ಏರ್ಸೆಲ್- ಮ್ಯಾಕ್ಸಿಸ್ ಪ್ರಕರಣ: ಬಂಧನ ಭೀತಿಯಿಂದ ಚಿದಂಬರಂ ನಿರಾಳ
ನವದೆಹಲಿ, ಜೂನ್ 5: ಏರ್ಸೆಲ್-ಮ್ಯಾಕ್ಸಿಸ್ ಹಣ ವಂಚನೆ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಜುಲೈ 10ರವರೆಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದ್ದು, ಸದ್ಯಕ್ಕೆ ಬಂಧನ ಭೀತಿ ದೂರವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರತಿಕ್ರಿಯೆ ನೀಡಲು ಜಾರಿ ನಿರ್ದೇಶನಾಲಯ (ಇಡಿ) ನಾಲ್ಕು ವಾರಗಳ ಸಮಯಾವಕಾಶ ಕೋರಿದೆ.
ವಿಚಾರಣೆಗೆ ಹಾಜರಾಗುವಂತೆ ಚಿದಂಬರಂಗೆ 'ಇಡಿ' ನೋಟಿಸ್
ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಪಾಟಿಯಾಲ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ನಿಗದಿಪಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಮಗ, ಕಾರ್ತಿ ಚಿದಂಬರಂ ಅವರ ವಿರುದ್ಧದ ವಿಚಾರಣೆಯೂ ಅದೇ ದಿನ ನಡೆಯಲಿದೆ.
ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಚಿದಂಬರಂ ಅವರು ತಮ್ಮನ್ನು ಬಂಧಿಸದಂತೆ ದೆಹಲಿ ಹೈಕೋರ್ಟ್ ಮೊರೆಹೋಗಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್ ಜೂನ್ 5ರವರೆಗೂ ಅವರನ್ನು ಬಂಧಿಸದಂತೆ ನಿರ್ದೇಶನ ನೀಡಿತ್ತು.
ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೋಮವಾರ ಚಿದಂಬರಂ ಅವರಿಗೆ ಸಮನ್ಸ್ ನೀಡಿತ್ತು.