ಮಗನ ಬಂಧನಕ್ಕೂ ಮುನ್ನ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು ಚಿದಂಬರಂ!
ನವದೆಹಲಿ, ಮಾರ್ಚ್ 1: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬಂಧನವಾಗಿದೆ. ತಮ್ಮ ಪುತ್ರನ ಬಂಧನಕ್ಕೆ ಕೆಲವೇ ದಿನಗಳ ಮೊದಲು ಚಿದಂಬರಂ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಆದರೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇನ್ನೂ ವಿಚಾರಣೆಗೆ ತೆಗೆದುಕೊಂಡಿರಲಿಲ್ಲ. ವಿಚಾರಣೆಗೆ ಅರ್ಜಿಯನ್ನು ಕೈಗೆತ್ತಿಕೊಳ್ಳುವ ಮುನ್ನವೇ ಅಂದರೆ ಬುಧವಾರ ಲಂಡನ್ ನಿಂದ ಆಗಮಿಸುತ್ತಿದ್ದಂತೆ ಕಾರ್ತಿ ಚಿದಂಬರಂ ಬಂಧನವಾಗಿದೆ.
ತಮ್ಮ ಪುತ್ರ ಕಾರ್ತಿ ಚಿದಂಬರಂ ಮೇಲಿನ ಪ್ರಕರಣವನ್ನು ಚಿದಂಬರಂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಈ ಪ್ರಕರಣದಲ್ಲಿ ಕಾರ್ತಿ ಪರ ಕಪಿಲ್ ಸಿಬಲ್ ರಂಥ ಹಿರಿಯ ವಕೀಲರು ವಾದ ಮಂಡಿಸುತ್ತಿದ್ದರು. ಹೀಗಿರುವಾಗಲೇ ಕಳೆದ ವಾರ ಅವರು ತಮ್ಮ ಮೇಲೆ ಮತ್ತು ತಮ್ಮ ಕುಟುಂಬದ ಮೇಲೆ 'ಸಿಬಿಐ' ಮತ್ತು 'ಇಡಿ' ರಾಜಕೀಯ ಷಡ್ಯಂತ್ರ ರೂಪಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ದರು.
ಮಾತ್ರವಲ್ಲ ಅರ್ಜಿಯಲ್ಲಿ ಅವರು ಇಡಿ ಮತ್ತು ಸಿಬಿಐ ಕಾನೂನು ವಿರೋಧಿ ತನಿಖೆ ನಡೆಸುತ್ತಿದ್ದು ವೈಯಕ್ತಿಕ ಸ್ವಾತಂತ್ರ್ಯ ಹರಣವಾಗಿದೆ. ಈ ರೀತಿ ಕಾನೂನು ವಿರೋಧಿ ತನಿಖೆ ನಡೆಸದಂತೆ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಮತ್ತು ಪದೇ ಪದೇ ದೌರ್ಜನ್ಯ ನಡೆಸದಂತೆ ಸೂಚನೆ ನೀಡಬೇಕು ಎಂದು ಕೋರಿಕೊಂಡಿದ್ದರು.
ಅರ್ಜಿಗೆ ಇದೀಗ ತಿರುಗೇಟು ನೀಡಿರುವ ಸಿಬಿಐ ಕಾರ್ತಿ ಚಿದಂಬರಂರನ್ನು ಬಂಧನ ನಡೆಸಿದೆ.
ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಇಂದು ಕಾರ್ತಿ ಚಿದಂಬರಂ ವಿಚಾರಣೆ
ಕಾರ್ತಿ- ಐಎನ್ಎಕ್ಸ್ ಮೀಡಿಯಾ ಡೀಲ್ ಟೈಮ್ ಲೈನ್