ಎರಡನೆಯ ದಿನ 17,000 ಜನರಿಗೆ ಕೋವಿಡ್ ಲಸಿಕೆ, ಸಣ್ಣಪುಟ್ಟ ಅಡ್ಡಪರಿಣಾಮ ವರದಿ: ಸರ್ಕಾರ
ನವದೆಹಲಿ, ಜನವರಿ 18: ದೇಶದಾದ್ಯಂತ ಕೊರೊನಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮ ಚುರುಕುಗೊಂಡಿದೆ. ಎರಡನೆಯ ದಿನವಾದ ಭಾನುವಾರ ಆರು ರಾಜ್ಯಗಳಲ್ಲಿನ ಸುಮಾರು 553 ಸ್ಥಳಗಳಲ್ಲಿ 17,000ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಭಾನುವಾರ ಲಸಿಕೆ ಕಾರ್ಯಕ್ರಮ ನಡೆದಿದೆ. ಲಸಿಕೆ ಕಾರ್ಯಕ್ರಮದ ಮೊದಲ ದಿನವಾದ ಶನಿವಾರ ದೇಶದಾದ್ಯಂತ 3,006 ಸ್ಥಳಗಳಲ್ಲಿ ಲಸಿಕೆ ನೀಡಲಾಗಿತ್ತು. ಇತರೆ ಕಾಯಿಲೆಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಗಳೊಂದಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ ಸೇರಿ ಗೊಂದಲವಾಗಬಾರದು ಎಂಬ ಉದ್ದೇಶದಿಂದ ರಾಜ್ಯಗಳ ಸಂಖ್ಯೆಯನ್ನು ಇಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
7 ತಿಂಗಳ ನಂತರ ಭಾರತ ಅತಿ ಕಡಿಮೆ ಕೊರೊನಾ ಪ್ರಕರಣ ಕಂಡ ವಾರವಿದು...
'ದೈನಂದಿನ ಆರೋಗ್ಯ ಸೇವೆಗಳಿಗೆ ಅಡ್ಡಿಯುಂಟಾಗುವುದನ್ನು ತಗ್ಗಿಸಲು ವಾರದಲ್ಲಿ ನಾಲ್ಕು ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ. ಭಾನುವಾರ ಅರು ರಾಜ್ಯಗಳಲ್ಲಿ ಮಾತ್ರ ಲಸಿಕೆ ನೀಡಲಾಗಿದೆ' ಎಂದು ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಡಾ. ಮನೋಹರ್ ಅಗ್ನಾನಿ ತಿಳಿಸಿದ್ದಾರೆ. ಮುಂದೆ ಓದಿ.
ನಾಲ್ಕು ದಿನ ಲಸಿಕೆ
ಹೆಚ್ಚಿನ ರಾಜ್ಯಗಳು ವಾರದಲ್ಲಿ ನಾಲ್ಕು ದಿನ ಲಸಿಕೆ ನೀಡಲು ಯೋಜಿಸಿವೆ. ಆದರೆ ಗೋವಾ ಮತ್ತು ಉತ್ತರ ಪ್ರದೇಶಗಳು ಎರಡು ದಿನ ಮಾತ್ರ ಲಸಿಕೆ ನೀಡಲು ಮುಂದಾಗಿದ್ದರೆ, ಮಿಜೋರಾಂ ಐದು ದಿನ ಹಾಗೂ ಆಂಧ್ರಪ್ರದೇಶ ವಾರದಲ್ಲಿ ಆರು ದಿನ ಲಸಿಕೆ ನೀಡಲು ಯೋಜನೆ ನಡೆಸಿದೆ.
ಲಸಿಕೆ ಪಡೆದವರ ಸಂಖ್ಯೆ ಕಡಿಮೆ
ಶನಿವಾರ ಮೂರು ಲಕ್ಷ ಜನರಿಗೆ ಲಸಿಕೆ ನೀಡಬೇಕಿತ್ತು. ಆದರೆ ಎರಡು ಲಕ್ಷಕ್ಕಿಂತಲೂ ಕಡಿಮೆ ಜನರಿಗೆ ಲಸಿಕೆ ನೀಡಲಾಗಿದೆ. ಈ ವ್ಯತ್ಯಾಸದ ಬಗ್ಗೆ ಸರ್ಕಾರ ಯಾವುದೇ ವಿವರಣೆ ನೀಡಿಲ್ಲ. ಆದರೆ ಲಸಿಕೆ ಪಡೆದುಕೊಳ್ಳುವುದು ಜನರ ಇಚ್ಛೆಗೆ ಬಿಟ್ಟಿರುವುದರಿಂದ ಈ ಅಂತರ ಉಂಟಾಗಿದೆ.
ಬೆಂಗಳೂರಿನ 102 ಕೇಂದ್ರಗಳಲ್ಲಿ ಇಂದು ಕೊರೊನಾ ಲಸಿಕಾ ಅಭಿಯಾನ
ಲಸಿಕೆ ದಕ್ಷತೆ ಬಗ್ಗೆ ಆತಂಕ
ಭಾರತ್ ಬಯೋಟೆಕ್ ಲಸಿಕೆಯ ಸುರಕ್ಷತೆ ಹಾಗೂ ದಕ್ಷತೆ ಕಳವಳ ಉಂಟುಮಾಡಿದೆ. ಲಸಿಕೆ ದಕ್ಷತೆ ಕುರಿತಾದ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರನೇ ಹಂತದ ಪ್ರಯೋಗ ಬಾಕಿ ಇದ್ದರೂ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಮೊದಲ ಮತ್ತು ಎರಡನೆಯ ಹಂತದ ಪ್ರಯೋಗದಲ್ಲಿ ಲಸಿಕೆಯ ಸುರಕ್ಷತೆ ಖಾತರಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಣ್ಣಪುಟ್ಟ ಅಡ್ಡಪರಿಣಾಮ
ಲಸಿಕೆ ನೀಡಿದ ಬಳಿಕ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಚುಚ್ಚುಮದ್ದು ನೀಡಿದ ಜಾಗದಲ್ಲಿ ಊದಿಕೊಳ್ಳುವುದು, ನೋವು ಅಥವಾ ಅಲರ್ಜಿಯಂತಹ ಸಣ್ಣಪುಟ್ಟ ಸಾಮಾನ್ಯ ಸಮಸ್ಯೆಗಳು ಕಂಡುಬರಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.