'ಜಮ್ಮು ಮತ್ತು ಕಾಶ್ಮೀರ ಮಾರಾಟಕ್ಕಿದೆ!'
ನವದೆಹಲಿ, ಅಕ್ಟೋಬರ್ 27: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಯಾವುದೇ ರಾಜ್ಯದ ನಿವಾಸಿಯು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರಾಸ್ತಿ ಮತ್ತು ಭೂಮಿಯನ್ನು ಖರೀದಿ ಮಾಡಬಹುದು ಎಂದು ಹೇಳಿದೆ. ದೇಶದ ಉಳಿದ ಭಾಗಗಳೊಂದಿಗೆ ಕೇಂದ್ರಾಡಳಿತ ಪ್ರದೇಶವನ್ನು ಸೇರ್ಪಡೆಗೊಳಿಸಿರುವುದರಿಂದ ಉಳಿದೆಲ್ಲ ಭಾಗಗಳಿಗೆ ಅನ್ವಯವಾಗುವ ಕಾನೂನುಗಳುಇಲ್ಲಿ ಕೂಡ ಅನ್ವಯವಾಗಲಿದೆ.
ವಿಶೇಷ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಆ ರಾಜ್ಯದ ನಿವಾಸಿಗಳ ಹೊರತಾಗಿ ಬೇರೆ ಯಾರೂ ಭೂಮಿ ಖರೀದಿ ಮಾಡುವಂತಿರಲಿಲ್ಲ. ಈಗ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯಲ್ಲಿನ ಸೆಕ್ಷನ್ 17ರಲ್ಲಿನ 'ರಾಜ್ಯದ ಕಾಯಂ ನಿವಾಸಿ' ಎಂಬ ವಾಕ್ಯಗಳನ್ನು ತೆಗೆದುಹಾಕಿದೆ.
ತ್ರಿವರ್ಣ ಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿ ಪಕ್ಷ ತೊರೆದ ಮುಖಂಡರು
ಆದರೆ ಈ ಹೊಸ ಕಾನೂನು ಕೃಷಿ ಭೂಮಿಗೆ ಅನ್ವಯವಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ. 'ಕೃಷಿ ಭೂಮಿಯು ರೈತರಿಗೆ ಮೀಸಲಾಗಿದ್ದು, ಯಾವ ಹೊರಗಿನವರೂ ಅವುಗಳನ್ನು ಖರೀದಿಸಲು ಅವಕಾಶವಿಲ್ಲ. ಇದನ್ನು ಒತ್ತಾಯಪೂರ್ವಕ ಹಾಗೂ ಜವಾಬ್ದಾರಿಯೊಂದಿಗೆ ಹೇಳುತ್ತಿದ್ದೇನೆ' ಎಂದು ಸಿನ್ಹಾ ತಿಳಿಸಿದ್ದಾರೆ. ಮುಂದೆ ಓದಿ.
ಉದ್ಯೋಗ ಸೃಷ್ಟಿ, ಅಭಿವೃದ್ಧಿ
'ನಾವು ಕೈಗಾರಿಕಾ ಪ್ರದೇಶಗಳನ್ನು ವ್ಯಾಖ್ಯಾನಿಸಿದ್ದೇವೆ. ದೇಶದ ಇತರೆ ಭಾಗಗಳಂತೆಯೇ ಇಲ್ಲಿಗೂ ಉದ್ಯಮಗಳು ಬರುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಪಡಿಸಬಹುದು ಹಾಗೂ ಉದ್ಯೋಗ ಸೃಷ್ಟಿ ಮಾಡಬಹುದು' ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಕಾಶ್ಮೀರ ಮಾರಾಟಕ್ಕಿದೆ
ಕೇಂದ್ರ ಸರ್ಕಾರದ ಈ ನಡೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರವಾಗಿ ವಿರೋಧಿಸಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದ ಭೂಮಿ ಒಡೆತನದ ಮೇಲಿನ ತಿದ್ದುಪಡಿಗಳು ಒಪ್ಪುವಂತಹದ್ದಲ್ಲ. ಕೃಷಿಯೇತರ ಜಮೀನಿನ ಖರೀದಿ ವೇಳೆ ಇದ್ದ ನಿಯಮಗಳನ್ನು ತೆಗೆದುಹಾಕಲಾಗಿದೆ. ಹಾಗೆಯೇ ಕೃಷಿ ಭೂಮಿಯ ವರ್ಗಾವಣೆಯನ್ನು ಸುಗಮಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಈಗ ಮಾರಾಟಕ್ಕಿದೆ. ಅತಿ ಸಣ್ಣ ಭೂಮಿ ಹೊಂದಿರುವ ಬಡ ಮಾಲೀಕರು ಸಂಕಷ್ಟ ಅನುಭವಿಸಲಿದ್ದಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿರುವುದು ಸತ್ಯ: ಮೆಹಬೂಬಾ ಮುಫ್ತಿ
ಒಗ್ಗಟ್ಟಿನ ಹೋರಾಟ
'ಜನರಿಗೆ ರೊಟ್ಟಿ ಮತ್ತು ಕೆಲಸ ಒದಗಿಸುವಲ್ಲಿ ಎಲ್ಲ ರೀತಿ ವಿಫಲವಾದ ಬಳಿಕ ಬಡ ಮತದಾರರ ಹಸಿವನ್ನು ಹೆಚ್ಚಿಸುವಂತಹ ಕಾನೂನುಗಳನ್ನು ಬಿಜೆಪಿ ಸೃಷ್ಟಿಸುತ್ತಿದೆ. ಇಂತಹ ಕೆಟ್ಟ ನಿರ್ಧಾರಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಮೂರು ಪ್ರಾಂತ್ಯಗಳ ಜನರು ಒಗ್ಗಟ್ಟಿನಿಂದ ಹೋರಾಡುವ ಅಗತ್ಯ ಉಂಟಾಗಿದೆ' ಎಂದು ಮೆಹಬೂಬ ಮುಫ್ತಿ ಹೇಳಿದ್ದಾರೆ.
ಹೆದ್ದಾರಿ ದರೋಡೆ
'ಇದು ಹೆದ್ದಾರಿ ದರೋಡೆಯಂತೆ. ಜಮ್ಮು ಮತ್ತು ಕಾಶ್ಮೀರದ ಸಂಪನ್ಮೂಲಗಳು ಹಾಗೂ ಸುಂದರ ಭೂಪ್ರದೇಶಗಳನ್ನು ಲೂಟಿ ಮಾಡಲಿದೆ. ಜನರ ಎಲ್ಲ ಪ್ರಜಾಸತ್ತಾತ್ಮಕ ರಚನೆಗಳನ್ನು ನಾಶಪಡಿಸಿದ ಬಳಿಕ ಕೋಟ್ಯಧಿಪತಿಗಳಿಗೆ ಭೂಮಿ ಹಸ್ತಾಂತರ ಮಾಡಲು ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವರ ಪರ್ಸ್ ಹಿಗ್ಗಿಸುವ ಸಲುವಾಗಿ ಬಲವಂತವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವುದು ಮುಂದಿನ ಹೆಜ್ಜೆ. ಇದಕ್ಕೆ ಅವಕಾಶ ನೀಡಲಾಗುವುದಿಲ್ಲ' ಎಂದು ಸೀತಾರಾಂ ಯೆಚೂರಿ ಕಿಡಿಕಾರಿದ್ದಾರೆ.