ಹಿಮಾಲಯದ ಗುಹೆಯಲ್ಲಿ ಧ್ಯಾನ ಮಾಡಿದರೆ ನೈಸರ್ಗಿಕ ವಿಪತ್ತಿನಿಂದ ರಕ್ಷಿಸಲು ಆಗೊಲ್ಲ: ಶಿವಸೇನಾ
ಡೆಹ್ರಾಡೂನ್, ಫೆಬ್ರುವರಿ 10: "ಹಿಮಾಲಯದ ಗುಹೆಯಲ್ಲಿ ಧ್ಯಾನ ಮಾಡಿದರೆ ಭೌಗೋಳಿಕವಾಗಿ ದುರ್ಬಲವಾಗಿರುವ ಉತ್ತರಾಖಂಡವನ್ನು ರಕ್ಷಿಸಲು ಸಾಧ್ಯವಿಲ್ಲ" ಎಂದು ವ್ಯಂಗ್ಯ ಮಾಡುವ ಮೂಲಕ ಉತ್ತರಾಖಂಡ ಹಿಮಪ್ರವಾಹ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಶಿವಸೇನೆ ತರಾಟೆಗೆ ತೆಗೆದುಕೊಂಡಿದೆ.
ಭಾನುವಾರ ಸಂಭವಿಸಿದ ಉತ್ತರಾಖಂಡ ಹಿಮಪ್ರವಾಹದ ಕುರಿತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ತನ್ನ ಸಾಮ್ನಾ ಪತ್ರಿಕೆಯಲ್ಲಿ ಸಂಪಾದಕೀಯ ಪ್ರಕಟಿಸಿರುವ ಶಿವಸೇನೆ, ಈ ಘಟನೆಗೆ ಮೋದಿಯನ್ನು ದೂರಿದೆ. "ಹಿಮಾಲಯದ ಗುಹೆಗಳಲ್ಲಿ ಧ್ಯಾನ ಮಾಡುವುದರಿಂದ ಮಾತ್ರ ದೇವಭೂಮಿಯನ್ನು ರಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದೆ. ಮುಂದೆ ಓದಿ...
ಇದೇ ಬ್ಯಾರಿಕೇಡ್ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದರೆ ಭಾರತ ಹೀಗಿರುತ್ತಿರಲಿಲ್ಲ; ಶಿವಸೇನೆ
"ದೇವಭೂಮಿ ರಕ್ಷಣೆಗೆ ಯೋಜನೆಗಳನ್ನು ನಿಲ್ಲಿಸಿ"
ಉತ್ತರಾಖಂಡವನ್ನು ದೇವಭೂಮಿ ಎಂದು ಕರೆಯಲಾಗುತ್ತದೆ. ದೇವರು ನೆಲೆಸಿರುವ ಈ ದೇವಭೂಮಿಯನ್ನು ರಕ್ಷಿಸಲು, ಈ ದೇವಭೂಮಿ ಮೇಲೆ ಹಲ್ಲೆ ನಡೆಸುವಂಥ ಜಲ ಯೋಜನೆಗಳನ್ನು ಮೊದಲು ನಿಲ್ಲಿಸಬೇಕು. ಹೀಗೆ ಮಾಡದೇ ಇದ್ದರೆ, ಇನ್ನೂ ಇಂಥ ಬೃಹತ್ ಅವಘಡಗಳನ್ನು ನಮ್ಮ ಮುಂದಿನ ಪೀಳಿಗೆ ಎದುರು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ವೈರಲ್ ಆಗಿದ್ದ ಮೋದಿ ಧ್ಯಾನ ಮಾಡುತ್ತಿದ್ದ ಚಿತ್ರ
ಈ ಹಿಂದೆ ಕೇದಾರನಾಥ ದೇವಸ್ಥಾನದ ಸಮೀಪ ರುದ್ರಾ ಗುಹೆಗೆ ಮೋದಿ ಭೇಟಿ ನೀಡಿದ್ದರ ಕುರಿತು ಪ್ರಸ್ತಾಪ ಮಾಡಲಾಗಿದೆ. 2019ರ ಲೋಕಸಭಾ ಚುನಾವಣೆ ಪ್ರಚಾರದ ನಂತರ ಇಲ್ಲಿಗೆ ಭೇಟಿ ನೀಡಿದ್ದ ಮೋದಿ ರುದ್ರಾ ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ್ದರು. ಅವರು ಧ್ಯಾನ ಮಾಡಿದ್ದ ಚಿತ್ರ ಕೂಡ ವೈರಲ್ ಆಗಿತ್ತು. ಆನಂತರ ಉತ್ತರಾಖಂಡ ಸರ್ಕಾರ ಇನ್ನೆರಡು ಗುಹೆಗಳನ್ನು ಕಟ್ಟಿಸಿತು. ಕೇದಾರನಾಥದಲ್ಲಿ ಈ ಮೂರು ಗುಹೆಗಳು ಈಗ ಪ್ರವಾಸೀ ತಾಣವಾಗಿದೆ.
ಅಣ್ಣಾ ಹಜಾರೆ ನಿಲುವಾದರೂ ಏನು?; ಶಿವಸೇನೆಯಿಂದ ಟೀಕೆ
"ಪ್ರಾಕೃತಿಕ ವಿಕೋಪವಲ್ಲ, ಮಾನವನ ಅತಿಕ್ರಮಣದ ಫಲ"
"ದೇವಭೂಮಿ ಅಳುತ್ತಿದೆ; ಯೋಜನೆಗಳನ್ನು ನಿಲ್ಲಿಸಿ" ಎಂಬರ್ಥದ ಶೀರ್ಷಿಕೆ ಹೊಂದಿರುವ ಸಂಪಾದಕೀಯದೊಂದಿಗೆ ಶಿವಸೇನೆ ಉತ್ತರಾಖಂಡದಲ್ಲಿ ಕೇಂದ್ರ ಸರ್ಕಾರದ ಹಲವು ಜಲ ಯೋಜನೆಗಳ ಕುರಿತು ಟೀಕೆ ಮಾಡಿದೆ. ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಪ್ರವಾಹ ಪ್ರಾಕೃತಿಕ ವಿಕೋಪವಲ್ಲ. ಮಾನವನ ಅತಿಕ್ರಮಣದ ಫಲ ಎಂದು ಆರೋಪಿಸಿದೆ.
"ಹಿಂದಿನ ಘಟನೆಯಿಂದ ಯಾರೂ ಬುದ್ಧಿ ಕಲಿತಿಲ್ಲ"
ಏಳು ವರ್ಷದ ಹಿಂದೆ ಕೇದಾರನಾಥದಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಈ ಘಟನೆಯಿಂದ ಯಾರೂ ಪಾಠ ಕಲಿತಂತೆ ಕಾಣುತ್ತಿಲ್ಲ. ಕೇದಾರನಾಥ ಘಟನೆ ನಂತರ ತಜ್ಞರು ಎಚ್ಚರಿಕೆ ನೀಡಿ ವರದಿ ಸಲ್ಲಿಸಿದ್ದರು. ಆನಂತರ ಸುಪ್ರೀಂ ಕೋರ್ಟ್ 24 ಯೋಜನೆಗಳಿಗೆ ತಡೆ ನೀಡಿತು. ಆದರೆ ಸರ್ಕಾರ ಇನ್ನೊಂದು ಸಮಿತಿ ರಚಿಸಿತು. ಈ ಘಟನೆಯಿಂದ ಯಾರೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಎಷ್ಟೋ ಜನರನ್ನು ಹಾಗೂ ಎಷ್ಟೋ ಯೋಜನೆಗಳನ್ನು ಈ ಹಿಮಪ್ರವಾಹ ಕೊಚ್ಚಿ ಹಾಕಿದೆ. ಜಲವಿದ್ಯುತ್ ಯೋಜನೆಗಳು ಈ ಘಟನೆ ನಡೆಯಲು ಕಾರಣ ಎಂದು ಆರೋಪಿಸಿದೆ.