ಹಿಮಾಚಲಪ್ರದೇಶದಲ್ಲಿ ಭೂಕುಸಿತ, 40 ಮಂದಿ ಸಿಲುಕಿರುವ ಸಾಧ್ಯತೆ
ಶಿಮ್ಲಾ, ಆಗಸ್ಟ್ 11: ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರಿ ಭೂಕಿಸಿತ ಉಂಟಾಗಿದ್ದು, 40 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ಮಾಹಿತಿ ನೀಡಿದ್ದು, ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿನ್ನೌರ್ ಉಪ ಆಯುಕ್ತರು ತಿಳಿಸಿದ್ದಾರೆ.
ಕಲ್ಲುಗಳು ಇನ್ನೂ ಬೀಳುತ್ತಿವೆ, ಇದು ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಾದಿಕ್ ಹೇಳಿದ್ದಾರೆ.
40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್ಆರ್ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಸಾದಿಕ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 9 ಪ್ರವಾಸಿಗರ ಸಾವು
ಮಧ್ಯಾಹ್ನ 12.45ರ ಸುಮಾರಿಗೆ ಭೂ ಕುಸಿತ ಸಂಭವಿಸಿದೆ. ಕಿಣ್ಣಾವುರ್ ಜಿಲ್ಲಾಧಿಕಾರಿ ಅಬಿದ್ ಹುಸೇನ್ ಸಾದಿಖ್ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿದ್ದು, ಬಸ್ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿವೆ. ಆ ಬಸ್ನಲ್ಲಿದ್ದ 40ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದಾರೆ.
ಹೆಚ್ಆರ್ಸಿಟಿಸಿ ಸಾರಿಗೆ ಬಸ್, ಟ್ರಕ್, ಕಾರುಗಳು ಭೂಕುಸಿತದಿಂದ ಮಣ್ಣಿನಡಿ ಮುಚ್ಚಿಹೋಗಿವೆ. ರೆಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿ ಬಂದ್ ಆಗಿದ್ದು, ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಶಿಲಾಯ್ ಪ್ರದೇಶದ ಕಲಿ ಖಾನ್ ಏರಿಯಾದಲ್ಲಿ ಇದೇ ರೀತಿಯ ಭಾರೀ ಭೂಕುಸಿತವಾಗಿತ್ತು. ಭೂಕುಸಿತದಿಂದ ಹೈವೇಯಲ್ಲಿ 100 ಮೀಟರ್ ಅಗಲದ ಕಂದಕ ಉಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಭೂ ಕುಸಿತ ಉಂಟಾಗಿ ಇಡೀ ರಸ್ತೆಯೇ ಕುಸಿದು ಬಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಹಾಗೇ, ಇಲ್ಲಿನ ಉದಯ್ಪುರದಲ್ಲೂ ಭೂಕುಸಿತವಾಗಿ, ಲಾಹೂಲಾಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ಬಂದಿದ್ದ 175 ಪ್ರವಾಸಿಗರು ಉದಯ್ಪುರದಲ್ಲಿ ಸಿಲುಕಿಕೊಂಡಿದ್ದರು.
17,19,43ನೇ ಬೆಟಾಲಿಯನ್ನ ಐಟಿಬಿಪಿ ಸಿಬ್ಬಂದಿ ರಿಕಾಂಗ್ ಪಿಓ-ಶಿಮ್ಲಾ ಹೆದ್ದಾರಿ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಲ್ಲುಗಳು ಇನ್ನೂ ಕೂಡ ಜಾರಿ ಬೀಳುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಬರುವಂತೆ ಕೋರಲಾಗಿದೆ.
ಕಿನ್ನೌರ್ನ ಭೂಕುಸಿತದಿಂದ ಎದುರಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಭೂಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಮಣ್ಣಿನಡಿ 50-60 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಹಲವರನ್ನು ರಕ್ಷಿಸಲಾಗಿದೆ.
ಜುಲೈ 26 ರಂದು ಕಿನ್ನೌರ್ನಲ್ಲಿ ಭಾರಿ ಮಳೆಯಾಗಿ ಭೂಕುಸಿತ ಸಂಭವಿಸಿತ್ತು, 9 ಮಂದಿ ಮೃತಪಟ್ಟಿದ್ದರು.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕಿನ್ನೌರ್ನ ಸಾಂಗ್ಲಾ- ಚಿಟ್ಕುಲ್ ರಸ್ತೆಯ ಬಸ್ತೇರಿ ಬಳಿ ಭೂಕುಸಿತ ಸಂಭವಿಸಿತ್ತು. ಭೂಕುಸಿತದಿಂದ ಬಂಡೆಗಳು ಉರುಳಿದ್ದು, ಸೇತುವೆ ಕುಸಿದುಬಿದ್ದಿತ್ತು.