ಮೋದಿಯವರನ್ನು ಕಂಡರೆ ವಿಪಕ್ಷಗಳಿಗೆ ಭಯ: ಸುಶೀಲ್ ಮೋದಿ
ಬಿಹಾರ್, ಮೇ 28: ವಿರೋಧಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಭಯವಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಕುರಿತು ಮಾತನಾಡಿದ ಸುಶೀಲ್ ಮೋದಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.
ಕುಮಾರಸ್ವಾಮಿ ಪದಗ್ರಹಣದಲ್ಲಿ 'ಮಹಾ ಮೈತ್ರಿಕೂಟ'ದ ಶಕ್ತಿ ಪ್ರದರ್ಶನ
"ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ. ಒಂದು ಕಾಲದಲ್ಲಿ ಅದು ಇಡೀ ದೇಶವನ್ನು ಆಳಿತ್ತು. ಆದರೆ ಈಗ ಮೂರೂ, ನಾಲ್ಕೋ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಪ್ರಾದೇಶಿಕ ಪಕ್ಷಗಳ ಬಾಲ ಹಿಡಿದು ಕೇಂದ್ರದಲ್ಲಿ ಆಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿವೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಭಯವಿದೆ. ಕರ್ನಾಟಕದಲ್ಲಿ 122 ರಿಂದ 78 ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್ ತಾನೇ ಗೆಲುವು ಸಾಧಿಸಿದ್ದೀನಿ ಎಂಬಂತೆ ಬೀಗುತ್ತಿದೆ" ಎಂದು ಸುಶೀಲ್ ಮೋದಿ ಹೇಳಿದರು.
'ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ಪ್ರಾದೇಶಿಕ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು ಒಗ್ಗಟ್ಟನ್ನು ಪ್ರದರ್ಶಿಸಲು ಹೊರಟಿದ್ದಾರೆ. ಆದರೆ ಅವರು ಮರಳಿನ ಮೇಲೆ ಮನೆಕಟ್ಟುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ' ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮೇ 23 ರಂದು ನಡೆದ ಎಚ್ ಡಿ ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಯಾವತಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಎನ್. ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್ ಮುಂತಾದ ಹಲವು ನಾಯಕರು ಬಾಗಿಯಾಗಿದ್ದರು.