ಅಮ್ಮನಂತಿದ್ದ ಪಕ್ಷ ತೊರೆಯಲು ನೋವಾಗುತ್ತಿದೆ - ವೆಂಕಯ್ಯ ನಾಯ್ಡು
ನವದೆಹಲಿ, ಜುಲೈ 18: ಅಪ್ಪಟ ರಾಜಕಾರಣಿ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದಾದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, "ಪಕ್ಷ ತೊರೆಯಲು ನೋವಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಭಾವುಕನಾಗಿದ್ದೇನೆ," ಎಂದು ಹೇಳಿದ್ದಾರೆ.
"ನಾನು ಯುವಕನಾಗಿದ್ದಾಗ ನನ್ನ ತಾಯಿ ತೀರಿಕೊಂಡಿದ್ದರು. ಅಲ್ಲಿಂದ ನಾನು ನನ್ನ ಪಕ್ಷವನ್ನು ಅಮ್ಮ ಎಂದುಕೊಂಡೆ. ಅದು ನನ್ನನ್ನು ಈ ಹಂತಕ್ಕೆ ತಂದು ಮುಟ್ಟಿಸಿದೆ," ಎಂದು ಭಾವುಕರಾಗಿ ನುಡಿದರು.
ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡು
"ನಾನು ಅಂದುಕೊಂಡಿದ್ದೇ ಬೇರೆ ಕೊನೆಗೆ ಆಗಿದ್ದೇ ಬೇರೆ. ಕೊನೆಗೆ ಚರ್ಚೆ ನಡೆಸಿದ ನಂತರ ನಾನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಲು ಒಪ್ಪಿಕೊಂಡೆ. ಇದೀಗ ನಾನು ಬಿಜೆಪಿಯಿಂದ ಹೊರಗೆ ಬಂದಿದ್ದೇನೆ. ನಾನೀಗ ಬಿಜೆಪಿಯವನಲ್ಲ," ಎಂದರು.
"ಕಳೆದ 40 ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವುದು ನನಗೆ ಸಿಕ್ಕರುವ ಗೌರವ ಎಂದು ಭಾವಿಸುತ್ತೇನೆ. ನಾನು ಆಯ್ಕೆಯಾದರೆ ಉಪರಾಷ್ಟ್ರಪತಿ ಹುದ್ದೆಯ ಗೌರವ ಕಾಪಾಡುತ್ತೇನೆ. ಮತ್ತು ಈ ಹಿಂದಿನವರು ಕಾಪಾಡಿಕೊಂಡು ಬಂದ ಈ ಸ್ಥಾನದ ಸಂಪ್ರದಾಯ ಮತ್ತು ಘನತೆಯನ್ನು ಎತ್ತಿ ಹಿಡಿಯುತ್ತೇನೆ," ಎಂದರು.
"ಭಾರತದ ಶಕ್ತಿ ಮತ್ತು ಸೌಂದರ್ಯ ಇರುವದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ಇದನ್ನು ಮತ್ತಷ್ಟು ಬಲಪಡಿಸುವ ಅವಕಾಶ ನನಗೆ ಸಿಕ್ಕಿದೆ. ಉಪರಾಷ್ಟ್ರಪತಿ ಹುದ್ದೆ ವಿಭಿನ್ನವಾದುದು. ಇದರ ಕಾರ್ಯ ನಿರ್ವಹಣೆಯೇ ಬೇರೆ. ನಾನು ಈ ಹುದ್ದೆಗೆ ನ್ಯಾಯ ಕೊಡಬಲ್ಲೆ ಎಂದು ಭಾವಿಸಿದ್ದೇನೆ. ಪ್ರಧಾನಿಯವರಿಗೆ ಧನ್ಯವಾದಗಳು," ಎಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
"ನಾನು ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ಪ್ರಧಾನಿಗಳಿಗೆ ಈ ವಿಷಯ ತಿಳಿಸಿ ನಿನ್ನೆ ರಾತ್ರಿಯೇ ರಾಜೀನಾಮೆ ಪತ್ರ ಕಳುಹಿಸಿದ್ದೇನೆ," ಎಂದು ವೆಂಕಯ್ಯ ನಾಯ್ಡು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ನಾನು ನನ್ನ ಸಹೋದ್ಯೋಗಿಗಳಿಗೆ 2019ರಲ್ಲೂ ಪ್ರಧಾನಿಯಾಗಿ ಮೋದಿಯವರನ್ನು ಕಾಣಬಯಸುತ್ತೇನೆ ಎಂದು ಹೇಳಿದ್ದೇನೆ. ನಂತರ ನಾನು ನಿವೃತ್ತಿ ಪಡೆದುಕೊಂಡು ಸಮಾಜ ಸೇವೆಗೆ ಮಾಡುತ್ತಿರುತ್ತೇನೆ ಎಂದು ವೆಂಕಯ್ಯ ನಾಯ್ಡು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.