ತಾಯಿ ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ : ಅಯ್ಯರ್ ವ್ಯಂಗ್ಯ
ಸೋಲನ್ (ಹಿಮಾಚಲ ಪ್ರದೇಶ), ಅಕ್ಟೋಬರ್ 09 : "ತಾಯಿ ಮತ್ತು ಮಗ ಮಾತ್ರ ಪಕ್ಷದ ಅಧ್ಯಕ್ಷ ಗದ್ದುಗೆಗೇರಲು ಸಾಧ್ಯ" ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರು ಹೇಳಿರುವುದು ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆಯುವ ಸಾಧ್ಯತೆಯಿದೆ.
ಅವರ ಹೇಳಿಕೆಯಲ್ಲಿ ನೋವು ಅಡಗಿದೆಯಾ ಅಥವಾ ವಸ್ತುಸ್ಥಿತಿಯ ಬಗ್ಗೆ ಅವರ ವ್ಯಂಗ್ಯವಾಡಿದ್ದಾರಾ ಅಥವಾ ಅಧ್ಯಕ್ಷ ಗದ್ದುಗೆಗೇರುವ ಅರ್ಹತೆ ಪಕ್ಷದಲ್ಲಿ ಯಾರಿಗೂ ಇಲ್ಲ ಎಂಬುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಾಗಿದೆಯಾ? ಮಣಿ ಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಹೇಗೆ ಬೇಕಾದರೂ ಅರ್ಥೈಸಬಹುದು.
ನವೆಂಬರ್ ನಲ್ಲಿ ರಾಹುಲ್ ಗಾಂಧಿಗೆ ಪಟ್ಟಾಭಿಷೇಕ
ರಾಹುಲ್ ಗಾಂಧಿ ಅವರು ತಾವು ಪಕ್ಷದ ಅಧ್ಯಕ್ಷನಾಗಲು ಸಿದ್ಧ ಎಂಬ ಹೇಳಿಕೆಯನ್ನೂ ಈಗಾಗಲೆ ನೀಡಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಾದರೆ ಚುನಾವಣೆ ಮಾಡಬೇಕಾಗುತ್ತದೆ. ಆದರೆ, ಅವರ ವಿರುದ್ಧ ನಿಲ್ಲುವಂಥ ವ್ಯಕ್ತಿಯೇ ಇಲ್ಲವೆಂದ ಮೇಲೆ ಚುನಾವಣೆ ನಡೆಸುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
76 ವರ್ಷದ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರ ಹೇಳಿಕೆಯಲ್ಲಿ ವಿಡಂಬನೆಯ ಜೊತೆಗೆ ನೋವು ಕೂಡ ಅಡಗಿರುವುದು ನಿಚ್ಚಳವಾಗಿ ಕಾಣಿಸುತ್ತದೆ. ತಮಗೆ ಪಕ್ಷದ ಅಧ್ಯಕ್ಷರಾಗುವ ಎಲ್ಲ ಅರ್ಹತೆಗಳಿದ್ದರೂ ಪರಿಗಣಿಸಿಲ್ಲ ಎಂಬ ನೋವು, ಹತಾಷೆ ಅವರ ಮಾತುಗಳಲ್ಲಿ ಎದ್ದು ಕಾಣಿಸುವಂತಿದೆ.
ಮೋದಿ ಸರಕಾರದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ : ರಾಹುಲ್
ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಮಣಿ ಶಂಕರ್ ಅಯ್ಯರ್ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದನಿಯೆತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವವಿರುವುದೇ ಆದರೆ, ಬೇರೆಯವರು ನಾಮಪತ್ರ ಸಲ್ಲಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್ ಇತರರಿಗೆ ಕರೆ ನೀಡಬೇಕು ಮತ್ತು ನಾಮಪತ್ರ ಸಲ್ಲಿಸಲು ಅವಕಾಶ ನೀಡಬೇಕು. ಅದಾಗಲು ಸಾಧ್ಯವೆ?
ರಾಹುಲ್ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿಯಾಗಿದೆ
ಚುನಾವಣೆ ನಡೆಯುವುದು ಅತ್ಲಾಗಿರಲಿ, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ದೆಹಲಿ ಕಾಂಗ್ರೆಸ್ ಘಟಕ ಈಗಾಗಲೆ ನಿರ್ಣಯ ತೆಗೆದುಕೊಂಡಿದೆ. ಇತ್ತೀಚೆಗೆ ರಾಹುಲ್ ಅವರು ಅಮೆರಿಕ ಪ್ರವಾಸಕ್ಕೆ ಹೋಗಿದ್ದಾಗ, ತಾವು ಪಕ್ಷದ ಅಧ್ಯಕ್ಷರಾಗಲು ರೆಡಿ ಎಂದು ಘಂಟಾಘೋಷವಾಗಿ ಸಾರಿದ್ದರು.
ಅಮೆರಿಕದಲ್ಲಿ ನಗೆಪಾಟಲಿಗೀಡಾಗಿದ್ದ ರಾಹುಲ್
ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯವಾಗಿ ಆಡಳಿತ ನಡೆಯುತ್ತಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಪ್ರಜೆಯೊಬ್ಬರು ಕೇಳಿದಾಗ, ಭಾರತದಲ್ಲಿ ವಂಶಪಾರಂಪರ್ಯವೆಂಬುದು ರಾಜಕೀಯ, ಸಿನೆಮಾ, ವಾಣಿಜ್ಯ ಮುಂತಾದ ರಂಗಗಳಲ್ಲಿ ಅಡಕವಾಗಿದೆ, ಇದೇನು ಹೊಸದಲ್ಲ ಎಂದು ಹಲವರ ಹೆಸರುಗಳನ್ನು ಹೇಳಿ ನಗೆಪಾಟಲಿಗೀಡಾಗಿದ್ದರು.
ಭಾರತದಲ್ಲಿ ಇದು ಸರ್ವೇಸಾಮಾನ್ಯ
ಸೆಪ್ಟೆಂಬರ್ 12ರಂದು ಬರ್ಕಲಿಯಲ್ಲಿ ಮಾಡಿದ ಭಾಷಣದಲ್ಲಿ, ಅಖೇಲೇಶ್ ಯಾದವ್, ಅಭಿಷೇಕ್ ಬಚ್ಚನ್, ಕರುಣಾನಿಧಿ ಮಗ ಸ್ಟಾಲಿನ್ ಇವರೆಲ್ಲ ವಂಶಪಾರಂಪರ್ಯವಾಗಿ ಮುಂದುವರಿದಿದ್ದಾರೆ. ಭಾರತದಲ್ಲಿ ಇದು ಸರ್ವೇಸಾಮಾನ್ಯ. ಹೀಗಾಗಿ, ಕೇವಲ ನನ್ನನ್ನು ಮಾತ್ರ ಗುರಿ ಮಾಡಬೇಡಿ ಎಂದು ನಗುನಗುತ್ತ ರಾಹುಲ್ ಉತ್ತರ ನೀಡಿದ್ದರು.
ಬಿಜೆಪಿ ನಾಯಕರಿಂದ ತೀವ್ರ ಟೀಕೆ
ರಾಹುಲ್ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಬಿಜೆಪಿಯ ನಾಯಕರಾದ ಅಮಿತ್ ಶಾ, ಅರುಣ್ ಜೇಟ್ಲಿ, ಸ್ಮೃತಿ ಇರಾನಿ ಮುಂತಾದವರು ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಜಕಾರಣಿಗಳು ಮಾತ್ರವಲ್ಲ ಅಮಿತಾಭ್ ಬಚ್ಚನ್, ರಿಷಿ ಕಪೂರ್ ಅವರು ಕೂಡ ಟ್ವಿಟ್ಟರ್ ನಲ್ಲಿ ರಾಹುಲ್ ಅವರಿಗೆ ತಿರುಗೇಟು ನೀಡಿದ್ದರು.
ರಾಹುಲ್ ವಿರುದ್ಧ ಸ್ಪರ್ಧಿಸುವವರು ಯಾರು?
ತಾವು ಚುನಾವಣೆಗೆ ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೇನೋ ನಿಜ. ಆದರೆ, ಅವರ ವಿರುದ್ಧ ಸ್ಪರ್ಧಿಸುವವರು ಯಾರು? ಅವರ ವಿರುದ್ಧ ನಾಮಪತ್ರ ಸಲ್ಲಿಸುವ ಧೈರ್ಯವಾದರೂ ಕಾಂಗ್ರೆಸ್ ಪಕ್ಷದಲ್ಲಿ ಯಾವ ನಾಯಕನಿಗಿದೆ? ಯಾರಾದರೂ ಧೈರ್ಯ ತೋರಿದರೆ ಅವರು ಅಕ್ಟೋಬರ್ 10, ಮಂಗಳವಾರ ನಾಮಪತ್ರ ಸಲ್ಲಿಸಬೇಕಾಗುತ್ತದೆ.
ಫಲಿತಾಂಶ ಅಕ್ಟೋಬರ್ 25ರಂದು ಪ್ರಕಟ
ಅಕ್ಟೋಬರ್ 10ರಂದು ನಾಮಪತ್ರ ಸಲ್ಲಿಸಿ, ಫಲಿತಾಂಶ ಅಕ್ಟೋಬರ್ 25ರಂದು ಪ್ರಕಟವಾಗಲಿದೆ. ಯಾರು ನಾಮಪತ್ರ ಸಲ್ಲಿಸುತ್ತಾರೆ, ಯಾರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಕಾಂಗ್ರೆಸ್ನ ವಂಶಪಾರಂಪರ್ಯ ಆಡಳಿತದ ವಿರುದ್ಧ ತೊಡೆತಟ್ಟಿ ನಿಲ್ಲುವ ನಾಯಕರು ಯಾರಾದರೂ ಇದ್ದಾರಾ?