ಪಾಕ್ ನಲ್ಲಿ ಉಗ್ರರು ಹೆಚ್ಚಾಗುವುದಕ್ಕೂ, ಯೋಗಿ ಆದಿತ್ಯನಾಥ್ ಗೂ ಎಂಥಾ ಸಂಬಂಧ?
ನಾಟ್ಯಬಾರದವನು ರಂಗಸ್ಥಳ ಅಂಕುಡೊಂಕು ಅಂದನಂತೆ, ಹಾಗೆಯೇ, ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಲು ಸಾಧ್ಯವಾಗದ ಪಾಕಿಸ್ತಾನ ಇದಕ್ಕೆಲ್ಲಾ ನೆರೆರಾಷ್ಟ್ರ ಭಾರತ ಕಾರಣ ಎಂದು ವಿಶ್ವಸಂಸ್ಥೆಯಲ್ಲಿ ದೂರಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನವನ್ನು ಬೆಂಡೆತ್ತಿದ ಬೆನ್ನಲ್ಲೇ, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಭಾರತದ ವಿರುದ್ದ ಕಿಡಿಕಾರಿದ್ದಾರೆ.
ವಿಶ್ವಸಂಸ್ಥೆ: ಉಗ್ರರ ನೆರಳಾಗಿರುವ ಪಾಕ್ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿ
ನಮ್ಮ ದೇಶದಲ್ಲಿ ಭಯೋತ್ಪಾದಕ ಕೃತ್ಯ ಹೆಚ್ಚಾಗಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರಣ ಎಂದು ಸುಷ್ಮಾ ಟೀಕೆಯಿಂದ ಬಚಾವ್ ಆಗಲು, ಪಾಕಿಸ್ತಾನ ಬೇಕಾಬಿಟ್ಟಿ ಹೇಳಿಕೆ ನೀಡಿದೆ.
ಪಾಕ್ ಸಚಿವರ ಹೇಳಿಕೆಯ ಬೆನ್ನಲ್ಲೇ, ಹಿಂಸಾತ್ಮಕ ಉಗ್ರವಾದ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಬಹುದೊಡ್ಡ ಪಾಲುದಾರ ರಾಷ್ಟವಾಗಿ ಭಾರತ ಹೊರಹೊಮ್ಮಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೆರಿಸ್ ಹೇಳಿರುವುದು, ಪಾಕಿಸ್ತಾನವನ್ನು ಪೇಚಿಗೀಡುಮಾಡಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆ
ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್, ಪಾಕಿಸ್ತಾನದೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದ ಮಾತುಕತೆಯನ್ನು ರದ್ದುಗೊಳಿಸಿದ್ದು ಭಾರತ ಎನ್ನುವ ಪಾಕಿಸ್ತಾನದ ಆರೋಪ ಆಧಾರರಹಿತ, ಇದಕ್ಕೆ ಕಾರಣ ಪಾಕಿಸ್ತಾನವೇ ಹೊರತು ನಾವಲ್ಲ ಎಂದು ಸುಷ್ಮಾ ವಾಗ್ದಾಳಿ ನಡೆಸಿದ್ದರು.
ಸುಷ್ಮಾ ವಿರುದ್ದ ವೈಯಕ್ತಿಕ ದಾಳಿ ನಡೆಸಿದ ಸಚಿವ
ಒಂದು ಹಂತದಲ್ಲಿ ಸುಷ್ಮಾ ವಿರುದ್ದ ವೈಯಕ್ತಿಕ ದಾಳಿ ನಡೆಸಿದ ಪಾಕ್ ವಿದೇಶಾಂಗ ಸಚಿವ, ಭಾರತದ ವಿದೇಶಾಂಗ ಸಚಿವರು ದುರ್ಬಲರಾಗಿರುವುದು ವಿಷಾದನೀಯ, ಇದು ನನಗೆ ಆತಂಕತಂದೊಡ್ಡಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಷ್ಮಾ, ನಿರಂತರ ಎಚ್ಚರಿಕೆಯ ಹೊರತಾಗಿಯೂ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ ಮೊದಲು ಬದಲಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೇಶಾವರದ ಮಿಲಿಟರಿ ಶಾಲೆಯಲ್ಲಿ ನಡೆದ ದಾಳಿಯ ಹಿಂದೆ ಭಾರತ
ಪಾಕ್ ವಿದೇಶಾಂಗ ಸಚಿವರು ಮಾತನಾಡುತ್ತಾ, ಭಾರತ ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಿದೆ. ಪೇಶಾವರದ ಮಿಲಿಟರಿ ಶಾಲೆಯಲ್ಲಿ ನಡೆದ ದಾಳಿಯ ಹಿಂದೆ ಭಾರತದ ಕೈವಾಡವಿದೆ. ಕುಲಭೂಷಣ ಯಾದವ್ ಪ್ರಕರಣವನ್ನು ತನ್ನ ಸಮರ್ಥನೆಗೆ ಬಳಸಿಕೊಂಡ ಪಾಕ್ ಸಚಿವ ಖುರೇಷಿ, ಪೇಶಾವರದ ದಾಳಿಯಲ್ಲಿ ಸುಮಾರು 150 ಮಕ್ಕಳು ಸಾವನ್ನಪ್ಪಿದ್ದರು ಎಂದು ಆರೋಪಿಸಿದ್ದಾರೆ.
ಭಯೋತ್ಪಾದನೆ ಮೂಲೋತ್ಪಾಟನೆಗೆ ಜಾಗತಿಕ ವೇದಿಕೆಯಲ್ಲಿ ಸುಷ್ಮಾ ಧ್ವನಿ
ಯೋಗಿ ಆದಿತ್ಯನಾಥ್ ಮತ್ತು ಆರ್ ಎಸ್ ಎಸ್ ಸಂಘಟನೆ ಕಾರಣ
ಇನ್ನು ವಿಶ್ವಸಂಸ್ಥೆಯಲ್ಲಿ ಪಾಕ್ ರಾಯಭಾರಿಯಾಗಿರುವ ಸಾದ್ ವಾರೈಕ್, ಪಾಕಿಸ್ತಾನದಲ್ಲಿ ಭಯೋತ್ಪಾದಕರ ಕೃತ್ಯ ಹೆಚ್ಚಾಗುತ್ತಿರುವುದಕ್ಕೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಆರ್ ಎಸ್ ಎಸ್ ಸಂಘಟನೆ ಕಾರಣ ಎಂದು ಆರೋಪಿಸಿದ್ದಾರೆ. ಆದಿತ್ಯನಾಥ್ ಅವರ ಕಠಿಣ ಹಿಂದೂ ಪರ ನಿಲುವಿನಿಂದ ಇಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮವೇ ಶ್ರೇಷ್ಠ ಎನ್ನುವ ಪ್ರಚಾರ
ಆರ್ ಎಸ್ ಎಸ್ ಸಂಘಟನೆ ಭಾರತದಲ್ಲಿ ಹಿಂದೂ ಧರ್ಮವೇ ಶ್ರೇಷ್ಠ ಎಂದು ಪ್ರಚಾರ ಮಾಡುತ್ತಿದೆ. ಇಂತಹ ಮತಾಂಧತೆಯ ಕೆಲಸಗಳ ಪರಿಣಾಮ ಪಾಕಿಸ್ತಾನದ ಮೇಲೂ ಬೀರುತ್ತಿದೆ. ಆರ್ ಎಸ್ ಎಸ್ ನಂತೆ ಇಲ್ಲೂ ಕೆಲವು ಸಂಘಟನೆಗಳು ನಮ್ಮ ಧರ್ಮ ಶ್ರೇಷ್ಠ ಎನ್ನುವ ಕೆಲಸವನ್ನು ಮಾಡುತ್ತಿರುವುದರಿಂದ, ಉಪಖಂಡದಲ್ಲಿ ಉಗ್ರರ ಕೃತ್ಯ ಹೆಚ್ಚಾಗುತ್ತಿದೆ ಎಂದು ಸಾದ್ ಆರೋಪಿಸಿದ್ದಾರೆ.
ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡುತ್ತಿದ್ದ ಸುಷ್ಮಾ
ನ್ಯೂಯಾರ್ಕ್ ನಲ್ಲಿ ಶನಿವಾರ (ಸೆ 29) ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡುತ್ತಿದ್ದ ಸುಷ್ಮಾ, ವಾಣಿಜ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದರು. ಜೊತೆಗೆ, ಪಾಕಿಸ್ತಾನ ಉಗ್ರರನ್ನು ಹುಟ್ಟುಹಾಕುವಲ್ಲಿ ಹೇಗೆ ಪರಿಣತಿಯನ್ನು ಹೊಂದಿದೆಯೋ, ಅದೇ ರೀತಿ ಸುಳ್ಳು ಹೇಳುವುದರಲ್ಲಿ, ಉಗ್ರರ ಕೃತ್ಯವನ್ನು ಮರೆಮಾಚುವಲ್ಲೂ ಪರಿಣತಿಯನ್ನು ಪಡೆದಿದೆ ಎಂದು ವ್ಯಂಗ್ಯವಾಡಿದರು.