'ಅಭಿವೃದ್ಧಿಗಾಗಿಯೇ ನಮ್ಮ ಬದ್ಧತೆ' ಎಂದ ಪ್ರಧಾನಿ ಮೋದಿ
ಶಿಮ್ಲಾ, ಡಿಸೆಂಬರ್ 27: ಪ್ರಧಾನಮಂತ್ರಿ ನರೇಂದ್ರ ಮೋದಿ 2021 ರ ಡಿಸೆಂಬರ್ 27 ರಂದು ಹಿಮಾಚಲ ಪ್ರದೇಶದ ಮಂಡಿಗೆ ಭೇಟಿ ನೀಡಿದ್ದು ಸುಮಾರು 12 ಗಂಟೆ ಹೊತ್ತಿಗೆ 11,000 ಕೋಟಿ ರೂಪಾಯಿಗಳ ಮೌಲ್ಯದ ಜಲವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಅಭಿವೃದ್ಧಿಗಾಗಿಯೇ ನಮ್ಮ ಬದ್ಧತೆ," ಎಂದು ಹೇಳಿದ್ದಾರೆ.
"ಹಿಮಾಚಲ ಪ್ರದೇಶ ಸರ್ಕಾರವು ನಾಲ್ಕು ವರ್ಷಗಳ ಅಧಿಕಾರ ಅವಧಿಯನ್ನು ಸಂಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಈ ಸರ್ಕಾರವು ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಹೋರಾಟ ನಡೆಸಿದೆ. ಹಾಗೆಯೇ ಅಭಿವೃದ್ದಿಗಾಗಿ ಕಾರ್ಯ ನಿರ್ವಹಣೆ ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಎಂದಿಗೂ ಸ್ಥಗಿತವಾಗದು ಎಂಬುವುದನ್ನು ಇಲ್ಲಿನ ಸರ್ಕಾರ ಸಾಬೀತುಪಡಿಸಿದೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದರೆ.
"ಪ್ಲಾಸ್ಟಿಕ್ ಬಳಕೆಯಿಂದಾಗಿ ಕಣಿವೆ ಪ್ರದೇಶಕ್ಕೆ ಆದ ಹಾನಿಯ ಬಗ್ಗೆ ನಮ್ಮ ಸರ್ಕಾರಕ್ಕೆ ಮಾಹಿತಿ ಇದೆ. ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ಅಭಿಯಾನದ ಜೊತೆಗೆ ನಮ್ಮ ಸರ್ಕಾರವು ಪ್ಲಾಸ್ಟಿಕ್ ನಿರ್ವಹಣೆಯಲ್ಲಿಯೂ ಕಾರ್ಯ ನಿರ್ವಹಣೆ ಮಾಡುತ್ತಿದೆ," ಎಂದು ಪ್ರಧಾನಿ ವಿವರಿಸಿದ್ದಾರೆ.
"ಹಿಮಾಚಲ ಪ್ರದೇಶವು ದೇಶದ ಒಂದು ಪ್ರಮುಖವಾದ ಫಾರ್ಮಾ ಹಬ್ ಆಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ರಾಜ್ಯವು ಬೇರೆ ರಾಜ್ಯಗಳಿಗೆ ಸಹಾಯ ಮಾಡಿದೆ. ಅಷ್ಟು ಮಾತ್ರವಲ್ಲದೇ ಹಲವಾರು ದೇಶಗಳಿಗೂ ಹಿಮಾಚಲ ಪ್ರದೇಶ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಸಹಾಯ ಮಾಡಿದೆ," ಎಂದಿದ್ದಾರೆ.
"ಜನವರಿ ಮೂರರಿಂದ ನಮ್ಮ ಸರ್ಕಾರವು 15-18 ವರ್ಷದವರಿಗೆ ಕೊರೊನಾ ಲಸಿಕೆಯನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಹಾಗೆಯೇ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆಯ ಡೋಸ್ ಅನ್ನು ನೀಡಲಾಗುವುದು ಎಂದು ಕೂಡಾ ಘೋಷಣೆ ಮಾಡಲಾಗಿದೆ. ಇದನ್ನು ಹಿಮಾಚಲ ಪ್ರದೇಶವು ಸಫಲವಾಗಿ ಮಾಡುತ್ತದೆ ಎಂಬ ಭರವಸೆ ನನಗೆ ಇದೆ," ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.
"ರಾಜ್ಯದಲ್ಲಿದೆ ಎರಡು ಅಭಿವೃದ್ಧಿ ಮಾದರಿಗಳು"
"ಹಿಮಾಚಲ ಪ್ರದೇಶ ರಾಜ್ಯದಲ್ಲಿ ಎರಡು ಅಭಿವೃದ್ಧಿ ಮಾದರಿಗಳು ಇದೆ. ಒಂದು 'ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' (ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾ) ಇನ್ನೊಂದು ಮಾದರಿಯು 'ನಮ್ಮ ಸ್ವಾರ್ಥ, ನಮ್ಮ ಪರಿವಾರದ ಸ್ವಾರ್ಥ' ಆಗಿದೆ. ಹಿಮಾಚಲ ಪ್ರದೇಶ ಸರ್ಕಾರವು ಮೊದಲ ಮಾದರಿ 'ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಮಾದರಿ ಅಡಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ," ಎಂದು ತಿಳಿಸಿದರು.
"ಉತ್ತರ ಪ್ರದೇಶದ ಕಾಶಿಯಂತೆ ಮಂಡಿಯ ಅಭಿವೃದ್ಧಿ"
ಇನ್ನು ಇದಕ್ಕೂ ಮುನ್ನ ಮಾತನಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, "ಮಂಡಿಯನ್ನು ನಾವು ಛೋಟಿ ಕಾಶಿ ಎಂದು ಕರೆಯುತ್ತೇವೆ. ಇಲ್ಲಿ ಸುಮಾರು ಮುನ್ನೂರರಷ್ಟು ಪ್ರಾಚೀನ ದೇವಾಲಯಗಳು ಇದೆ. ಉತ್ತರ ಪ್ರದೇಶದಲ್ಲಿ ಕಾಶಿಯನ್ನು ಅಭಿವೃದ್ಧಿ ಮಾಡಿದಂತೆಯೇ ನಾವು ಮಂಡಿಯನ್ನು ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಿದ್ದೇವೆ," ಎಂದಿದ್ದಾರೆ. "ರಾಜ್ಯದ ಜನರ ಹಾಗೂ ಬಿಜೆಪಿ ನಾಯಕತ್ವದ ಸಹಕಾರದೊಂದಿಗೆ ಮುಂದಿನ 2022 ರಲ್ಲಿ ನಡೆಯುವ ಚುನಾವಣೆಯಲ್ಲಿ ನಾವು ಬಿಜೆಪಿ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ," ಎಂದು ಹೇಳಿದ್ದಾರೆ.
ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಪಕ್ಷಗಳು ತಯಾರಿಯನ್ನು ನಡೆಸುತ್ತಿದೆ. ಬಿಜೆಪಿ ಪಕ್ಷವು ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸುವ ಮೂಲಕ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದೆ. ಇನ್ನು ನವೆಂಬರ್ನಲ್ಲಿ ಹಿಮಾಚಲ ಪ್ರದೇಶ ಹಾಗೂ ಡಿಸೆಂಬರ್ನಲ್ಲಿ ಗುಜರಾತ್ನಲ್ಲಿಯೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಈಗಲೇ ಬಿಜೆಪಿ ಕಾರ್ಯ ತಂತ್ರವನ್ನು ರೂಪಿಸುತ್ತಿದೆ. (ಒನ್ಇಂಡಿಯಾ ಸುದ್ದಿ)