ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ಬೆಂಬಲಿಸಿದ ಟಿಆರ್ಎಸ್
ನವದೆಹಲಿ, ಜೂನ್ 27: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ರಾಮ್ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಹೊರಬೀಳಲಿದೆ.
ಪವಾರ್, ಗೋಪಾಲಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಅವರು ಉನ್ನತ ಹುದ್ದೆಗೆ ಜಂಟಿ ಅಭ್ಯರ್ಥಿಯಾಗಲು ವಿರೋಧ ಪಕ್ಷದ ಪ್ರಸ್ತಾಪವನ್ನು ನಿರಾಕರಿಸಿದ ನಂತರ ಸಿನ್ಹಾ ಅವರ ಹೆಸರು ಕೇಳಿಬಂದಿತು. ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಒಟ್ಟಾಗಿ ಸಿನ್ಹಾ ಅವರನ್ನು ಆಯ್ಕೆ ಮಾಡಿವೆ.
ರಾಷ್ಟ್ರಪತಿ ಸ್ಥಾನಕ್ಕೆ 'ರಬ್ಬರ್ ಸ್ಟಾಂಪ್' ಬೇಕಿಲ್ಲ; ಪ್ರತಿಸ್ಪರ್ಧಿಯ ಕಾಲೆಳೆದರೇ ಯಶವಂತ್ ಸಿನ್ಹಾ?
6 ನವೆಂಬರ್ 1937 ರಂದು ಜನಿಸಿದ ಯಶವಂತ್ ಸಿನ್ಹಾ ಮಾಜಿ ಹಣಕಾಸು ಮಂತ್ರಿಯಾಗಿ 1990-1991 ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಮತ್ತು ಮಾರ್ಚ್ 1998-ಜುಲೈ 2002 ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜುಲೈ 2002ರಿಂದ ಮೇ 2004ರವರೆಗೆ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಅವರು 21 ಏಪ್ರಿಲ್ 2018 ರಂದು ಬಿಜೆಪಿ ತೊರೆದ ಸಿನ್ಹಾ 13 ಮಾರ್ಚ್ 2021 ರಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ಸೇರಿದರು. 21 ಜೂನ್ 2022 ರಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅನ್ನು ತೊರೆದರು.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿಗೆ ಬಿಎಸ್ಪಿ ಬೆಂಬಲ
ಯಶವಂತ್ ಸಿನ್ಹಾಗೆ ಬೆಂಬಲ ಸೂಚಿಸಿದ ಟಿಆರ್ಎಸ್
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಂಬರುವ ಚುನಾವಣೆಯಲ್ಲಿ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.
ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಸಿನ್ಹಾ ಅವರ ನಾಮಪತ್ರ ಸಲ್ಲಿಕೆಗೆ ಟಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ಪುತ್ರ ರಾಮರಾವ್ ಅವರೊಂದಿಗೆ ಕೆಲವು ಟಿಆರ್ಎಸ್ ಸಂಸದರೂ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳಲಿದ್ದಾರೆ.
ವಿರೋಧ ಪಕ್ಷಗಳ ಸಭೆಗೆ ಗೈರಾಗಿದ್ದ ಕೆಸಿಆರ್
ರಾಷ್ಟ್ರಪತಿ ಚುನಾವಣೆಗೆ ತಮ್ಮ ಜಂಟಿ ಅಭ್ಯರ್ಥಿಯನ್ನು ನಿರ್ಧರಿಸಲು ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಕರೆದಿದ್ದ ವಿರೋಧ ಪಕ್ಷಗಳ ಎರಡೂ ಸಭೆಗಳಿಗೆ ಕೆಸಿಆರ್ ಗೈರಾಗಿದ್ದರು. ಆದರೆ ಈಗ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆ ತೃತೀಯ ರಂಗದ ಸ್ಥಾಪನೆಗೆ ಕೆಸಿಆರ್ ಕಸರತ್ತು ನಡೆಸುತ್ತಿದ್ದು ಸಹಜವಾಗಿಯೇ ಯಶವಂತ್ ಸಿನ್ಹಾಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಮಾಯಾವತಿ
ಇನ್ನು ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ರಾಷ್ಟ್ರಪತಿ ಆಯ್ಕೆಯಲ್ಲಿ ವಿಪಕ್ಷಗಳು ತಮ್ಮನ್ನು ಸಂಪರ್ಕಿಸದೇ ಇರುವುದಕ್ಕೆ ಮಾಯಾವತಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈಗಾಗಲೇ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಸೂಚಿಸಿದ್ದು ಗೆಲುವು ಖಚಿತವಾಗಿದೆ. ಜೊತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ದ್ರೌಪದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈಗ ಮಾಯಾವತಿ ಬೆಂಬಲದೊಂದಿದೆ ದ್ರೌಪದಿ ಮುರ್ಮು ಅವರ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ.
ಜುಲೈ 18ರಂದು ನಡೆಯಲಿದೆ ರಾಷ್ಟ್ರಪತಿ ಚುನಾವಣೆ
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ. ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಎಂದು ಘೋಷಿಸಿದೆ.
ರಾಷ್ಟ್ರಪತಿ ಚುನಾವಣೆಯ ಎಲೆಕ್ಟೊರಲ್ ಕಾಲೇಜ್ನಲ್ಲಿ 10,86,431 ಮತಗಳ ಪೈಕಿ, ಎನ್ಡಿಎ ಶೇ 49ರಷ್ಟು, ಅಂದರೆ 5,32,351 ಮತಗಳನ್ನು ಹೊಂದಿದೆ. ಎಐಎಡಿಎಂಕೆ 14,940 ಮತ್ತು ವೈಎಸ್ಆರ್ಸಿಪಿ 45,550 ಮತಗಳನ್ನು ಹೊಂದಿವೆ. ಬಿಜೆಡಿ ಬಳಿ ಸುಮಾರು 33,000 ಮತಗಳಿವೆ. ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಈಗಾಗಲೇ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಬಿಜೆಪಿಯ ಮತಗಳ ಸಂಖ್ಯೆ ಶೇಕಡಾ 52 ಅಥವಾ ಸುಮಾರು 5,67,000ಕ್ಕೆ ತಲುಪಿದೆ.
Recommended Video