ಪಾಕಿಸ್ತಾನಕ್ಕೆ ನೀರಿಳಿಸಿದ ತಾರೀಕ್ ಫತಾ ಮಾತು ಕೇಳಿದಿರಾ?
ನವದೆಹಲಿ, ಅಕ್ಟೋಬರ್ 4: ತಾರೀಕ್ ಫತಾ-ಇದೊಂದು ಹೆಸರು ಭಾರತದ ಮಾಧ್ಯಮಗಳಲ್ಲಿ ಸದ್ಯಕ್ಕೆ ತುಂಬ ಚಾಲ್ತಿಯಲ್ಲಿರುವ ಹೆಸರು. ಬಲೂಚಿಸ್ತಾನದ ತಾರೀಕ್ ಫತಾ, ಸದ್ಯಕ್ಕೆ ಕೆನಡಾದಲ್ಲಿದ್ದಾರೆ. ಮುಸ್ಲಿಂ ಕೆನಡಿಯನ್ ಕಾಂಗ್ರೆಸ್ ನ ಸ್ಥಾಪಕರು ಹೌದು. ಪಾಕಿಸ್ತಾನ ಹಾಗೂ ಅಲ್ಲಿನ ಸೇನೆಯ ಬಗ್ಗೆ ಫತಾಗೆ ಅಸಾಧ್ಯ ಸಿಟ್ಟಿದೆ.
ಅಂದ ಹಾಗೆ ಪಾಕಿಸ್ತಾನದ ಸೇನೆ, ಪ್ರಧಾನಿ ನವಾಜ್ ಷರೀಫ್, ಇಮ್ರಾನ್ ಖಾನ್ ಬಗ್ಗೆ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಫತಾ ಮಾತನಾಡಿದ ರೀತಿಗೆ ಅವರಿಗೆ ನಿರೀಕ್ಷೆಗೂ ಮೀರಿದ ಸ್ನೇಹಿತರೂ ದೊರಕುವಂತೆ ಮಾಡಿದೆ. ಸದ್ಯಕ್ಕಂತೂ 66 ವರ್ಷದ ಈ ತಾತನಿಗೆ ಭಾರತದಲ್ಲೂ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.[ಹಫೀಜ್ ಸಯೀದ್ ಪಾಕಿಸ್ತಾನದ 'ನಿಜವಾದ ಪ್ರಧಾನಮಂತ್ರಿ']
ಈ ತಾತನ ಮಾತುಗಳನ್ನು ಕೇಳಿದರೆ ಎಂಥವರಿಗೂ ಅಬ್ಬಾ, ಈ ಮನುಷ್ಯನದು ಎಂಥಾ ಗುಂಡಿಗೆ ಎಂದು ಅಚ್ಚರಿ ಪಡುವಂತೆ ಮಾಡುವ ವ್ಯಕ್ತಿತ್ವ ಇವರದು. ಟಿವಿ ಕಾರ್ಯಕ್ರಮದಲ್ಲಿ ತಾರೀಕ್ ಫತಾ ಆಡಿದ ಮಾತುಗಳ ಪೈಕಿ ಹೈಲೈಟ್ ಎನಿಸುವ ಕೆಲವನ್ನು ಆಯ್ದು ಇಲ್ಲಿ ಕೊಡಲಾಗಿದೆ.
ಸಿಗದ ಪ್ರಾಶಸ್ತ್ಯ
ಜಗತ್ತಿನ ಎಂಟನೆ ಅತಿ ದೊಡ್ಡ ನಗರ ಕರಾಚಿಯ ಮೇಯರ್ ಕಳೆದ ಮೂರು ತಿಂಗಳಿಂದ ಜೈಲಲ್ಲಿ ಇದ್ದಾರೆ. ಮಿಲಿಟರಿ ಕಾರ್ಯಾಚರಣೆಯಲ್ಲಿ ಇನ್ನೂರು ಯುವಕರು ನಾಪತ್ತೆಯಾಗಿದ್ದಾರೆ. ಆದರೆ ಭಾರತದ ಮಾಧ್ಯಮಗಳಲ್ಲಿ ಈ ಸುದ್ದಿಗೆ ಪ್ರಾಶಸ್ತ್ಯವಿಲ್ಲ. ನೀವು ಊಹಿಸಿಕೊಳ್ಳಿ: ಅರವಿಂದ್ ಕೇಜ್ರಿವಾಲ್ ಎರಡು ತಿಂಗಳು ದೆಹಲಿ ಜೈಲಲ್ಲಿದ್ದರೂ ಜನರಿಗೆ ಅ ಬಗ್ಗೆ ಗೊತ್ತೇ ಇಲ್ಲ ಅಂದರೆ?
ಎಪ್ಪತ್ತು ವರ್ಷಗಳ ಅತಿಕ್ರಮಣ
ಭಾರತ ದೇಶ ಪಾಕಿಸ್ತಾನದ ಮೇಲೆ ದಾಳಿ ನಡೆಸಿಲ್ಲ. ದಾಳಿ ನಡೆಸಿರುವುದು ಉಗ್ರರ ನೆಲೆಗಳ ಮೇಲೆ. ಅದೂ ಕಳೆದ ಎಪ್ಪತ್ತು ವರ್ಷಗಳಿಂದ ಪಾಕಿಸ್ತಾನ ಅತಿಕ್ರಮಿಸಿರುವ ಜಾಗದಲ್ಲಿ.
ಭಾರತ ಸೇನೆ ಮುಂದುವರಿಯಬೇಕಿತ್ತು
ಕಾರ್ಗಿಲ್ ಯುದ್ಧ ಗೆದ್ದ ಮೇಲೆ ಭಾರತ ಇನ್ನೂ ಮುಂದುವರಿಯಬೇಕಿತ್ತು. ಆದರೆ ವೃತ್ತಿಪರ ಸೇನೆ ಥರ ಪಾಕಿಸ್ತಾನಕ್ಕೆ ಪಾಠ ಕಲಿಸಿ, ಸುಮ್ಮನಾಯಿತು. ಆದರೆ ಪಾಕಿಸ್ತಾನ ಯಾವತ್ತೂ ಪಾಠ ಕಲಿಯಲ್ಲ. ಯಾಕೆಂದರೆ ಅ ದೇಶದ ಸ್ಥಾಪನೆ ಆಗಿರುವುದೇ ಸುಳ್ಳು ಹಾಗೂ ದ್ವೇಷದ ತಳಪಾಯದ ಮೇಲೆ.
ಅದೊಂದು ಮನಸ್ಥಿತಿ
ಪಾಕಿಸ್ತಾನ ಒಂದು ದೇಶವೇ ಅಲ್ಲ. ಅದೊಂದು ಮನಸ್ಥಿತಿ. ಅಫಘಾನಿಸ್ತಾನ ಆಫ್ಘನ್ನರಿಗೆ, ಬಾಂಗ್ಲಾದೇಶ್ ಬೆಂಗಾಲಿಗಳಿಗೆ, ಕಜಕಿಸ್ತಾನ ಕಜಕ್ ರಿಗೆ ಸೇರಿದ್ದು. ಆದರೆ ಪಾಕಿಸ್ತಾನ ಯಾರಿಗೆ ಸೇರಿದ್ದು? ಪಾಕಿಸ್ತಾನ ಅನ್ನೋದು ನಮ್ಮೆಲ್ಲರ ಮೇಲೆ ಮಾಡಿರುವ ಜೋಕ್.
ಪ್ರಧಾನಿಯನ್ನೇ ಬರಹೇಳ್ತಾನೆ
ಒಬ್ಬ ಷರೀಫ್ (ನವಾಜ್) ಇದ್ದಾನೆ. ಕಾರ್ಖಾನೆಗಳನ್ನು ನಡೆಸ್ತಾ, ಬಿರಿಯಾನಿ ತಿಂದುಕೊಂಡು, ಕ್ರಿಕೆಟ್ ನೋಡ್ತಾ ಇದ್ದವನನ್ನು ಜನರಲ್ ಜಿಯಾ ಉಲ್ ಹಕ್ ರಾಜಕೀಯಕ್ಕೆ ಕರೆದುಕೊಂಡು ಬಂದರು. ಆತ ಪಾಕಿಸ್ತಾನದ ಎಲ್ಲ ಆಸ್ತಿ ಗೋರಿಕೊಂಡು ಪಂಜಾಬ್ ಪ್ರಾಂತ್ಯದಲ್ಲೇ ಹಾಕಿದ್ದಾನೆ. ಇನೊಬ್ಬ ಷರೀಫ್ (ಸೇನಾ ಮುಖ್ಯಸ್ಥ) ಇದ್ದಾನೆ. ಅವನು ಬದ್ಮಾಶ್. ಅವನಿಗೆ ಬೇಕಾದಾಗ ಪ್ರಧಾನಿಯನ್ನೇ ತನ್ನ ಬಳಿ ಬರೋಕೆ ಹೇಳ್ತಾನೆ.
ಪಾಕಿಸ್ತಾನಿ ಪಂಜಾಬಿ ಮನಸ್ಥಿತಿ
ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಅಸೀಫ್ ಒಬ್ಬ ಅನಕ್ಷರಸ್ಥ. ಅವನಿಗೆ ಟ್ಯಾಕ್ಟಿಕಲ್ ವೆಪನ್ ಅಂದರೆ ಅರ್ಥ ಏನಾದರೂ ಗೊತ್ತಿದೆಯಾ? ಅವುಗಳೇನಿದ್ದರೂ ಇಪ್ಪತ್ತು ಕಿ,ಮೀ. ದೂರ ತಲುಪಬಹುದು ಅಷ್ಟೇ. ಆತನಿಗೆ ಇದು ಕೂಡ ಗೊತ್ತಿಲ್ಲ. ನಮ್ಮ ದುರದೃಷ್ಟ ಏನೆಂದರೆ ಇಂಥ ಹುಚ್ಚರು ನಮ್ಮ ನೆರೆ ದೇಶದಲ್ಲಿ ಇದ್ದಾರೆ. ಜಗತ್ತಿನಲ್ಲಿ ಇವರೊಬ್ಬರ ಹತ್ತಿರ ಬಿಟ್ಟರೆ ಯಾರ ಹತ್ತಿರವೂ ಅಣ್ವಸ್ತ್ರ ಇಲ್ಲ. ಒಂದು ವೇಳೆ ಭಾರತೀಯ ಸೇನೆ ಪಾಕಿಸ್ತಾನವನ್ನು ಪ್ರವೇಶಿಸಿಬಿಟ್ಟರೆ ಈ ಜನ ತಮ್ಮ ದೇಶದ ಮೇಲೆ ಅಣ್ವಸ್ತ್ರ ಪ್ರಯೋಗಿಸಿ ಬಿಡ್ತಾರೆ. ಇದು ಸಾವಿನ ಭಯದ ಪಾಕಿಸ್ತಾನಿ ಪಂಜಾಬಿ ಮನಸ್ಥಿತಿ.
ಭಾರತೀಯ ಮುಸ್ಲಿಮರು ಅದೃಷ್ಟವಂತರು
ಭಾರತದಲ್ಲಿರುವ ಮುಸ್ಲಿಮರು ನಿಜಕ್ಕೂ ಅದೃಷ್ಟವಂತರು. ಇಲ್ಲಿ ಆರಾಮವಾಗಿ ಉಸಿರಾಡಬಹುದು. ಅವರು ನಂಬೋದು ಅಲ್ಲಾನ ಇಸ್ಲಾಂ ಧರ್ಮವನ್ನೇ ಹೊರತು, ಮುಲ್ಲಾನ ಇಸ್ಲಾಂ ಧರ್ಮವನ್ನಲ್ಲ.
ಮೂರ್ಖ ಇಮ್ರಾನ್ ಖಾನ್
ಹೆಣ್ಣುಮಕ್ಕಳ ಜತೆಗೆ ಸರಸವಾಡಿದನಾ, ಕ್ರಿಕೆಟ್ ಆಡಿದನಾ ಅಂತ ಇಮ್ರಾನ್ ಖಾನ್ ಇದ್ದರೆ ಸಾಕು. ತೀರಾ ಗಂಭೀರವಾದ ವಿಷಯಗಳಿಗೆ ತಲೆ ಹಾಕಬಾರದು. ಈ ಮೂರ್ಖ ಜೀವನ ಪೂರ್ತಿ ಹೆಣ್ಣುಮಕ್ಕಳನ್ನ ಇಂಪ್ರೆಸ್ ಮಾಡೋದಿಕ್ಕಷ್ಟೇ ಪ್ರಯತ್ನ ನಡೆಸಿದ್ದಾನೆ. ಅದರಲ್ಲೂ ಭಾರತೀಯರನ್ನ ಇಂಪ್ರೆಸ್ ಮಾಡೋದಿಕ್ಕೆ ಯತ್ನಿಸಿದ್ದಾನೆ. ಅರವತ್ತೆರಡನೇ ವಯಸ್ಸಿನಲ್ಲೂ ಮದುವೆ ಗಂಡಿನ ಥರ ಕುದುರೆ ಮೇಲೆ ಬರ್ತಾನಲ್ಲ, ಇವನಿಗೆ ನಾಚಿಕೆ ಅಗಲ್ವ? ಇವನೊಬ್ಬ ಪಂಜಾಬಿ, ಪಠಾಣನ ಥರ ಪೋಸ್ ಕೊಡ್ತಾನೆ. ಅದು ಹೇಗೆಂದರೆ ದೆಹಲಿಯ ಮುಷರಫ್ ತಾನು ಪಂಜಾಬಿ ಎಂಬಂತೆ ತೋರಿಸಿಕೊಳ್ತಾನಲ್ಲ ಹಾಗೆ. ಇವೆಲ್ಲ ಮೂರ್ಖತನ. ಇವರಿಗೆ ಜನ ತಮ್ಮನ್ನ ಗುರುತಿಸಲಿ ಎಂಬ ಹುಚ್ಚು.
ಉಗ್ರರ ರಾಜ್ಯಭಾರ
ಹಫೀಜ್ ಸಯೀದ್ ಪಾಕಿಸ್ತಾನದ ನಿಜವಾದ ಪ್ರಧಾನಮಂತ್ರಿ. ಇನ್ನು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪಾಕಿಸ್ತಾನದ ನಿಜವಾದ ರಕ್ಷಣಾ ಸಚಿವ.