ಜಯಲಲಿತಾಗೆ ಭಾರತರತ್ನ ಕೊಡಿ, ಸಂಸತ್ ನಲ್ಲಿ ಪುತ್ಥಳಿ ಸ್ಥಾಪಿಸಿ
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾರತ ರತ್ನ ನೀಡಬೇಕು ಎಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರಧಾನಿಗೆ ಮನವಿ ಸಲ್ಲಿಸಲಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಅವರನ್ನೇ ಮುಖ್ಯಮಂತ್ರಿ ಆಗುವಂತೆ ಒತ್ತಡ ಹೆಚ್ಚಾಗಿದೆ
ನವದೆಹಲಿ, ಡಿಸೆಂಬರ್ 19: ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತರತ್ನ'ವನ್ನು ಜೆ.ಜಯಲಲಿತಾ ಅವರಿಗೆ ಮರಣೋತ್ತರವಾಗಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಯನ್ನು ಹೊತ್ತು ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಪ್ರಧಾನಿ ಮೋದಿಯನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಡಿಸೆಂಬರ್ 5ರಂದು ಜೆಯಲಲಿತಾ ನಿಧನರಾದ ನಂತರ ಅಧಿಕಾರ ವಹಿಸಿಕೊಂಡ ಪನ್ನೀರ್ ಸೆಲ್ವಂ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ ಶಶಿಕಲಾ ನಟರಾಜನ್ ಅವರು ಪಕ್ಷ ಹಾಗೂ ಸರಕಾರದ ನೇತೃತ್ವ ವಹಿಸಬೇಕು ಎಂದು ಪಕ್ಷದಲ್ಲಿ ಒತ್ತಡ ಹೆಚ್ಚಾಗಿದೆ.[ಜಯಲಲಿತಾ ಸಾವು: ಸಿಬಿಐಗೆ ವಹಿಸಲು ಸೋದರ ಆಗ್ರಹ]
ಜಯಲಲಿತಾ ದೆಹಲಿಗೆ ತೆರಳಿದಾಗ ಉಳಿದುಕೊಳ್ಳುತ್ತಿದ್ದ ತಮಿಳುನಾಡು ಭವನದ ಮುಖ್ಯಮಂತ್ರಿ ಕೊಠಡಿಯಲ್ಲಿ ಪನ್ನೀರ್ ಸೆಲ್ವಂ ತಂಗಿರಲಿಲ್ಲ. ಆ ಮೂಲಕ ಅಮ್ಮನ ಬಗೆಗಿನ ತಮ್ಮ ನಿಷ್ಠೆಯನ್ನು ಮತ್ತೊಮ್ಮೆ ತೋರಿದರು. ಇನ್ನು ಮೋದಿ ಭೇಟಿ ವೇಳೆಯಲ್ಲಿ ಜಯಲಲಿತಾ ಅವರ ಪುತ್ಥಳಿಯನ್ನು ಸಂಸತ್ ನಲ್ಲಿ ಸ್ಥಾಪಿಸುವಂತೆ ಮನವಿ ಸಲ್ಲಿಸಲಿದ್ದಾರೆ ಒಪಿಎಸ್.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ಅಷ್ಟೇ ಅಲ್ಲ, ಮುಖ್ಯಮಂತ್ರಿ ಗಾದಿಯಲ್ಲಿ ಕೂರಬೇಕು ಎಂದು ಭಾನುವಾರ ಆ ಪಕ್ಷದ ಮುಖಂಡರು ಶಶಿಕಲಾ ಅವರನ್ನು ಒತ್ತಾಯಿಸಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಜಯಲಲಿತಾ ಅವರೇ ಹೊಂದಿದ್ದರು.[ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್?]
ಇನ್ನು ಜಯಲಲಿತಾ ನಿಧನದಿಂದ ತೆರವಾಗಿರುವ ಆರ್ ಕೆ ನಗರ್ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಪಕ್ಷದಿಂದ ಶಶಿಕಲಾ ಅವರೇ ಸ್ಪರ್ಧಿಸಬೇಕು ಎಂಬ ಒತ್ತಡ ಕೇಳಿಬಂದಿದೆ.