ಜಾಧವ್ ತಾಯಿಗೆ ಅವಮಾನ : ಪಾಕ್ ವಿರುದ್ಧ ಸುಷ್ಮಾ ಕೆಂಡ
ನವದೆಹಲಿ, ಡಿಸೆಂಬರ್ 28 : "ಒಬ್ಬ ತಾಯಿ ಮತ್ತು ಜೈಲಿನಲ್ಲಿರುವ ಮಗ, ಹೆಂಡತಿ ಮತ್ತು ಗಂಡನ ನಡುವಿನ ಭಾವನಾತ್ಮಕ ಭೇಟಿಯನ್ನು ಪಾಕಿಸ್ತಾನ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಅವರಿಬ್ಬರನ್ನು ಪಾಕಿಸ್ತಾನ ಹಿಂಸಿಸಿದೆ" ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಯಲ್ಲಿ ಕೆಂಡ ಕಾರಿದ್ದಾರೆ.
ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿ
ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಾಗ, ಜಾಧವ್ ಅವರ ತಾಯಿ ಅವಂತಿ ಜಾಧವ್ ಮತ್ತು ಹೆಂಡತಿಯನ್ನು ಭದ್ರತೆಯ ಹೆಸರಿನಲ್ಲಿ ಅವಮಾನ ಮಾಡಲಾಗಿದೆ, ಅಲ್ಲಿನ ಮಾಧ್ಯಮ ಬೇಕಾಬಿಟ್ಟಿ ಘೋಷಣೆಗಳನ್ನು ಕೂಗಿ ಅವರಿಬ್ಬರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದೆ. ಇದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಕೃತ್ಯದ ವಿರುದ್ಧ ಮೊದಲ ಬಾರಿ ಸಂಸತ್ತಿನಲ್ಲಿ ಗುರುವಾರ ಹೇಳಿಕೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ಅವಂತಿ ಅವರು ಯಾವಾಗಲೂ ಸೆಲ್ವಾರ್ ಕಮೀಜ್ ಧರಿಸುತ್ತಾರೆ. ಆದರೆ, ಅವರಿಗೆ ಸೀರೆ ಉಡಲು ಬಲಾತ್ಕಾರ ಮಾಡಲಾಗಿದೆ. ಹೆಂಡತಿಯ ಮಂಗಳಸೂತ್ರ, ಬಳೆ, ಸಿಂಧೂರ ತೆಗೆದಿಡಲು ಹೇಳಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಅವಂತಿ ಜಾಧವ್ ಅವರಿಗೆ, ಗೂಢಚಾರಿ ಎಂಬ ಆರೋಪ ಹೊತ್ತಿರುವ ಮಗನೊಂದಿಗೆ ಮರಾಠಿಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ತಡೆ ಒಡ್ಡುತ್ತಲೇ ಇದ್ದರು. ಆದರೂ ಮಾತನ್ನು ಮರಾಠಿಯಲ್ಲೇ ಮುಂದುವರಿಸಿದಾಗ ಇಂಟರ್ಕಾಂ ಅನ್ನು ಕಟ್ ಮಾಡಲಾಯಿತು ಎಂದು ಸುಷ್ಮಾ ವಿವರಣೆ ನೀಡಿದರು.
ಪಾಕಿಸ್ತಾನ ಮಾನವೀಯತೆಯನ್ನು ಗಾಳಿಗೆ ತೂರಿದೆ. ಅವರಲ್ಲಿ ಭಯವನ್ನು ತುಂಬಲಾಗಿದೆ. ಈ ಘಟನೆಯ ನಂತರ ಅವರಿಬ್ಬರೂ ಇನ್ನೂ ಚೇತರಿಸಿಕೊಂಡಿಲ್ಲ. ಇದು ಮಾತ್ರವಲ್ಲ, ಕುಲಭೂಷಣ್ ಅವರ ಹೆಂಡತಿಯ ಪಾದರಕ್ಷೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸ್ಪೈ ಕ್ಯಾಮೆರಾ ಅಥವಾ ರೆಕಾರ್ಡರ್ ಇರಬಹುದು ಎಂದು ಅನಗತ್ಯವಾಗಿ ದೂರಲಾಗಿದೆ. ಇದಕ್ಕಿಂತ ಅಸಂಬದ್ಧವಾದದ್ದು ಮತ್ತೊಂದಿಲ್ಲ ಎಂದು ಸುಷ್ಮಾ ದೂರಿದರು.