ಇಂದಿರಾ ಹತ್ಯೆಗೆ ಕಾರಣವಾದ ಆಪರೇಶನ್ ಬ್ಲೂ ಸ್ಟಾರ್: 10 ಸಂಗತಿ
ಭಾರತ ಕಂಡ ದಿಟ್ಟ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾದ ಆಪರೇಶನ್ ಬ್ಲೂ ಸ್ಟಾರ್ ಗೆ ಇಂದಿಗೆ 35 ವರ್ಷ! ಈ ದೇಶದ ಇತಿಹಾಸದ ಪುಟಗಳಲ್ಲಿ ಕೆಲವೆಡೆ 'ದಿಟ್ಟ ನಡೆ' ಎಂದೂ, ಹಲವು ಕಡೆ 'ಹತ್ಯಾಕಾಂಡ' ಎಂದೂ ಬಣ್ಣಿಸಿಕೊಂಡ ಆಪರೇಶನ್ ಬ್ಲೂ ಸ್ಟಾರ್ ಎಂಬ ಸೇನಾ ಕಾರ್ಯಾಚರಣೆ ನಡೆದು ಜೂನ್ 1 ಕ್ಕೆ 34 ವರ್ಷಗಳು ಸಂದಿವೆ.
ಸಿಕ್ಖರಿಗಾಗಿ ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆ ಇಟ್ಟು 1984 ರ ಮೇ-ಜೂನ್ ತಿಂಗಳಿನಲ್ಲಿ ಪಂಜಾಬಿನ ಅಮೃತಸರದಲ್ಲಿರುವ ಸ್ವರ್ಣಮಂದಿರವನ್ನು ಕೆಲ ಮತಾಂಧ ಉಗ್ರರು ವಶಪಡಿಸಿಕೊಂಡಿದ್ದರು. ಸ್ವರ್ಣ ಮಂದಿರದೊಳಗೆ ಅಡಗಿಕುಳಿತು ಅಲ್ಲಿಗೆ ಬಂದಿದ್ದ ಜನರನ್ನು ಒತ್ತೆ ಇರಿಸಿಕೊಂಡು, ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವುದು ಅವರ ಉದ್ದೇಶವಾಗಿದ್ದು. ಶಾಂತಿಯುತ ಸಂಧಾನಕ್ಕಾಗಲೀ, ಕರೆಗಾಗಲೀ ಒಪ್ಪದಿದ್ದಾಗ ದಿಟ್ಟ ಪ್ರಧಾನಿ ಇಂದಿರಾ ಗಾಂಧಿ ಅಷ್ಟೇ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ದೇಶವನ್ನು ಒಡೆಯುವ ಈ ಹುನ್ನಾರಕ್ಕೆ ತಮ್ಮ ಸುತಾರಾಂ ಬೆಂಬಲವಿಲ್ಲ ಎಂಬುದನ್ನು ತಮ್ಮ ನಡೆಯ ಮೂಲಕ ತೋರಿಸಿಕೊಟ್ಟ ಇಂದಿರಾ, ಸೇನೆಯನ್ನು ಸ್ವರ್ಣ ಮಂದಿರಕ್ಕೆ ಕಳಿಸಿಕೊಟ್ಟಿದ್ದರು.
ಎಮರ್ಜೆನ್ಸಿ : ಇತಿಹಾಸದಿಂದ ಆಯ್ದ 12 ಪುಟಗಳು
ಈ ಕಾರ್ಯಾಚರಣೆಗೆ ಇಟ್ಟಿದ್ದ ಹೆಸರೇ ಆಪರೇಶನ್ ಬ್ಲೂ ಸ್ಟಾರ್! ಜೂನ್ 1 ರಿಂದ ಆರಂಭವಾಗಿ ಜೂನ್ 8ರ ವರೆಗೂ ನಡೆದ ಈ ಕಾರ್ಯಾಚರಣೆಯಲ್ಲಿ ಕೊನೆಗೂ ಉಗ್ರರನ್ನು ಹತ್ತಿಕ್ಕಲು ಸೇನೆ ಸಫಲವಾಯಿತು. ಈ ದಿನದ ಸ್ಮರಣೆಗಾಗಿ ಪ್ರತಿ ವರ್ಷ ಜೂನ್ 01ನ್ನು ಆಪರೇಶನ್ ಬ್ಲೂ ಸ್ಟಾರ್ ದಿನ ಎಂದು ಆಚರಿಸಲಾಗುತ್ತದೆ.
ಖಾಲಿಸ್ತಾನ ಚಳವಳಿಯಿಂದ ಆಪರೇಶನ್ ಬ್ಲೂಸ್ಟಾರ್
ಈ ಕಾರ್ಯಾಚರಣೆಗೆ ಮೂಲ ಎಂದರೆ 1940-50 ರ ದಶಕದಲ್ಲಿ ಆರಂಭವಾದ ಖಾಲಿಸ್ತಾನ ಚಳವಳಿ ಎನ್ನಬಹುದು. ಇದೊಂದು ಸಿಕ್ಖ್ ರಾಜಕೀಯ ಪ್ರತ್ಯೇಕತಾವಾದಿಗಳ ಚಳವಳಿ. ಈ ಚಳವಳಿಯ ಉದ್ದೇಶ ಸಿಕ್ಖ್ ಜನರಿಗಾಗಿ ಪ್ರತ್ಯೇಕ ಖಾಲಿಸ್ತಾನ ದೇಶದ ನಿರ್ಮಾಣ. 1970-80 ರ ದಶಕದಲ್ಲಿ ಈ ಚಳವಳಿ ತೀವ್ರ ಸ್ವರೂಪ ಪಡೆದಿತ್ತು.
ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?
ಖಾಲಿಸ್ತಾನ್ ಚಳವಳಿ ರೂವಾರಿ ಬಿಂದ್ರಾನ್ ವಾಲೆ
ದಂದಾಮಿ ತಕ್ಷಾಲ್ ಎಂಬ ಸಿಕ್ಖ್ ಶಿಕ್ಷಣ ಸಂಸ್ಥೆಯ ನಾಯಕನಾಗಿದ್ದ ಜರ್ನೈಲ್ ಸಿಂಗ್ ಬಿಂದ್ರಾನ್ ವಾಲೆ ಈ ಖಾಲಿಸ್ತಾನ ಚಳವಳಿಯ ಮುಂದಾಳತ್ವ ವಹಿಸಿದ್ದ. ಅಲ್ಲದೆ ಧರ್ಮದ ಕಾರಣವನ್ನು ನೀಡು ಜನರನ್ನು ಈ ಚಳವಳಿಗೆ ಸೇರಿಸಲು ಪ್ರಯತಿಸುತ್ತಿದ್ದ. ಈ ಕಾರಣದಿಂದಲೇ ಆತ ಮತ್ತು ಆತನ ಬೆಂಬಲಿಗರು ಪಂಜಾಬಿನ ಅಮೃತಸರದಲ್ಲಿರುವ ಸಿಕ್ಖರ ಪವಿತ್ರ ಸ್ಥಳವಾದ ಸ್ವರ್ಣಮಂದಿರವನ್ನು ವಶಪಡಿಸಿಕೊಂಡಿದ್ದರು. ಇಲ್ಲಿಗೆ ಬಂದಿದ್ದ ಜನರನ್ನೂ ಒತ್ತೆಯಾಗಿರಿಸಿಕೊಂಡು ಪ್ರತ್ಯೇಕ ಖಾಲಿಸ್ತಾನ್ ಸರ್ಕಾರದ ಬೇಡಿಕೆ ಇಟ್ಟಿದ್ದರು.
ಆಪರೇಶನ್ ಬ್ಲೂ ಸ್ಟಾರ್ ಗೆ ಸೂಚನೆ ನೀಡಿದ ಇಂದಿರಾ ಗಾಂಧಿ
ಸ್ವರ್ಣ ಮಂದಿರದೊಳಗೆ ಅಡಗಿ ಕುಳಿತ ಉಗ್ರರನ್ನು ಹತ್ತಿಕ್ಕಲು ಬೇರೆ ದಾರಿ ಕಾಣದಿದ್ದಾಗ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ಆಪರೇಶನ್ ಬ್ಲೂ ಸ್ಟಾರ್ ಎಂಬ ಹೆಸರಿನಲ್ಲಿ ಸೇನಾ ಕಾರ್ಯಾಚರಣೆಗೆ ಕರೆನೀಡಿದರು. ಸಿಕ್ಖರ ಪವಿತ್ರ ನೆಲೆಯಾದ ಸ್ವರ್ಣಮಂದಿರಕ್ಕೆ ಘಾಸಿಯಾಗದ ರೀತಿಯಲ್ಲಿ ಕಾರ್ಯಚರಣೆ ಮಾಡಲು ಭಾರತೀಯ ಸೇನೆ ಸಾಕಷ್ಟು ಪ್ರಯತ್ನಿಸಿತು. ಹೆಲಿಕಾಪ್ಟರ್, ಟ್ಯಾಂಕ್, ಫಿರಂಗಿ, ಶಸ್ತ್ರಾಸ್ತ್ರ ತುಂಬಿದ ವಾಹನಗಳನ್ನು ಬಳಸಿಕೊಂಡು ಸ್ವರ್ಣ ಮಂದಿರದತ್ತ ಸೇನೆ ಮುನ್ನುಗ್ಗಿತು.
ಪಂಜಾಬಿನಾದ್ಯಂತ ಅಕ್ಷರಶಃ ತುರ್ತುಪರಿಸ್ಥಿತಿ!
1 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಈ ಸಂದರ್ಭದಲ್ಲಿ ಪಂಜಾಬಿನಾದ್ಯಂತ ನಿಯೋಜಿಸಲಾಗಿತ್ತು. ಆಪರೇಶನ್ ಬ್ಲೂ ಸ್ಟಾರ್ ಅನ್ನು ಎರಡು ಭಾಗವಾಗಿ ವಿಂಗಡಿಸಲಾಗಿತ್ತು. ಮೊದಲನೆಯದು ಆಪರೇಶನ್ ಮೆಟಲ್: ಇದರ ಪ್ರಕಾರ ಹರ್ಮಿಂದರ್ ಸಾಹಿಬ್ ಸಂಕೀರ್ಣವನ್ನು ಸೇನೆ ವಶಪಡಿಸಿಕೊಳ್ಳುವುದು. ಆಪರೇಶನ್ ಶಾಪ್ ಪ್ರಕಾರ ಎಲ್ಲೆಡೆ ಕರ್ಫ್ಯೂ ಜಾರಿಗೊಳಿಸಿ, ಶಂಕಿತರನ್ನು ಬಂಧಿಸುವುದು.
ಬೆಚ್ಚಿ ಬಿದ್ದ ಜನರು!
ಸೇನೆ ಮೊದಲು ಹರ್ಮಿಂದರ್ ಸಾಹಿಬ್ ಸಂಕೀರ್ಣದ ಮೂಲಕ ಗುರು ರಾಮ್ ದಾಸ್ ಲಂಗಾರ್ ಕಟ್ಟಡಕ್ಕೆ ಪ್ರವೇಶಿಸಿತ್ತು. ಪಂಜಾಬ್ ರಾಜ್ಯದಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿತ್ತು. 24 ಗಂಟೆಗಳ ಕಾಲವೂ ಸೇನೆ ಪಂಜಾಬಿನಾದ್ಯಂತ ಗಸ್ತು ತಿರುಗುತ್ತ ಪ್ರತಿಯೊಬ್ಬರ ನಡೆಯ ಮೇಲೂ ಕಣ್ಣಿಟ್ಟಿತ್ತು. ಹರ್ಮಿಂದರ್ ಸಾಹಿಬ್ ಸಂಕೀರ್ಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಇದರಿಂದ ಉಗ್ರರೊಂದಿಗೆ, ದೇವಾಲಯಕ್ಕೆಂದು ಬಂದಿದ್ದ ಜನಸಾಮಾನ್ಯರೂ ಸಿಕ್ಕಿಹಾಕಿಕೊಳ್ಳುವಂತಾಗಿತ್ತು.
ಜನರ ಪರದಾಟ
ಎಲ್ಲೆಲ್ಲೂ ಕರ್ಫ್ಯೂ ಜಾರಿಯಾಗಿದ್ದರಿಂದ ಸಾರಿಗೆಗೆ, ಜೊತೆಗೆ ದಿನಬಳಕೆಯ ವಸ್ತುಗಳಿಗೆ ಪರದಾಡುವಂತಾಯ್ತು. ಮಾಧ್ಯಮಗಳೂ ಪ್ರವೇಶಿಸುವಂತಿರಲಿಲ್ಲ. ಇದರಿಂದ ಪಂಜಾಬಿನಲ್ಲಿ ಏನಾಗುತ್ತಿದೆ ಎಂಬುದೇ ದೇಶದ ಇತರ ಭಾಗಗಳಿಗೆ ತಿಳಿಯದಂತಾಗಿತ್ತು. ಆದರೂ ಕೆಲವು ಪತ್ರಕರ್ತರು ಪ್ರಾಣಭಯ ಮರೆತು ಈ ಘಟನೆಯನ್ನು ಸೆರೆ ಹಿಡಿದಿದ್ದು ಸ್ಮರಣೀಯ.
ಸಂಧಾನಕ್ಕೂ ಒಪ್ಪದ ಬಿಂದ್ರಾನ್ ವಾಲೆ
ಸಂಧಾನಕ್ಕೂ ಪ್ರಯತ್ನ ನಡೆಯಿತು. ಬಿಂದ್ರಾನ್ ವಾಲೆಯ ಮನವೊಲಿಸಿ, ಹಲವು ಸಾವುನೋವುಗಳನ್ನು ತಪ್ಪಿಸುವ ಸಲುವಾಗಿ ಸಂಧಾನದ ಪ್ರಯತ್ನವನ್ನೂ ಸರ್ಕಾರ ಮಾಡಿತು. ಈ ನಿಟ್ಟಿನಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ(ಎಸ್ ಜಿಪಿಸಿ)ಯ ಮಾಜಿ ಮುಖ್ಯಸ್ಥ ಗುರುಚರಣ್ ಸಿಂಗ್ ತೊಹ್ರಾ ಅವರನ್ನು ಸಂಧಾನಕ್ಕಾಗಿ ನೇಮಿಸಲಾಯಿತು. ಆದರೆ ಅವರ ರಾಜಿ ಮಾತಿಗೆ ಬಿಂದ್ರಾನ್ ವಾಲೆ ಬೆಲೆ ನೀಡದಿದ್ದುದು, ಪರಿಸ್ಥಿತಿಯ ವಿಕೋಪಕ್ಕೆ ಕಾರಣವಾಯಿತು.
ಸ್ವರ್ಣಮಂದಿರ ವಶಪಡಿಸಿಕೊಂಡ ಸೇನೆ
ಒಂದು ವಾರಗಳ ಸತತ ಕಾರ್ಯಾಚರಣೆಯ ನಂತರ ಸ್ವರಣಮಂದಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸೇನೆ ಸಫಲವಾಯಿತು. ಜೂನ್ 08 ರಂದು ಕಾರ್ಯಾಚರಣೆ ಮುಕ್ತಾಯವಾಯಿತು. ಕಾರ್ಯಾಚರಣೆಯಲ್ಲಿ 83 ಸೇನಾ ಸಿಬ್ಬಂದಿ ಹುತಾತ್ಮರಾದರೆ, 1592 ಜನ ಮೃತರಾದರು. ಈ ಕಾರ್ಯಾಚರಣೆಯಲ್ಲೇ ಜೂನ್ 06 ರಂದು ಬಿಂದ್ರಾನ್ ವಾಲೆ ಸಹ ಹತನಾದ.
ಇಂಧಿರಾ ಗಾಂಧಿ ಹತ್ಯೆಗೂ ಇದೇ ಕಾರಣ!
ಇಂದಿರಾ ಗಾಂಧಿಯವರಿಗೆ ದಿಟ್ಟ ಪ್ರಧಾನಿ ಎಂಬ ಪಟ್ಟ ತಂದಿತ್ತ ಇದೇ ಕಾರ್ಯಾಚರಣೆಯೇ ಮುಂದೆ ಅವರ ಹತ್ಯೆಗೂ ಕಾರಣವಾಯ್ತು. ಈ ಹತ್ಯೆಯ ಪ್ರತೀಕಾರ ಎಂಬಂತೆ ಈ ಘಟನೆ ನಡೆದ ನಾಲ್ಕೇ ತಿಂಗಳಲ್ಲಿ ಇಂದಿರಾ ಹತ್ಯೆಯಾದರು. 1984, ಅಕ್ಟೋಬರ್ 31 ರಂದು ಅವರ ಸಿಕ್ಖ್ ಭದ್ರತಾ ಸಿಬ್ಬಂದಿ ಶತ್ವಂತ್ ಸಿಂಗ್ ಮತ್ತು ಬೀಂತ್ ಸಿಂಗ್ ಎಂಬ ಇಬ್ಬರು ಅವರನ್ನು ಅವರ ನಿವಾಸದ ಎದುರಲ್ಲೇ ಹತ್ಯೆ ಮಾಡಿದರು. ಮರಣೋತ್ತರ ಪರೀಕ್ಷೆ ಮಾಡಿದಾಗ ಇಂದಿರಾ ಅವರ ದೇಹದಲ್ಲಿ ಒಟ್ಟು 33 ಗುಂಡುಗಳು ಸಿಕ್ಕಿದ್ದವು!
ಇತಿಹಾಸದಲ್ಲಿ ಇದು ಕರಾಳ ದಿನ
ಇಂದಿರಾ ಹತ್ಯೆಯ ನಂತರ ಮತ್ತೆ ಸಿಕ್ಖ್ ನರಮೇಧ ನಡೆಯಿತು. ಇದರಲ್ಲಿ 3000 ಕ್ಕೂ ಹೆಚ್ಚು ಸಿಕ್ಖರು ಮೃತರಾದರು. ಆಪರೇಶನ್ ಬ್ಲೂ ಸ್ಟಾರ್ ಅನ್ನು ಕೆಲವರು ಇಂದಿರಾ ಗಾಂದಿಯವರ ದಿಟ್ಟ ನಿರ್ಧಾರ ಎಂದಿದ್ದರೆ, ಮತ್ತೆ ಕೆಲವರು ಇದು ಮಾನವೀಯತೆಯ ಕಗ್ಗೊಲೆ ಎಂದಿದ್ದಾರೆ. ಮಾನವ ಹಕ್ಕು ಉಲ್ಲಂಘಿಸುವ ಮೂಲಕ ಇಂದಿರಾ ಗಾಂಧಿ ತಮ್ಮ ಸಾವನ್ನು ತಾವೇ ಆಮಂತ್ರಿಸಿದರು ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಆಪರೇಶನ್ ಬ್ಲೂ ಸ್ಟಾರ್ ಎಂಬುದು ಭಾರತೀಯ ಇತಿಹಾಸದ ಕರಾಳ ಘಟನೆಯಾಗಿ ಅಚ್ಚೊತ್ತಿದೆ.