ಭಾರತದಲ್ಲಿ ಅತಿಯಾದ ಪ್ರಜಾಪ್ರಭುತ್ವ: ಟೀಕೆಗೊಳಗಾದ ನೀತಿ ಆಯೋಗದ ಸಿಇಒ
ನವದೆಹಲಿ, ಡಿಸೆಂಬರ್ 9: ಭಾರತದಲ್ಲಿ ಅತಿಯಾದ ಪ್ರಜಾಪ್ರಭುತ್ವ ಇರುವುದರಿಂದ ಇಲ್ಲಿನ ಸನ್ನಿವೇಶದಲ್ಲಿ ಕಠಿಣ ಸುಧಾರಣೆಗಳನ್ನು ಜಾರಿಗೆ ತರುವುದು ಬಹಳ ಕಷ್ಟ ಎಂಬ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಇಷ್ಟೆಲ್ಲಾ ಸವಾಲುಗಳಿದ್ದರೂ ಸರ್ಕಾರವು ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ ಮತ್ತು ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ಅಂತಹ ಸುಧಾರಣೆಗಳನ್ನು ಜಾರಿಗೊಳಿಸುವ ಧೈರ್ಯ ಮತ್ತು ಅಚಲತೆಯನ್ನು ಪ್ರದರ್ಶಿಸಿದೆ ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ.
''ಪೆಟ್ರೋಲ್ ಬಂಕ್ಗೆ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಹೆಸರಿಡಿ''
'ಇನ್ನೂ ಅನೇಕ ಸುಧಾರಣೆಗಳನ್ನು ಮಾಡಬೇಕಿದೆ. ಕಠಿಣ ಸುಧಾರಣೆಗಳನ್ನು ಮಾಡಲು ಕಡೇಪಕ್ಷ ಈ ಸರ್ಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದೆ. ಭಾರತವು ಪ್ರಮುಖ ಉತ್ಪಾದಕ ದೇಶವಾಗಲು ನಾವು ಈ ಸುಧಾರಣೆಗಳನ್ನು ಹೊಂದಬೇಕಿದೆ. ಚೀನಾದೊಂದಿಗೆ ಸ್ಪರ್ಧಿಸುವುದು ಸುಲಭವಲ್ಲ. ಉತ್ಪಾದಕ ದೇಶವಾಗುವುದು ಸುಲಭವಲ್ಲ. ಅವು ಸೆಮಿನಾರ್ಗಳು ಮತ್ತು ವೆಬಿನಾರ್ಗಳನ್ನು ಆಯೋಜಿಸುವುದರಿಂದಷ್ಟೇ ಸಾಧ್ಯವಾಗುವುದಿಲ್ಲ. ಅವುಗಳಿಗೆ ತಳಮಟ್ಟದಲ್ಲಿ ಬಹಳ ಕಠಿಣ ಪ್ರಯತ್ನ ಬೇಕಾಗಿದೆ. ಅದು ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.
ಅಮಿತಾಬ್ ಬಳಸಿರುವ 'ಅತಿಯಾದ ಪ್ರಜಾಪ್ರಭುತ್ವ' ಪದ ಲೇವಡಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತು ಅನೇಕ ಮೀಮ್ಗಳು ಸೃಷ್ಟಿಯಾಗಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅಮಿತಾಬ್ ಹೇಳಿಕೆಯನ್ನು ಮೋದಿ ಸರ್ಕಾರದ ವಿರುದ್ಧದ ಟೀಕೆಗೆ ಬಳಸಿಕೊಂಡಿದ್ದಾರೆ. 'ಮೋದಿ ಅವರ ಅಡಿಯಲ್ಲಿ, ಸುಧಾರಣೆ = ಕಳ್ಳತನ. ಹೀಗಾಗಿಯೇ ಅವರು ಪ್ರಜಾಪ್ರಭುತ್ವದಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಾರೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸ್ವರಾಜ್ ನಿಯತಕಾಲಿಕೆ ಆಯೋಜಿಸಿದ್ದ 'ಆತ್ಮನಿರ್ಭರ ಭಾರತಕ್ಕೆ ದಾರಿ' ಆನ್ಲೈನ್ ಕಾರ್ಯಕ್ರಮದಲ್ಲಿ ನೀಡಿದ್ದ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಕಾಂತ್, 'ಇದು ಖಂಡಿತವಾಗಿಯೂ ನಾನು ಹೇಳಿರುವ ಮಾತಲ್ಲ. ನಾನು ಎಂಇಐಎಸ್ ಯೋಜನೆ, ತೆಳುವಾಗಿ ಹರಡಿರುವ ಸಂಪನ್ಮೂಲಗಳು ಮತ್ತು ಉತ್ಪಾದಕ ವಲಯದಲ್ಲಿ ಜಾಗತಿಕ ಚಾಂಪಿಯನ್ಗಳ ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದೆ' ಎಂದಿದ್ದಾರೆ.