ಶೇಕಡಾ 50ಕ್ಕೂ ಹೆಚ್ಚು ಭಾರತೀಯರಿಗೆ ಆಡಳಿತದ ಬಗ್ಗೆ ಸಂತೋಷ: ಸಮೀಕ್ಷೆ
ನವದೆಹಲಿ, ಮಾರ್ಚ್ 26: ಭಾರತವು ಸಾಗುತ್ತಿರುವ ದಿಕ್ಕು ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಬಹುತೇಕ ಭಾರತೀಯರು ಸಂತುಷ್ಟರಾಗಿದ್ದಾರೆ ಎಂಬ ಅಂಶವನ್ನು ಪ್ಯೂ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಆದರೆ ತೃಪ್ತಿಯ ಮಟ್ಟದಲ್ಲಿ ಇಳಿಕೆ ಆಗಿದೆ ಎಂದು ಈ ಸಮೀಕ್ಷೆ ಹೇಳುತ್ತಿದೆ. ಇನ್ನೇನು ಲೋಕಸಭಾ ಚುನಾವಣೆ ಎದುರಿಗಿರುವಾಗ ಈ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾರತದಾ ಅತಿ ದೊಡ್ಡ ಸಮಸ್ಯೆ ಅಂದರೆ ನಿರುದ್ಯೋಗ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ನಾಲ್ವರಲ್ಲಿ ಮೂವರು ಹೇಳಿದ್ದಾರೆ. ಅದು ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಬದಲಾವಣೆ ಆಗಿಲ್ಲ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಸಮೀಕ್ಷೆಯು ಸೋಮವಾರದಂದು ಪ್ರಕಟವಾಗಿದೆ.
ಕಳೆದ ತಿಂಗಳು ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆಯುವ ಮುಂಚಿನಿಂದಲೇ ಭಯೋತ್ಪಾದನೆ ಹಾಗೂ ಪಾಕಿಸ್ತಾನದ ವಿಚಾರವಾಗಿ ಆತಂಕ ಇತ್ತು ಎಂದು ತಿಳಿದುಬಂದಿದೆ. ನಾಲ್ಕನೇ ಮೂರರಷ್ಟು ಭಾರತೀಯರು ಪಾಕಿಸ್ತಾನವನ್ನು ಭಾರತದ ಪಾಲಿಗೆ ಆತಂಕ ಎಂದು ನಂಬಿದ್ದಾರೆ. ಶೇಕಡಾ ಐವತ್ತೊಂಬತ್ತರಷ್ಟು ಮಂದಿ ಭಯೋತ್ಪಾದನೆ ಕೃತ್ಯಗಳು ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇವೆಲ್ಲವನ್ನು ಹೊರತುಪಡಿಸಿಯೂ ಭಾರತದ ವಯಸ್ಕರರು ದೇಶವು ಸಾಗುತ್ತಿರುವ ಹಾದಿ ಮತ್ತು ಮುಂದಿನ ತಲೆಮಾರಿನ ಆರ್ಥಿಕ ಸ್ಥಿತಿ ಬಗ್ಗೆ ಸಂತುಷ್ಟರಾಗಿದ್ದಾರೆ ಎಂದು ಪ್ಯೂ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ 54 ಪರ್ಸೆಂಟ್ ನಷ್ಟು ಮಂದಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತೃಪ್ತರಾಗಿದ್ದಾರೆ.
ಇಂಡಿಯಾ ಟುಡೇ ಸಮೀಕ್ಷೆ: ಯಾರೇ ಕೂಗಾಡಲಿ ವೋಟ್ ಶೇರಿಂಗ್ ನಲ್ಲಿ ಬಿಜೆಪಿಯೇ ನಂಬರ್ 1
ಆದರೆ, ಈ ಹಿಂದಿನ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಕಡಿಮೆ ಆಗಿದೆ. 2017ರಲ್ಲಿ ಸಮೀಕ್ಷೆ ನಡೆದಾಗ ಈ ಪ್ರಮಾಣ ಶೇಕಡಾ 79ರಷ್ಟಿತ್ತು. ಮಹಿಳೆಯರಿಗಿಂತ ಪುರುಷರಿಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಸಮಾಧಾನ ಇದೆ. ಪ್ರತಿ ಐವರಲ್ಲಿ ಒಬ್ಬ ಮಹಿಳೆ ತಮ್ಮ ಅಭಿಪ್ರಾಯ ತಿಳಿಸಲು ನಿರಾಕರಿಸಿದ್ದಾರೆ.
ಪ್ಯೂ ಸಮೀಕ್ಷೆಯಲ್ಲಿ 2521 ಮಂದಿ ಪಾಲ್ಗೊಂಡಿದ್ದರು. ಮೇ 23ರಿಂದ ಜುಲೈ 23, 2018ರ ಮಧ್ಯೆ ಈ ಸಮೀಕ್ಷೆ ನಡೆದಿದೆ. ಲೋಕಸಭೆ ಚುನಾವಣೆ ಇನ್ನೇನು ನಡೆಯಬೇಕಿದ್ದು, ಇದರಲ್ಲಿ 90 ಕೋಟಿ ಭಾರತೀಯರು ಮತ ಹಾಕಲು ಅರ್ಹರಿದ್ದಾರೆ. ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತಕ್ಕೆ ಕೆಲ ಸೀಟುಗಳ ಕೊರತೆ ಬರಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಪ್ರಧಾನಿ ಹುದ್ದೆ ರೇಸಿನಲ್ಲಿ ಈಗಲೂ ನರೇಂದ್ರ ಮೋದಿಯೇ ಮುಂಚೂಣಿಯಲ್ಲಿದ್ದಾರೆ.