ಗುಲಾಂ ನಬಿ ಆಜಾದ್ರಿಗೆ ನೀಡಿದ ಪದ್ಮ ಪ್ರಶಸ್ತಿಯಿಂದ ಕಾಂಗ್ರೆಸ್ನಲ್ಲಿ ಆಂತರಿಕ ಬೆಂಕಿ!?
ನವದೆಹಲಿ, ಜನವರಿ 27: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ರಿಗೆ ಪದ್ಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿರುವುದು ಪಕ್ಷದಲ್ಲಿ ಒಡಕು ಮೂಡಿಸಿದಂತೆ ತೋರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ಒಳಮುನಿಸು ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಹಿರಿಯ ನಾಯಕ ಗುಲಾಂ ನಬಿ ಆಜಾದ್ರಿಗೆ ಪದ್ಮ ಪ್ರಶಸ್ತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಪಕ್ಷದ ಬಹುತೇಕ ನಾಯಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದರ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸುತ್ತಿದೆ.
ವಿಡಿಯೋ; ನಮ್ಮ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ; ಕಪಿಲ್ ಸಿಬಲ್
ಗುಲಾಂ ನಬಿ ಆಜಾದ್ ಕೊಡುಗೆಯನ್ನು ರಾಷ್ಟ್ರ ಗುರುತಿಸುತ್ತಿರುವಾಗ ಕಾಂಗ್ರೆಸ್ಗೆ ಅವರ ಸೇವೆಯ ಅಗತ್ಯವಿಲ್ಲ ಎಂಬುದು ವಿಪರ್ಯಾಸ ಎಂದು ಪಕ್ಷದಲ್ಲಿ ಸಂಘಟನಾತ್ಮಕ ಸುಧಾರಣೆ ಬಯಸುತ್ತಿರುವ ಹಿರಿಯ ನಾಯಕ ಮತ್ತು 23 ನಾಯಕರ ಗುಂಪಿನ ಸದಸ್ಯ ಕಪಿಲ್ ಸಿಬಲ್ ಹೈಕಮಾಂಡ್ ವಿರುದ್ಧ ಬೊಟ್ಟು ಮಾಡಿದ್ದಾರೆ. ಆಜಾದ್ ಅವರಿಗೆ ಪದ್ಮ ಪ್ರಶಸ್ತಿ ನೀಡಿರುವುದನ್ನು ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಗೌರವಿಸಿ ಅಭಿನಂದಿಸುತ್ತಿದ್ದಾರೆ, ಆದರೆ ಇತ್ತ ಇನ್ನೊಂದು ಗುಂಪು ಪ್ರಶಸ್ತಿ ತೆಗೆದುಕೊಳ್ಳಲು ಒಪ್ಪಿಕೊಂಡಿರುವುದನ್ನೇ ಟೀಕಿಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದರಿಂದ ಹಿನ್ನಲೆಯಲ್ಲಿ ಕುದಿಯುತ್ತಿದ್ದ ಆಂತರಿಕ ಬಿಕ್ಕಟ್ಟಿನ ಬೆಂಕಿ ಮತ್ತೆ ಮುನ್ನಲೆಗೆ ಬಂದಂತೆ ಗೋಚರಿಸುತ್ತಿದೆ.
ಕಾಂಗ್ರೆಸ್ ವಿರುದ್ಧ ಬೊಟ್ಟು ಮಾಡಿದ ಕಪಿಲ್ ಸಿಬಲ್
"ಹಿರಿಯ ನಾಯಕ ಗುಲಾಂ ನಬಿ ಆಜಾದ್ರಿಗೆ ಪದ್ಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಭಿನಂದನೆಗಳು ಭಾಯಿಜಾನ್. ದೇಶವು ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವರ ಸೇವೆ ಬೇಕಾಗಿಲ್ಲವೇ," ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕ ಶಶಿ ತರೂರ್, ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಪ್ರಶಸ್ತಿ ನೀಡಿರುವುದಕ್ಕೆ ಅಭಿನಂದಿಸಿದ್ದಾರೆ.
ಗುಲಾಂ ನಬಿ ಆಜಾದ್ ವಿರುದ್ಧ ಆಜಾದಿ ಮಾತು
ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಜೈರಾಮ್ ರಮೇಶ್ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಆಜಾದ್ ಹೆಸರು ಕಾಣಿಸಿಕೊಂಡಿದೆ ಎಂಬ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ ಬೆಳವಣಿಗೆಯನ್ನು ಜೈರಾಮ್ ರಮೇಶ್ ಇದರೊಂದಿಗೆ ಹೋಲಿಕೆ ಮಾಡಿದ್ದಾರೆ. "ಅವರು ಗುಲಾಂ ಅಲ್ಲ, ಆಜಾದ್ ಆಗಲು ಬಯಸುತ್ತಾರೆ, ಹಾಗಾಗಿ ಅವರು ಮಾಡುವುದು ಸರಿಯಾಗಿದೆ," ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಭಟ್ಟಾಚಾರ್ಯ
ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. "ಈ ಪ್ರಶಸ್ತಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ. ಯಾರೂ ಅದರ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ," ಎಂದು ಹಿರಿಯ ಸಿಪಿಐ(ಎಂ) ನಾಯಕ ಬುದ್ಧದೇವ್ ಭಟ್ಟಾಚಾರ್ಯ ಹೇಳಿದ್ದರು.
ಒಟ್ಟು 128 ಸಾಧಕರಿಗೆ ಪದ್ಮ ಪ್ರಶಸ್ತಿ
ದೇಶದ ವಿವಿಧ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಉದ್ದೇಶದಿಂದ 128 ಮಂದಿ ಸಾಧಕರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿತ್ತು. ಜನವರಿ 25ರಂದು ಬಿಡುಗಡೆಯಾದ ಪಟ್ಟಿಯಲ್ಲಿ ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವುದಾಗಿ ಘೋಷಿಸಲಾಗಿತ್ತು.
Recommended Video