ಟಿಪ್ಪು ಸುಲ್ತಾನ್ ನಿಮ್ಮ ಹೀರೋ ಅಲ್ಲವೇ ಇಮ್ರಾನ್, ಹಾಗಿದ್ರೆ ಉಗ್ರರನ್ನು ಚೆಂಡಾಡಿ
'ನಾಯಿಬಾಲ ಡೊಂಕು' ಈ ಗಾದೆ ಮಾತಿಗೆ, ವಿಶ್ವದ ಯಾವುದಾದರೂ ಒಂದು ದೇಶದ ಉದಾಹರಣೆಯನ್ನು ಕೊಡಿ ಎಂದು ಕೇಳಿದರೆ ಥಟ್ಟನೆ ಉತ್ತರ ಬರುವುದು ಪಾಕಿಸ್ತಾನ. ಪುಲ್ವಾಮಾ ಘಟನೆಯ ನಂತರ, ಪಾಕಿಸ್ತಾನ ಎನ್ನುವ ಉಗ್ರರು ತುಂಬಿರುವ ನಾಡು, ನಂಬಿಕೆಗೆ ಅರ್ಹವಾದ ದೇಶವಲ್ಲ ಎನ್ನುವುದು ಬಹಳಷ್ಟು ಬಾರಿ ಸಾಬೀತಾಗಿ ಹೋಗಿದೆ.
ಜೊತೆಗೆ, ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯ ವಿಚಾರದಲ್ಲಿ, ನಮ್ಮ ದೇಶದೊಳಗಿರುವ ಪಾಕಿಸ್ತಾನಿ ಪ್ರೇಮಿಗಳು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಲಿಯುಗದಲ್ಲಿ ಅವತರಿಸಿದ ಶಾಂತಿಯ ದೂತನ ಅವತಾರದಲ್ಲಿ ಕಂಡರು.
ಪಾಕ್ ಪ್ರಧಾನಿ ಪಠಿಸಿದ ಶಾಂತಿ ಮಂತ್ರ: ಯಾವ ಆಂಗಲ್ ನಿಂದ ನಗೋಣ!
ಸರ್ಜಿಕಲ್ ಸ್ಟ್ರೈಕ್ - 2 ನಂತರ, ಪಾಕಿಸ್ತಾನದ ವಿರೋಧ ಪಕ್ಷಗಳು, ಆಡಳಿತ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಸದಸ್ಯರು ಮತ್ತು ಪ್ರಧಾನಿ ಇಮ್ರಾನ್ ಅವರಿಗೆ ತುಂಬಿದ ಪಾರ್ಲಿಮೆಂಟ್ ಸಭೆಗೆ ಶೇಮ್ ಶೇಮ್ ಎಂದು ಸ್ವಾಗತಿಸಿದ್ದವು. ಅಲ್ಲಿನ ಸಮಸ್ಯೆ ಏನಂದರೆ, ಪಾಕ್ ಪ್ರಧಾನಿ, ದೇಶದ ಆಯಕಟ್ಟಿನ ಸಚಿವರು, ರಕ್ಷಣಾ ಪಡೆಯ ಮುಖ್ಯಸ್ಥರ ಹೇಳಿಕೆ ಒಂದಕ್ಕೊಂದು ತಾಳೆಯಾಗದೇ ಇರುವುದು.
'ಸದ್ಭಾವನೆ'ಗಾಗಿ ಮಾಜಿ ಪತ್ನಿಯರಿಂದ ಹೊಗಳಿಸಿಕೊಂಡ ಇಮ್ರಾನ್
ಪಾರ್ಲಿಮೆಂಟಿನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ಥೇಟ್ ಶಾಂತಿಯ ಹರಿಕಾರನಂತೆ ಮಾತನಾಡುತ್ತಿದ್ದರು. ನಮಗೆ ಯುದ್ದ ಬೇಡ, ಮೋದಿ ಜೊತೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದರು. ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದ್ದರು. ಆದರೆ, ಗಡಿಭಾಗದಲ್ಲಿ ಪಾಕ್ ಸೈನಿಕರು, ತಮ್ಮ ಉಪದ್ರವ ಮುಂದುವರಿಸುತ್ತಲೇ ಇದ್ದರು.
ನಾವು ಪಾಕಿಸ್ತಾನಿಯರು ಇಬ್ಬರು ರಾಜರ ಚರಿತ್ರೆಯನ್ನು ಓದಿದ್ದೇವೆ
ಜಂಟಿ ಸಭೆಯಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಒಂದು ಹೇಳಿಕೆಯನ್ನು ನೀಡಿದ್ದರು. ಅದೇನಂದರೆ, ನಾವು ಪಾಕಿಸ್ತಾನಿಯರು ಇಬ್ಬರು ರಾಜರ ಚರಿತ್ರೆಯನ್ನು ಓದಿದ್ದೇವೆ. ಒಬ್ಬರು ಬಾದಶಾ ಸುಲ್ತಾನ್ ಜಫರ್ ಇನ್ನೊಬ್ಬರು ಟಿಪ್ಪುಸುಲ್ತಾನ್. ಬ್ರಿಟಿಷರು ಇಬ್ಬರೂ ಆ ರಾಜರಿಗೆ ಗುಲಾಮರಾಗಿತ್ತೀರೋ ಅಥವಾ ಸಾಯುತ್ತೀರೋ ಎನ್ನುವ ಆಯ್ಕೆಯನ್ನು ನೀಡಿತ್ತು. ಜಫರ್ ಗುಲಾಮಗಿರಿಯನ್ನು ಒಪ್ಪಿಕೊಂಡ.
ನಮ್ಮ ನೆಲದ ಹೀರೋ ಟಿಪ್ಪು ಸುಲ್ತಾನ್ ಹೊರತು ಜಫರ್ ಅಲ್ಲ
ಟಿಪ್ಪುಸುಲ್ತಾನ್, ಬ್ರಿಟಿಷರ ಜೊತೆ ಹೋರಾಡಿ ವೀರಮರಣವನ್ನಪ್ಪಿದ. ನಮ್ಮ ನೆಲದ ಹೀರೋ ಟಿಪ್ಪು ಸುಲ್ತಾನ್ ಹೊರತು ಜಫರ್ ಅಲ್ಲ ಎಂದು ಇಮ್ರಾನ್ ಖಾನ್ ಪಾರ್ಲಿಮೆಂಟ್ ನಲ್ಲಿ ಹೇಳಿದ್ದರು. ಆದರೆ, ಟಿಪ್ಪು ಸುಲ್ತಾನ್ ರೀತಿಯಲ್ಲಿ ಪಾಕಿಸ್ತಾನಿಯರು ಇದ್ದಾರಾ? ಟಿಪ್ಪು ಸುಲ್ತಾನ್ ಆಡಳಿತ ಶೈಲಿಯನ್ನು ಇಮ್ರಾನ್ ಫಾಲೋ ಮಾಡುತ್ತಾರಾ? ಪಾಕಿಸ್ತಾನ ಪಡೆಗಳ ಗಡಿ ಉಲ್ಲಂಘನೆ ಮುಂದುವರಿಯುತ್ತಲೇ ಇರುವುದರಿಂದ ಇಂತಹ ಪ್ರಶ್ನೆ ಉದ್ಭವಿಸುವುದು ಸಹಜ.
ಪಾಕ್ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?
ಟಿಪ್ಪು ಹಿಂದೂ ವಿರೋಧಿಗಳು ಎನ್ನುವ ಅಭಿಪ್ರಾಯವೂ ಸಾಕಷ್ಟು ಜನರಲ್ಲಿದೆ
ಟಿಪ್ಪು ಸುಲ್ತಾನ್ ಬಗ್ಗೆ ಪರವಿರೋಧ ಅಭಿಪ್ರಾಯಗಳು ಭಾರತದಲ್ಲಿ ಇದೆ. ಟಿಪ್ಪು ಸಮರ್ಥಿಸಿಕೊಳ್ಳುವವರು ಎಷ್ಟು ಜನ ಇದ್ದಾರೋ, ಅವರು ಹಿಂದೂ ವಿರೋಧಿಗಳು ಎನ್ನುವ ಅಭಿಪ್ರಾಯವೂ ಸಾಕಷ್ಟು ಜನರಲ್ಲಿದೆ. ಅದೇನೇ ಇರಲಿ, ಇಮ್ರಾನ್ ಖಾನ್ ಟಿಪ್ಪುವನ್ನು ಹೀರೋ ಎಂದು ಹೇಳಿರುವವರು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹದಿನೇಳನೇ ಶತಮಾನದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ ಎನ್ನುವುದು ಇತಿಹಾಸ ತಿರುವಿದಾಗ ಸಿಗುವ ಮಾಹಿತಿ.
ಬ್ರಿಟಿಷರನ್ನು ತನ್ನ ದೇಶದೊಳಗಿರುವ ಉಗ್ರರಿಗೆ ಇಮ್ರಾನ್ ಖಾನ್ ಹೋಲಿಕೆ
ಬ್ರಿಟಿಷರನ್ನು ತನ್ನ ದೇಶದೊಳಗಿರುವ ಉಗ್ರರಿಗೆ ಇಮ್ರಾನ್ ಖಾನ್ ಹೋಲಿಸಿದರೆ, ಅವರನ್ನು ಮಟ್ಟಹಾಕುವ ಕೆಲಸ ಇಮ್ರಾನ್ ಖಾನ್ ಅವರಿಂದ ಆಗಬೇಕಿದೆ. ಇಮ್ರಾನ್ ಅಧಿಕಾರ ಸ್ವೀಕರಿಸಿ ಆರೇಳು ತಿಂಗಳು ಮಾತ್ರ ಕಳೆದಿವೆ. ನನ್ನ ಜೀವಿತಾವದಿಯಲ್ಲಿ ಹಲವು ಸಾವುನೋವುಗಳನ್ನು ನೋಡಿದವನು ನಾನು, ಬಾಂಬ್ ಸ್ಪೋಟ ಎನ್ನುವುದು ನನ್ನ ನೆಲದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ ಎನ್ನುವ ಮಾತನ್ನು ಇಮ್ರಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಶಾಂತಿಯ ಮಂತ್ರ ಜಪಿಸುವುದು ಸುಲಭ, ಅನುಷ್ಟಾನಕ್ಕೆ ತರುವುದು ಕಷ್ಟ ಎನ್ನುವುದು ಅವರಿಗೀಗ ಅರಿವಾಗಿರಬಹುದು.
ಹಂದ್ವಾರಾ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ನಲ್ಲಿ 4 ಯೋಧರು ಮತ್ತೆ ಹುತಾತ್ಮ
ಅಭಿನಂದನ್ ಬಿಡುಗಡೆಯಾದ ನಂತರವೂ ಪಾಕಿಸ್ತಾನ ಗಡಿತಂಟೆಗೆ ಬರುತ್ತಲೇ ಇದ್ದಾರೆ. ಹಂದ್ವಾರಾ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ನಲ್ಲಿ ನಾಲ್ಕು ಯೋಧರು ಮತ್ತೆ ಹುತಾತ್ಮರಾಗಿದ್ದಾರೆ. ಸುಮಾರು ನಲವತ್ತಕ್ಕೂ ಹೆಚ್ಚುಬಾರಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ಇದೆಲ್ಲಾ, ಇಮ್ರಾನ್ ಸಂಸತ್ತಿನಲ್ಲಿ ಶಾಂತಿ ಮಂತ್ರ ಜಪಿಸಿದ ನಂತರ ನಡೆದ ಘಟನೆಗಳು. ಹಾಗಿದ್ದರೆ, ತನ್ನದೆ ಸೇನೆಯ ಮೇಲೆ ಅವರಿಗೆ ಕಂಟ್ರೋಲ್ ಇಲ್ಲವೇ? ಟಿಪ್ಪು ಸುಲ್ತಾನ್ ಬರೀ ನಮ್ಮ ಹೀರೋ ಅನ್ನುವುದಲ್ಲ, ಉಗ್ರರನ್ನು ಸದೆಬಡಿಯುವುದಕ್ಕೆ ದಿಟ್ಟ ನಿರ್ಧಾರ ತೆಗೆದುಕೊಂಡರೆ ಮಾತ್ರ ಆ ಟಿಪ್ಪು ಸುಲ್ತಾನ್ ನಿಮ್ಮನ್ನು ಮೆಚ್ಚಬಲ್ಲ.
ಮೈಸೂರಿನ ಸುಲ್ತಾನ್ ಟಿಪ್ಪು ಬಗ್ಗೆ ಮಾತನಾಡುವುದನ್ನು ಬಿಡಲಿ
ಇಮ್ರಾನ್ ಖಾನ್ ಮೈಸೂರಿನ ಸುಲ್ತಾನ್ ಟಿಪ್ಪು ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ದೇಶದಲ್ಲಿ ನೆಲೆ ಕಂಡುಕೊಂಡಿರುವ ಉಗ್ರ ಸಂಘಟನೆಗಳನ್ನು ನಿಯಂತ್ರಿಸಬೇಕು ಎನ್ನುವ ಸಲಹೆಯನ್ನು ಅಸಾದುದ್ದೀನ್ ಓವೈಸಿ ನೀಡಿದ್ದಾರೆ. ಟಿಪ್ಪು ಹಿಂದೂ ವಿರೋಧಿಯಾಗಿರಲಿಲ್ಲ, ತನ್ನ ಎದುರಾಳಿಗಳಿಗೆ ದುಸ್ವಪ್ನವಾಗಿದ್ದ ಎನ್ನುವುದನ್ನು ಖಾನ್ ತಿಳಿದುಕೊಳ್ಳಬೇಕು. ಡೈಲಾಗ್ ಹೊಡೆಯುವುದನ್ನು ಬಿಟ್ಟು, ಮೊದಲು ಉಗ್ರರನ್ನು ಸದೆಬಡಿಯಲಿ ಎಂದು ಓವೈಸಿ, ಇಮ್ರಾನ್ ವಿರುದ್ದ ಕಿಡಿಕಾರಿದ್ದಾರೆ.