಪೋರ್ಟ್ಗಳ ಜೊತೆಗೆ ಭಾರತದ ವೀಸಾಗಳನ್ನು ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಕಳೆದ ಆಗಸ್ಟ್ 15ರಂದು ಕಾಬೂಲ್ ಗಡಿ ಪ್ರದೇಶಕ್ಕೆ ಮೊದಲು ಲಗ್ಗೆಯಿಟ್ಟ ತಾಲಿಬಾನ್ ಉಗ್ರರು ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದ್ದರು. ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸುವುದಕ್ಕೆ ಪಟ್ಟು ಹಿಡಿದು ಕುಳಿತಿದ್ದರು. ಒಂದು ಕಡೆಯಲ್ಲಿ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನೇ ತೊರೆದು ಹೋದರೆ ಇನ್ನೊಂದು ದಿಕ್ಕಿನಲ್ಲಿ ತಾಲಿಬಾನ್ ಕಾಬೂಲ್ ನಗರಕ್ಕೆ ನುಗ್ಗಿ ಗದ್ದುಗೆಯನ್ನು ತನ್ನದಾಗಿಸಿಕೊಂಡಿತು. ಇದರ ಮಧ್ಯೆ ಪಾಕಿಸ್ತಾನ್ ಗುಪ್ತಚರ ಇಲಾಖೆಯ ವ್ಯಕ್ತಿಯೊಬ್ಬ ತನ್ನ ಕೈಚಳಕ ತೋರಿರುವುದು ಇದೀಗ ಬಟಾಬಯಲಾಗಿದೆ.
ಇ-ವೀಸಾ ಇದ್ದವರಿಗೆ ಮಾತ್ರ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಅವಕಾಶ
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜೊತೆಗೆ ನಂಟು ಹೊಂದಿರುವ ಖಾಸಗಿ ಟ್ರಾವೆಲ್ ಏಜೆನ್ಸಿಗೆ ಕಳೆದ ಆಗಸ್ಟ್ 15 ಮತ್ತು 16ರಂದು ಉರ್ದು ಮಾತನಾಡುವ ವ್ಯಕ್ತಿಯೊಬ್ಬ ನುಗ್ಗಿ ಅಫ್ಘಾನ್ ಪಾಸ್ಪೋರ್ಟ್ಗಳ ಜೊತೆಗೆ ಭಾರತದ ವೀಸಾಗಳನ್ನು ಕದ್ದುಕೊಂಡು ಹೋಗಿದ್ದಾನೆ. ಪಾಕಿಸ್ತಾನ್ ಗುಪ್ತಚರ ಇಲಾಖೆಯ (ಐಎಸ್ಐ) ಜೊತೆಗೆ ಆ ವ್ಯಕ್ತಿ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಐಎಸ್ಐ ಬೆಂಬಲಿತ ಗುಂಪು ಭಾರತೀಯ ವೀಸಾಗಳನ್ನು ಕದಿಯುವುದರ ಹಿಂದೆ ದೊಡ್ಡ ಮಟ್ಟದ ಹುನ್ನಾರ ಅಡಗಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ಎಷ್ಟು ವೀಸಾ ಮತ್ತು ಪಾಸ್ ಪೋರ್ಟ್ ಕಳ್ಳತನವಾಗಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ಭಯೋತ್ಪಾದಕರಿಂದ ಭಾರತದ ವೀಸಾ ದುರುಪಯೋಗ
"ಎಷ್ಟು ಪಾಸ್ಪೋರ್ಟ್ಗಳನ್ನು ಕದ್ದುಕೊಂಡು ಹೋಗಲಾಗಿದೆ ಎಂಬುದರ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭದ್ರತಾ ಸಿಬ್ಬಂದಿಯು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲ ಅಫ್ಘಾನ್ ಪಾಸ್ಪೋರ್ಟ್ಗಳ ಜೊತೆಗೆ ಭಾರತ ವೀಸಾಗಳಿದ್ದು ಭಯೋತ್ಪಾದಕರು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿರುತ್ತದೆ," ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಫ್ಘಾನಿಸ್ತಾನದಿಂದ ಸ್ಥಳಾಂತರ ಕಾರ್ಯಾಚರಣೆ ವೇಳೆ ಈ ಬೆಳವಣಿಗೆ
ತಾಲಿಬಾನ್ ಉಗ್ರರ ಮುಷ್ಠಿಯಿಂದ ಪಾರಾಗಲು ಸಾವಿರಾರು ಅಫ್ಘನ್ನರು ಹಾತೊರೆಯುತ್ತಿದ್ದಾರೆ. ಜೀವ ಕೈಯಲ್ಲಿ ಹಿಡಿದು ಕುಳಿತಿರುವ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆ, ಏರ್ ಇಂಡಿಯಾ, ಭಾರತೀಯ ರಾಜತಾಂತ್ರಿಕರು ಹಾಗೂ ಭದ್ರತಾ ಏಜೆನ್ಸಿಗಳೊಂದಿಗೆ ಸೇರಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಫ್ಘನ್ನರಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ರಕ್ಷಣಾ ಕಾರ್ಯಾಚರಣೆ ಮೂಲಕ 800 ಜನರ ಸ್ಥಳಾಂತರ
ಭಾರತೀಯ ವಾಯುಪಡೆಯ ಸಿ-17 ವಿಮಾನಗಳ ಮೂಲಕ 800ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಯುಎಸ್ ಸೇರಿದಂತೆ ಹಲವು ದೇಶಗಳೊಂದಿಗೆ ಸಹಭಾಗಿತ್ವದಲ್ಲಿ ಕಾಬೂಲ್ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಬೂಲ್ನ ಭದ್ರತೆಯನ್ನು ಹಕ್ಕಾನಿ ನೆಟ್ವರ್ಕ್ ವಹಿಸಿಕೊಂಡಿದ್ದು, ಇದು ಬಹಳ ಹಿಂದಿನಿಂದಲೂ ಪಾಕಿಸ್ತಾನದ ಪ್ರತಿನಿಧಿಯಾಗಿದೆ.
"ಆಪರೇಷನ್ ದೇವಿ ಶಕ್ತಿ" ಕಾರ್ಯಾಚರಣೆ
ತಾಲಿಬಾನ್ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಫ್ಘಾನ್ ಪಾಲುದಾರರನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ "ಆಪರೇಷನ್ ದೇವಿ ಶಕ್ತಿ"ಗೆ ಅನ್ನು ಘೋಷಿಸಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. "ಮಂಗಳವಾರ ದೆಹಲಿಗೆ 78 ಪ್ರಯಾಣಿಕರನ್ನು ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಹೇಳಿದ್ದಾರೆ. ಈ ಹಿನ್ನೆಲೆ ಪ್ರತಿನಿತ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಎರಡು ವಿಮಾನಗಳನ್ನು ಬಿಡಲಾಗುತ್ತಿದೆ.
"ಆಪ್ ದೇವಿ ಶಕ್ತಿ ಮುಂದುವರಿಸಲಾಗುತ್ತಿದೆ. ಕಾಬೂಲ್ ನಿಂದ 78 ಸ್ಥಳಾಂತರಿಸುವವರು ದುಶಾನ್ಬೆ ಮೂಲಕ ಆಗಮಿಸುತ್ತಾರೆ. ಭಾರತೀಯ ವಾಯುಸೇನೆ, ಏರ್ ಇಂಡಿಯಾ ಮತ್ತು TeMMEA ಅವಿರತ ಪ್ರಯತ್ನಕ್ಕೆ ಧನ್ಯವಾದ" ಎಂದು ಜೈಶಂಕರ್ ಹೇಳಿದ್ದಾರೆ. ಅಫ್ಘಾನ್ ರಾಜಧಾನಿ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಒಂದು ದಿನದ ನಂತರ ಆಗಸ್ಟ್ 16ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಮೂಲಕ ಭಾರತವು ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು. ಕಾಬೂಲ್ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಭಾರತವು 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ. ವಿವಿಧ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸಲು ಹರಸಾಹಸ ಪಡುತ್ತಿದೆ.
ಭಾರತದಲ್ಲಿ ಅಫ್ಘಾನಿಸ್ತಾನ್ ವೀಸಾಗಳು ರದ್ದು
ಅಫ್ಘಾನಿಸ್ತಾನ್ ಪ್ರಜೆಗಳಿಗೆ ನೀಡಿರುವ ಎಲ್ಲಾ ಭಾರತೀಯ ವೀಸಾಗಳನ್ನು ಭದ್ರತಾ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿದೆ. "ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾವನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ಎಲ್ಲಾ ಅಫ್ಘಾನ್ ಪ್ರಜೆಗಳು ಇ-ವೀಸಾವನ್ನು ಹೊಂದಿರುವವರು ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು ಎಂದು ನಿರ್ಧರಿಸಲಾಗಿದೆ," ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ತಿಳಿಸಿದೆ.
ಅಫ್ಘಾನ್ ಪ್ರಜೆಗಳ ಕೆಲವು ಪಾಸ್ಪೋರ್ಟ್ಗಳು ಕಳೆದು ಹೋಗಿವೆ ಎಂದು ಕೆಲವು ವರದಿಗಳ ಪ್ರಕಟವಾಗಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಭಾರತದಲ್ಲಿ ಇಲ್ಲದ ಎಲ್ಲಾ ಅಫ್ಘಾನ್ ಪ್ರಜೆಗಳಿಗೆ ಈ ಹಿಂದೆ ನೀಡಲಾದ ವೀಸಾಗಳು ತಕ್ಷಣದಿಂದ ಜಾರಿಗೆ ಬರುವಂತೆ ಅಸಿಂಧುಗೊಳಿಸಲಾಗಿದೆ. ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಅಪ್ಲಿಕೇಷನ್ ಪೋರ್ಟಲ್ ಮೂಲಕ ತಮ್ಮ ಅಪ್ಲಿಕೇಷನ್ ಭರ್ತಿ ಮಾಡಿ, ಇ-ವೀಸಾ ಪಡೆದುಕೊಳ್ಳಬೇಕು. ಇ-ವೀಸಾಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು www.indianvisaonline.gov.in ವೆಬ್ಸೈಟ್ನಲ್ಲಿ ಇ-ವೀಸಾ ಪಡೆಯಬಹುದು.
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಮುಚ್ಚಿದ ನಂತರ ಭಾರತವು ಅಫ್ಘಾನ್ ಪ್ರಜೆಗಳಿಗಾಗಿ ಇ-ವೀಸಾ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿರುವುದರ ನಡುವೆ ಹಿಂದೆ ಅಫ್ಘಾನ್ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಹಲವಾರು ಅಫ್ಘಾನ್ ಪ್ರಜೆಗಳಿಗೆ ಆಶ್ರಯ ನೀಡುವಂತೆ ಭಾರತದ ಸಹಾಯ ಕೋರಲಾಗಿದೆ. ಭಾರತ ಸರ್ಕಾರವು ಈಗಾಗಲೇ ಅಫ್ಘಾನ್ ಪ್ರಜೆಗಳಿಂದ 15,000 ಕ್ಕೂ ಹೆಚ್ಚು ಇ-ವೀಸಾ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ತಾಲಿಬಾನ್ ಉಗ್ರ ಸಂಘಟನೆ ಮತ್ತು ಅಫ್ಘಾನಿಸ್ತಾನ ಹಿಡಿತ
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಅದಾಗಿ 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸುತ್ತಿದ್ದಾರೆ. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿರುವ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯುವುದಕ್ಕಾಗಿ ಹವಣಿಸುತ್ತಿದ್ದಾರೆ.
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.