ಮಧ್ಯಪ್ರದೇಶ : ದೇವಾಲಯದಲ್ಲಿ ಕಾಲ್ತುಳಿತ 60 ಬಲಿ
ಭಾನುವಾರ ಬೆಳಗ್ಗೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ರತ್ನಾಗರ್ ದೇವಾಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರ್ಗಾಪೂಜೆಗೆಂದು ದೇವಾಲಯಕ್ಕೆ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿದ್ದರು. ಈ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ.
ಉತ್ತರಪ್ರದೇಶದಿಂದ ಆಗಮಿಸಿದ್ದ ಯಾತ್ರಿಕರು ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸುತ್ತಾರೆ. ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿದ್ದ ಅವರು, ನದಿಯ ಮೇಲಿನ ಸೇತುವೆ ಕುಸಿದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದರಿಂದ ಜನರು ಓಡಲು ಪ್ರಾರಂಭಿಸಿ ಕಾಲ್ತುಳಿತ ಸಂಭವಿಸಿತು ಎಂದು ಹೇಳಿದ್ದಾರೆ.
ಘಟನೆ ಸಂಭವಿಸುವಾಗ ಸೇತುವೆ ಮೇಲೆ ಸುಮಾರು 25 ಸಾವಿರ ಜನರಿದ್ದರು. ಕೆಲವು ಯಾತ್ರಾರ್ಥಿಗಳು ಕಾಲ್ತುಳಿತಕ್ಕೆ ಸಿಲುಕಿ ನದಿಗೆ ಬಿದಿದ್ದು, ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಾಲ್ತುಳಿತ ತಪ್ಪಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಭಕ್ತಾದಿಗಳು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು ಇದರಿಂದ 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಲಘು ಲಾಠಿ ಪ್ರಹಾರ ನಡೆಸಿ, ಪೊಲೀಸರು ಭಕ್ತಾದಿಗಳನ್ನು ಚದುರಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ನ.25ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಘಟನೆಯ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ, ಮೃತರಿಗೆ ಪರಿಹಾರ ನೀಡವುದಾಗಿ ಮಧ್ಯಪ್ರದೇಶ ಸರ್ಕಾರ ಹೇಳಿಕೆ ನೀಡಿದೆ.
ಘಟನೆಯಲ್ಲಿ ಮೃತಪಟ್ಟವರಿಗೆ 1.5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಚಿಕ್ಕಪುಟ್ಟ ಗಾಯಗಳಾದ ಭಕ್ತಾದಿಗಳಿಗೆ 25 ಸಾವಿರ ಪರಿಹಾರ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ.