ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ : ಕಾಂಗ್ರೆಸ್ ಮುಖಂಡ ಪವನ್ ಖೇರಾ ಆರೋಪ
ಮೂವರು ಜಾರ್ಖಂಡ್ ಶಾಸಕರಿದ್ದ ವಾಹನವನ್ನು ತಡೆದು, ಅವರು ಪ್ರಯಾಣಿಸುತ್ತಿದ್ದ ವಾಹನದಿಂದ 49 ಲಕ್ಷ ರುಪಾಯಿ ನಗದು ವಶ ಪಡಿಸಿಕೊಂಡ ಪ್ರಕರಣ ಈಗ ಜಾರ್ಖಂಡ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಈಗಾಗಲೇ ಮೂವರು ಶಾಸಕರನ್ನು ಪಕ್ಷದಿಂದ ವಜಾಗೊಳಿಸಿ ಆದೇಶ ಮಾಡಿದೆ. ಆದರೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿಬಿದ್ದಿದೆ.
ಜಾರ್ಖಂಡ್ನಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ಭಾನುವಾರ ಮತ್ತೆ ಬಿಜೆಪಿ ವಿರದ್ಧ ಟೀಕಾಪ್ರಹಾರ ನಡೆಸಿತು ಇದು "ಆಪರೇಷನ್ ಕೀಚಡ್" (ಮಣ್ಣಿನ ಕೊಚ್ಚೆ) ಎಂದು ಹೇಳಿದೆ.
ಹಣದ ಜೊತೆ ಸಿಕ್ಕಿಬಿದ್ದ ಶಾಸಕರು ಕಾಂಗ್ರೆಸ್ನಿಂದ ಅಮಾನತು
"ದಯವಿಟ್ಟು ಇದನ್ನು ಆಪರೇಷನ್ ಕಮಲ ಎಂದು ಕರೆಯುವುದನ್ನು ನಿಲ್ಲಿಸೋಣ. ಇದು ಆಪರೇಷನ್ ಕಮಲ ಅಲ್ಲ ಆಪರೇಷನ್ ಕೀಚಡ್" ಎಂದು ಪಕ್ಷದ ನಾಯಕ ಪವನ್ ಖೇರಾ ಹೇಳಿದ್ದಾರೆ. ಅಲ್ಲಿ ಜಾರ್ಖಂಡ್ ಶಾಸಕರ ಅಮಾನತು ಮಾಡಿದ ವಿಚಾರ ತಿಳಿಸುವ ವೇಳೆ ಪವನ್ ಖೇರಾ ಹೀಗೆ ಹೇಳಿದ್ದಾರೆ.
ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿ ಶಾಸಕ ರಾಜೇಶ್ ಕಚ್ಚಪ್ ಮತ್ತು ಕೊಲೆಬೀರಾ ಶಾಸಕ ನಮನ್ ಬಿಕ್ಸಲ್ ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಕ್ಕಿಬಿದ್ದಿದ್ದರು.
ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ
ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಖೇರಾ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು. "ಇಂದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತಿರುವ ರೀತಿ, ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆಯಲ್ಪಡುತ್ತದೆ. ಇಂದು ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಹಿರಂಗ ಷಡ್ಯಂತ್ರ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.
ಅರುಣಾಚಲ ಪ್ರದೇಶ, ಗೋವಾ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯು ಇದೇ ರೀತಿಯ ಪ್ರಯತ್ನಗಳನ್ನು ನಡೆಸಿದೆ ಎಂದು ಪವನ್ ಖೇರಾ ಹೇಳಿದರು, "ಈಗ ಅವರು ಜಾರ್ಖಂಡ್ ಮೇಲೆ ಕಣ್ಣಿಟ್ಟಿದ್ದಾರೆ" ಎಂದು ಹೇಳಿದರು.
ಶಿವಸೇನೆ ನಾಯಕ ಸಂಜಯ್ ರಾವತ್ ಮನೆ ಮೇಲೆ ಇಡಿ ದಾಳಿ
ಕೇಂದ್ರ ಸರ್ಕಾರದ ವಿರುದ್ಧ ಪವನ್ ಖೇರಾ ಆರೋಪ
"ಜನಪರ ಕೆಲಸಗಳನ್ನು ಮಾಡಲು ಸರ್ಕಾರವನ್ನು ಅಧಿಕಾರಕ್ಕೆ ತರಲಾಗುತ್ತದೆ. ಚುನಾವಣೆಯಲ್ಲಿ ಸೋತ ರಾಜ್ಯಗಳಲ್ಲಿ ಹೇಗೆ ಅಧಿಕಾರ ಪಡೆಯಬೇಕು ಎಂದು ಚಿಂತಿಸುವುದು ಕೇಂದ್ರ ಸರ್ಕಾರದ ಕೆಲಸವಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇದು ಅರ್ಥವಾಗದಿರಬಹುದು" ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.
ನಿರುದ್ಯೋಗ, ಭಾರತ-ಚೀನಾ ಗಡಿ ಉದ್ವಿಗ್ನತೆ ಮುಂತಾದ ಸಮಸ್ಯೆಗಳಿಗೆ ಕೇಂದ್ರವನ್ನು ದೂಷಿಸಿದರು.
ಸೀರೆ ತರಲು ಹೋಗುತ್ತಿದ್ದೆವು ಎಂದು ಶಾಸಕರು
ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿ ಶಾಸಕ ರಾಜೇಶ್ ಕಚ್ಚಪ್ ಮತ್ತು ಕೊಲೆಬೀರಾ ಶಾಸಕ ನಮನ್ ಬಿಕ್ಸಲ್ ಸಿಕ್ಕಿಬಿದ್ದಿರುವ ಮೂವರು ಶಾಸಕರು. ಬುಡಕಟ್ಟು ಜನಾಂಗದ ಹಬ್ಬಕ್ಕೆ ಸೀರೆ ಖರೀದಿಸಲು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇ.ಡಿ ತನಿಖೆಯನ್ನು ಕಾಂಗ್ರೆಸ್ ವಿರೋಧ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಭಾರಿ ಹಣದ ಜೊತೆ ಸಿಕ್ಕಿಬಿದ್ದಿರುವುದು ಕಾಂಗ್ರೆಸ್ಗೆ ಮುಜುಗರ ಉಂಟುಮಾಡಿದೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿದೆ.
ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ವಾದ
ಶಾಸಕರು ಸಿಕ್ಕಿಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್ನಲ್ಲಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ, "ಜಾರ್ಖಂಡ್ನಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ಇಂದು ರಾತ್ರಿ ಹೌರಾದಲ್ಲಿ ಬಹಿರಂಗವಾಗಿದೆ. ದೆಹಲಿಯಲ್ಲಿ 'ಹಮ್ ದೋ' ಗೇಮ್ ಪ್ಲಾನ್ ಎಂದರೆ ಇ.ಡಿ ಜೋಡಿಯ ಮೂಲಕ ಮಹಾರಾಷ್ಟ್ರದಲ್ಲಿ ಮಾಡಿದಂತೆ ಜಾರ್ಖಂಡ್ನಲ್ಲಿ ಮಾಡುವುದಾಗಿದೆ." ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ದಿಲೀಪ್ ಘೋಷ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು: ಹೌರಾದ ಪಂಚ್ಲಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾರ್ಖಂಡ್ನ 3 ಕಾಂಗ್ರೆಸ್ ಶಾಸಕರಿಂದ (ಜಮ್ತಾರಾ, ಖಿಜ್ರಿ, ಕೊಲೆಬಿರಾ) ಭಾರಿ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ಸಿಬಿಐ, ಇ.ಡಿಯನ್ನು ವಿರೋಧಿಸುತ್ತಿದೆ! ಕಾಂಗ್ರೆಸ್, ತೃಣಮೂಲದಂತಹ ಭ್ರಷ್ಟ ಪಕ್ಷಗಳು ತನಿಖಾ ಸಂಸ್ಥೆಗಳನ್ನು ವಿರೋಧಿಸುವ ಮೂಲಕ ಅಪರಾಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಭ್ರಷ್ಟಾಚಾರದ ವಿರುದ್ಧ ಇ.ಡಿ ಯ ತನಿಖೆ ಈಗಾಗಲೇ ಜಾರ್ಖಂಡ್ನಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದ್ದರು.