ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ: ಆದರೆ ವಿರೋಧ ಪಕ್ಷದವರು ಯಾಕೆ ಹೀಗೆ?
ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ (ಮಾ 1) ಕೊರೊನಾ ಮೊದಲ ಡೋಸ್ ಅನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹಾಕಿಸಿಕೊಂಡಿದ್ದಾರೆ. ಇನ್ನು, ಕರ್ನಾಟಕದಲ್ಲೂ ಎರಡನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದೆ.
ಕೊ-ವಿನ್ ಅಪ್ಲಿಕೇಷನ್ ಮೂಲಕ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದಕ್ಕೆ ಸಾರ್ವಜನಿಕರು ತಮ್ಮ ಹೆಸರನ್ನು ನೊಂದಾಯಿಸಕೊಳ್ಳಬಹುದಾಗಿದೆ. ಸೋಮವಾರ ಬೆಳಗ್ಗೆ 9 ಗಂಟೆಯಿಂದ ಹೆಸರು ನೊಂದಾಣಿಕೆಗೆ ಅನುಮತಿಯನ್ನು ನೀಡಲಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ
ಕೊರೊನಾ ಲಸಿಕೆಯನ್ನು ಪ್ರಧಾನಿ ಹಾಕಿಸಿಕೊಂಡಿರುವುದಕ್ಕೂ ವಿರೋಧ ಪಕ್ಷಗಳು ತಕರಾರನ್ನು ಎತ್ತಿವೆ. ಈ ಹಿಂದೆ, ಈ ಲಸಿಕೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ, ಕಾಂಗ್ರೆಸ್, ಎನ್ಸಿಪಿ ಮುಂತಾದ ಪಕ್ಷಗಳು, ಲಸಿಕೆಯನ್ನು ಯುವಜನತೆಗೆ ಮೊದಲು ಕೊಡಬೇಕಿತ್ತು ಎಂದು ಈಗ ಹೇಳುತ್ತಿವೆ.
"ಏಮ್ಸ್ನಲ್ಲಿ ಮೊದಲ ಕೊರೊನಾ ಡೋಸ್ ತೆಗೆದುಕೊಂಡೆ, ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ"ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
"ಬಾಳಿ ಬದುಕಬೇಕಾದ ಯುವಜನತೆಗೆ ಮೊದಲು ಲಸಿಕೆ ನೀಡಿ"
ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್
ಜನವರಿ ತಿಂಗಳಲ್ಲಿ ಕೊರೊನಾ ಲಸಿಕೆ ಅಭಿಯಾನದ ಸಂದರ್ಭದಲ್ಲಿ ಎನ್ಸಿಪಿಯ ಮುಖಂಡ ಮತ್ತು ಮಹಾರಾಷ್ಟ್ರದ ಸಚಿವರೂ ಆಗಿದ್ದ ನವಾಬ್ ಮಲಿಕ್, ಲಸಿಕೆ ವಿಚಾರದಲ್ಲಿ ವ್ಯಂಗ್ಯವಾಡಿದ್ದರು. "ಮೋದಿಯವರು ಮೊದಲು ಲಸಿಕೆಯನ್ನು ಹಾಕಿಸಿಕೊಂಡರೆ, ಸಾರ್ವಜನಿಕವಾಗಿ ಉತ್ತಮ ಸಂದೇಶ ರವಾನೆಯಾಗುತ್ತದೆ" ಎಂದು ಮಲಿಕ್ ಹೇಳಿದ್ದರು.
ಪ್ರಕಾಶ್ ಅಂಬೇಡ್ಕರ್
ಇದಲ್ಲದೇ, ವಂಚಿತ್ ಬಹುಜನ್ ಅಗಾಡಿಯ ಮುಖ್ಯಸ್ಥರಾದ ಪ್ರಕಾಶ್ ಅಂಬೇಡ್ಕರ್ ಕೂಡಾ ಇದೇ ಸಲಹೆಯನ್ನು ನೀಡಿದ್ದರು. "ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆ ಮೊದಲು ಲಸಿಕೆಯನ್ನು ತೆಗೆದುಕೊಳ್ಳಬೇಕು. ಇದರಿಂದ, ಜನಸಾಮಾನ್ಯರಿಗೆ ಈ ವಿಚಾರದಲ್ಲಿ ಇರುವ ಎಲ್ಲಾ ಸಂದೇಹಗಳು ದೂರವಾಗುತ್ತವೆ"ಎಂದು ಪ್ರಕಾಶ್ ಹೇಳಿದ್ದರು.
ಬಿಹಾರದ ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ
ಇನ್ನು, ಬಿಹಾರದ ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ ಮಾತನಾಡುತ್ತಾ, "ಎರಡು ಲಸಿಕೆ ಕೊರೊನಾ ವಿರುದ್ದದ ಹೋರಾಟಕ್ಕೆ ಲಭ್ಯವಾಗಿದೆ ಎನ್ನುವ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ಆದರೆ, ಜನರಿಗೆ ಈ ಲಸಿಕೆಯ ಮೇಲೆ ಅನುಮಾನ ಇರುವುದರಿಂದ, ಅಮೆರಿಕಾ ಮತ್ತು ರಷ್ಯಾದ ಅಧ್ಯಕ್ಷರು ಮಾಡಿದಂತೆ, ಮೊದಲು ಪ್ರಧಾನಿ ಮೋದಿ ಈ ಲಸಿಕೆಯನ್ನು ತೆಗೆದುಕೊಳ್ಳಲಿ"ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಖರ್ಗೆ
ಅಂದು ಮೋದಿಯೇ ಮೊದಲು ತೆಗೆದುಕೊಳ್ಳಲಿ ಎಂದು ಹೇಳುತ್ತಿದ್ದ ಪಕ್ಷದವರು ಈಗ ಮೊದಲು ಯುವಜನತೆಗೆ ಕೊಡಿ ಎಂದು ಹೇಳುತ್ತಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, "ನನಗೆ 70 ವರ್ಷದ ಮೇಲಾಗಿದೆ. ದೀರ್ಘಾವಧಿ ಬಾಳಿ ಬದುಕಬೇಕಾದ ಯುವ ಜನತೆಗೆ ನೀವು ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಬೇಕಾಗಿದೆ. ಹೆಚ್ಚು ವರ್ಷ ಬದುಕಬೇಕಾದ ಯುವಜನತೆಗೆ ಮೊದಲು ಲಸಿಕೆ ನೀಡಬೇಕಿದೆ. ನಾನು 10-15 ವರ್ಷ ಬದುಕಬಹುದಷ್ಟೆ. ಆದ್ಯತೆಯನ್ನು ಅವರಿಗೆ ನೀಡಿ"ಎಂದು ಖರ್ಗೆ ಹೇಳಿದರು.