ವಿತ್ತಸಚಿವೆಗೆ ಅರ್ಥಶಾಸ್ತ್ರ ಗೊತ್ತಿಲ್ಲ, ಅದೇ ಸಮಸ್ಯೆ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಸೆಪ್ಟೆಂಬರ್ 26: ಕಳೆದ ಐದು ವರ್ಷಗಳಲ್ಲಿ ಸರ್ಕಾರವು ಸ್ಥೂಲ ಅರ್ಥ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆಗೆ ಮತ್ತೆ ಜೀವ ತುಂಬಲು ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದರೆ ಆಗಲ್ಲ. ಅದರಿಂದ ಏನೂ ಫಲಿತಾಂಶ ಸಿಗಲ್ಲ. ಅದರ ಬದಲಿಗೆ ಆದಾಯ ತೆರಿಗೆಯನ್ನು ತೆಗೆಯಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬುಧವಾರ ಹೇಳಿದ್ದಾರೆ.
ಕೇಂದ್ರದ ಮಾಜಿ ಕಾನೂನು ಹಾಗೂ ವಾಣಿಜ್ಯ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಇತ್ತಿಚಿನ ಪುಸ್ತಕ "RESET - Regaining Indian's Economic Legacy" ಬಿಡುಗಡೆಯ ನಂತರ, ಭಾರತದ ಆರ್ಥಿಕತೆ ಬದಲಾವಣೆ ಹಾಗೂ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಇರುವ ದಾರಿ ಬಗ್ಗೆ ಮಾತನಾಡಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಪ್ರಧಾನಿ ಮೋದಿ, ಮತ್ತವರ ಸಂಪುಟದ ಬಗ್ಗೆ ಸ್ವಾಮಿ ವ್ಯಾಪಕ ಟೀಕೆ!
ಸುಬ್ರಮಣಿಯನ್ ಸ್ವಾಮಿ ಮಾತನಾಡಿ, ಬಿಜೆಪಿಯ ಕಳೆದ ಐದು ವರ್ಷದ ಆಡಳಿತ ಸಮಗ್ರ ಆರ್ಥಿಕತೆಗೆ ಕೆಟ್ಟದಾಗಿತ್ತು ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಕ್ಷ್ಮ ಆರ್ಥಿಕ ವ್ಯವಸ್ಥೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ಸ್ಥೂಲ ಆರ್ಥಿಕ ವ್ಯವಸ್ಥೆಯು ಸಮಗ್ರವಾದದ್ದು. ಇಡೀ ವ್ಯವಸ್ಥೆಯು ಗೊಂದಲವಾಗಿದೆ. ಇದನ್ನು ತಿದ್ದುಕೊಳ್ಳಬೇಕು. ಕಾರ್ಪೊರೇಟ್ ತೆರಿಗೆ ಇಳಿಸಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಆದಾಯ ತೆರಿಗೆಯನ್ನು ತೆಗೆಯುವುದು ಉತ್ತಮವಾದ ಹೆಜ್ಜೆ. ಮಧ್ಯಮ ವರ್ಗದವರಿಗೆ ಇದರಿಂದ ಸಂತೋಷವಾಗುತ್ತದೆ. ಅವರು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಕಾರ್ಪೊರೇಟ್ ವಲಯದ ಸಮಸ್ಯೆ ಏನೆಂದರೆ, ಬೇಡಿಕೆ ಕಡಿಮೆ ಆಗಿರುವುದು. ಜನರು ಸಶಕ್ತರಾದರೆ ಬೇಡಿಕೆ ತಾನಾಗಿಯೇ ಬರುತ್ತದೆ. ಜನರು ಅಂದರೆ ಆದಾಯ ತೆರಿಗೆ. ಅದನ್ನು ತೆಗೆಯಬೇಕು. ಕಾರ್ಪೊರೇಟ್ ತೆರಿಗೆ ತೆಗೆಯುವುದರಿಂದ ಏನೂ ಉಪಯೋಗ ಇಲ್ಲ. ಇದರಿಂದ ಪೂರೈಕೆ ಹೆಚ್ಚಾಗುತ್ತದೆ ವಿನಾ ಖರೀದಿಸುವವರು ಹುಟ್ಟಲ್ಲ ಎಂದು ಹೇಳಿದ್ದಾರೆ.
ನಾವು ನಿರುದ್ಯೋಗವನ್ನು ತೊಲಗಿಸಬೇಕು ಅಂದರೆ ಹತ್ತು ಪರ್ಸೆಂಟ್ ನ ಅಭಿವೃದ್ಧಿ ಹತ್ತು ವರ್ಷ ಆಗಬೇಕು. ಆದರೆ ಹಲವು ಕ್ರಮಗಳನ್ನು ತೆಗೆದುಕೊಂಡ ನಂತರವೂ ಪರಿಸ್ಥಿತಿ ಏಕೆ ಸುಧಾರಿಸುತ್ತಿಲ್ಲ ಅಂದರೆ, ನಮ್ಮ ಬಿಜೆಪಿ ಸರ್ಕಾರದಲ್ಲಿ ವಿತ್ತ ಸಚಿವರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ. ಅದೇ ಸಮಸ್ಯೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ದೇಶದ ಜಿಡಿಪಿ ಐದು ಪರ್ಸೆಂಟ್ ಗಿಂತ ಕಡಿಮೆ ಅಗುವ ಕಡೆಗೆ ಸಾಗಿದೆ. ಇನ್ನು ಹತ್ತು ವರ್ಷಗಳ ಕಾಲ ಹತ್ತು ಪರ್ಸೆಂಟ್ ಪ್ರಗತಿ ಸಾಧಿಸಬೇಕು. ಆಗಷ್ಟೇ ನಾವು ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ.