"ಪಾಕ್, ಚೀನಾದ ಪ್ರಬಲ ಬೆದರಿಕೆಯನ್ನು ನಿರ್ಲಕ್ಷಿಸುವಂತಿಲ್ಲ"
ನವದೆಹಲಿ, ಜನವರಿ 12: ಭಾರತಕ್ಕೆ ಪಾಕಿಸ್ತಾನ ಹಾಗೂ ಚೀನಾ ಒಟ್ಟಾಗಿ ಪ್ರಬಲ ಬೆದರಿಕೆ ಒಡ್ಡುತ್ತಿವೆ. ಈ ಬೆದರಿಕೆಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಹೇಳಿದ್ದಾರೆ.
ಮಂಗಳವಾರ ಸಭೆಯಲ್ಲಿ ಮಾತನಾಡಿದ ಅವರು, "ಪಾಕಿಸ್ತಾನ ಭಯೋತ್ಪಾದನೆಯನ್ನು ಅಪ್ಪಿಕೊಂಡೇ ಸಾಗುತ್ತಿದೆ. ಆದರೆ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿದೆ. ಈ ಸಂದೇಶವನ್ನು ಹಲವು ದೇಶಗಳಿಗೆ ಸ್ಪಷ್ಟವಾಗಿ ತಲುಪಿಸಿದ್ದೇವೆ ಕೂಡ. ಇದಕ್ಕೆ ನಿಖರ ಪ್ರತ್ಯುತ್ತರ ನೀಡುವ ಹಕ್ಕನ್ನು ಭಾರತ ಹೊಂದಿದೆ. ಅದನ್ನು ಯಾವ ಸಮಯ, ಸಂದರ್ಭದಲ್ಲಿ ಬೇಕಾದರೂ ಬಳಸುತ್ತದೆ" ಎಂದಿದ್ದಾರೆ.
ಚೀನಾ ಜೊತೆಗಿನ ಸಂಘರ್ಷದ ನಡುವೆ ಲೇಹ್ ಗೆ ಸೇನಾ ಮುಖ್ಯಸ್ಥರ ಭೇಟಿ
"ನಮಗೆ ಕಳೆದ ವರ್ಷ ಸವಾಲುಗಳಿಂದ ಕೂಡಿತ್ತು. ಕೊರೊನಾ ಹಾಗೂ ಉತ್ತರ ಗಡಿಗಳಲ್ಲಿನ ಸಮಸ್ಯೆ ದೊಡ್ಡ ಸವಾಲಾಗಿತ್ತು. ಅವುಗಳನ್ನು ಸಮರ್ಥವಾಗಿ ನಿಭಾಯಿಸಿದೆವು. ಉತ್ತರ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಯಿತು. ಹೀಗಾಗಿ ಸವಾಲುಗಳನ್ನು ಮೆಟ್ಟಿ ನಿಂತೆವು" ಎಂದರು.
ಚೀನಾ ಗಡಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅವರು, "ಚೀನಾದೊಂದಿಗೆ ಗಡಿ ಸಮಸ್ಯೆ ಕುರಿತು ಶಾಶ್ವತ ಪರಿಹಾರ ಕೈಗೊಳ್ಳಲು ಶಾಂತಿಯುತ ಮಾರ್ಗದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದೇವೆ" ಎಂದು ತಿಳಿಸಿದರು.
ಚೀನಾ ಸೇನೆಯು 10 ಸಾವಿರ ಪಡೆಯೊಂದಿಗೆ ಪೂರ್ವ ಲಡಾಖ್ ನ ಗಡಿ ನಿಯಂತ್ರಣ ರೇಖೆಯಿಂದ ಹಿಂದೆ ಸರಿದಿರುವುದು ಪ್ರಮುಖ ಬೆಳವಣಿಗೆ. ಆದರೆ ಪೂರ್ವ ಲಡಾಖ್ ನ ಗಡಿ ರೇಖೆ ಬಳಿ ಚೀನಾ ಹಾಗೂ ಭಾರತ ಸೇನೆಯ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಿದರು. ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಸೇನೆ ರೂಪಿಸಲು ಎಲ್ಲಾ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ನೀಲನಕ್ಷೆಯನ್ನು ತಯಾರಿಸಿದ್ದೇವೆ ಎಂದು ಮಾಹಿತಿ ನೀಡಿದರು.