ಕಾಶ್ಮೀರದಲ್ಲಿ ಹಿಂಸಾಚಾರ: ಗುಪ್ತಚರ ಇಲಾಖೆಯ ಸ್ಪೋಟಕ ಮಾಹಿತಿ
ಕಾಶ್ಮೀರ, ಜುಲೈ 15: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪೋಸ್ಟರ್ ಬಾಯ್ ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಇದುವರೆಗೆ 35 ಜನ ಸಾವನ್ನಪ್ಪಿದ್ದು, 1400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಈ ನಡುವೆ ಗುಪ್ತಚರ ಇಲಾಖೆ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದು, ಕಾಶ್ಮೀರದಲ್ಲಿ ಹಿಂಸಾಚಾರವನ್ನು ಇನ್ನಷ್ಟು ಹೆಚ್ಚಿಸಲು ಉಗ್ರ ಸಂಘಟನೆಗಳಿಗೆ ಹವಾಲಾ ಮುಖಾಂತರ 100 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಪಾಕಿಸ್ತಾನ ರವಾನಿಸಿದೆ ಎಂದು ವರದಿ ಮಾಡಿದೆ. (ಫ್ರಾನ್ಸ್ ನಲ್ಲಿ ಉಗ್ರರ ದಾಳಿ, 77 ಸಾವು)
ಕೆಲವು ದಿನಗಳ ಹಿಂದೆ ಕುಲ್ಗಾಂ ಪ್ರದೇಶದ ದಂಬಾಲ್ ಹಂಜಿ ಪೋರಾ ಪೊಲೀಸ್ ಠಾಣೆಗೆ ನುಗ್ಗಿದ್ದ ಕಿಡಿಗೇಡಿಗಳ ಗುಂಪು, ಸುಮಾರು ಎಪ್ಪತ್ತಕ್ಕೂ ಹೆಚ್ಚು ಬಂದೂಕುಗಳನ್ನು ಅಪಹರಿಸಿತ್ತು.
ಕಾಶ್ಮೀರದಲ್ಲಿ ಅಶಾಂತಿ, ಹಿಂಸಾಚಾರ ಮುಂದುವರಿಯುತ್ತಿರಲು ಪ್ರತೀ ವರ್ಷ ಪಾಕಿಸ್ತಾನ ಪ್ರತ್ಯೇಕತಾವಾದಿ ಗುಂಪುಗಳಿಗೆ ಹಣ ಪೂರೈಸುತ್ತಿದೆ. ಸ್ಥಳೀಯರ ಜೊತೆ ತರಬೇತಿ ಪಡೆದ ಉಗ್ರರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆಂದು ಗುಪ್ತಚರ ಇಲಾಖೆ ತಿಳಿಸಿದೆ.
ಐಎಸ್ಐ ಸಂಘಟನೆ, ಹಿಜ್ಬುಲ್ ಕಮಾಂಡರ್ ಸಯ್ಯದ್ ಸಲಾಹುದ್ದೀನ್ ಮತ್ತು ಜಮಾತ್-ಉಲ್-ದವಾ ಸಂಘಟನೆಯ ಹಫೀಜ್ ಸಯೀದ್ ಮೂಲಕ ಹಣ ಒದಗಿಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಲೆಂದೇ ಐಎಸ್ಐ ನಾಲ್ಕು ಕಮಾಂಡರುಗಳನ್ನು ನೇಮಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಲಾಹೋರ್ ನಲ್ಲಿ ಕೂತು ಅಬ್ಬರಿಸಿದ ಹಫೀಜ್ : ಕಾಶ್ಮೀರ ಸಹೋದರರ ಹೋರಾಟ, ಬಲಿದಾನ ವ್ಯರ್ಥ ವಾಗಲು ಬಿಡುವುದಿಲ್ಲ, ಭಾರತಕ್ಕೆ ಮುಂದೈತೆ ಮಾರಿಹಬ್ಬ ಎಂದು ಮುಂಬೈ ದಾಳಿಯ ರೂವಾರಿ ಜಮಾತ್-ಉಲ್-ದವಾ ಸಂಘಟನೆಯ ಹಫೀಜ್ ಸಯೀದ್ ಅಬ್ಬರಿಸಿದ್ದಾನೆ. (21 ವರ್ಷದ ಹಿಜ್ಬುಲ್ ಕಮಾಂಡರ್ ಹತ್ಯೆ)
ಬುರ್ಹಾನ್ ವನಿಯನ್ನು ಭಾರತದ ಸೇನೆ ಸಾಯಿಸಿದೆ. ಕಾಶ್ಮೀರದಲ್ಲಿ ರಕ್ತದೋಕುಳಿ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಲಿದೆ ಎಂದು ಹಫೀಜ್ ಅಂತರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ. (ಚಿತ್ರದಲ್ಲಿ ಹಿಜ್ಬುಲ್ ಸಂಘಟನೆಯ ಸಯ್ಯದ್ ಸಲಾಹುದ್ದೀನ್)