ಪಾಕ್ ಬೆನ್ನಲ್ಲೇ ಗಡಿ ವಿವಾದ ಸೃಷ್ಟಿಸುತ್ತಿರುವ ಚೀನಾ: ರಾಜನಾಥ್ ಸಿಂಗ್
ನವದೆಹಲಿ, ಅಕ್ಟೋಬರ್.12: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ರೀತಿ ಚೀನಾ ಕೂಡಾ ವಿವಾದ ಸೃಷ್ಟಿಸುವ ನಿಟ್ಟಿನಲ್ಲಿ ಭಾರಿ ಹುನ್ನಾರ ನಡೆಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಅರುಣಾಚಲ ಪ್ರದೇಶ, ಲಡಾಖ್, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಜಮ್ಮು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ಬಿಆರ್ಓ ನಿರ್ಮಿಸಿದ 44 ಸೇತುವೆಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಡಿಗಲ್ಲು ಸ್ಥಾಪನೆಗೊಳಿಸಿ ಮಾತನಾಡಿದರು.
ಭಾರತ-ಚೀನಾ ನಡುವೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ
ಕೇಂದ್ರ ಸರ್ಕಾರವು ಗಡಿಯಲ್ಲಿ ಎದುರಾಳಿಗಳನ್ನು ನಿಯಂತ್ರಿಸುವುದಷ್ಟೇ ಅಲ್ಲದೇ ಗಡಿ ಪ್ರದೇಶಗಳ ಅಭಿವೃದ್ಧಿಗೂ ಒತ್ತು ನೀಡುತ್ತದೆ ಎಂದು ಹೇಳಿದರು. "ಉತ್ತರ ಮತ್ತು ಪೂರ್ವ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಬಗ್ಗೆ ನೀವು ಅರಿತುಕೊಳ್ಳಬೇಕು. ಕಾರ್ಯಾಚರಣೆ ನೆಪದಲ್ಲಿ ಮೊದಲು ಪಾಕಿಸ್ತಾನ ಮತ್ತು ಇದೀಗ ಚೀನಾ ರಾಷ್ಟ್ರಗಳು ವಿವಾದವನ್ನು ಸೃಷ್ಟಿಸುತ್ತಿವೆ. ನಾವು ಉಭಯ ರಾಷ್ಟ್ರಗಳೊಂದಿಗೆ 7000 ಕಿಲೋ ಮೀಟರ್ ಗಡಿರೇಖೆಯನ್ನು ಹೊಂದಿದ್ದು, ವಿವಾದ ಮುಂದುವರಿಯಲಿದೆ" ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಚೀನಾ ಗಡಿಯಲ್ಲಿ ಸೇನಾ ಚಟುವಟಿಕೆ ಚುರುಕು:
ಲಡಾಖ್ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೂಡಾ ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಸೇನಾ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಇದರ ನಡುವೆ ಸೋಮವಾರ ಉಭಯ ರಾಷ್ಟ್ರಗಳ ಸೇನಾ ಕಮಾಂಡರ್ ಹಂತದ 7ನೇ ಸಭೆಯನ್ನು ನಡೆಸಲಾಗಿತ್ತು.
ಅರುಣಾಚಲ ಪ್ರದೇಶದ ನೆಚಿಪು ಟನಲ್ 450 ಮೀಟರ್ ಉದ್ದವಿದ್ದು, ಎಲ್ಲ ಪರಿಸರಗಳಲ್ಲೂ ನೆಚಿಪು ಮಾರ್ಗದ ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 10, ಲಡಾಖ್ ನಲ್ಲಿ 8, ಹಿಮಾಚಲ ಪ್ರದೇಶದಲ್ಲಿ 2, ಪಂಜಾಬ್ ಮತ್ತು ಸಿಕ್ಕಿಂ 4, ಉತ್ತರಾಖಂಡ್ ಮತ್ತು ಅರುಣಾಚಲ ಪ್ರದೇಶದಲ್ಲಿ 8 ಸೇತುವೆಗಳಿಗೆ ಅಡಿಗಲ್ಲು ಸ್ಥಾಪಿಸಲಾಯಿತು.
ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕಳೆದ 2008 ರಿಂದ 2016ರ ಅವಧಿಯಲ್ಲಿ 3300 ರಿಂದ 4600 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, 2020-21ನೇ ಸಾಲಿನಲ್ಲಿ 11000 ಕೋಟಿ ರೂಪಾಯಿ ನೀಡುವುದಕ್ಕೆ ಯೋಜಿಸಲಾಗಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಈ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಕ್ಕೆ ನೀಡಿದ್ದ ಅನುದಾನದಲ್ಲಿ ಯಾವುದೇ ರೀತಿ ಕಡಿತಗೊಳಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.