ಆಧಾರ್ ಪ್ರಚಾರಕ್ಕೆ ಮಕ್ಕಳಿಗಾಗಿ ವಿಡಿಯೋ ಸ್ಪರ್ಧೆ, ನಗದು ಬಹುಮಾನ
ಆಧಾರ್ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮಕ್ಕಳಿಗಾಗಿ ವಿಡಿಯೋ ಸ್ಪರ್ಧೆ ಏರ್ಪಡಿಸಿ, ಆಧಾರ್ ನ ಪ್ರಯೋಜನದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಸ್ಪರ್ಧೆಗೆ ಭಾಗವಹಿಸಲು ಏಪ್ರಿಲ್ 22 ಕೊನೆ ದಿನ.
ನವದೆಹಲಿ, ಏಪ್ರಿಲ್ 18: ಆಧಾರ್ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಸಲುವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹೊಸ ಆಲೋಚನೆ ಮಾಡಿದ್ದು, ವಿಡಿಯೋ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಅದರಲ್ಲಿ ಮಕ್ಕಳು ಆಧಾರ್ ನ ಪ್ರಯೋಜನಗಳ ಬಗ್ಗೆ ತಿಳಿಸಬೇಕು. ಆ ವಿಡಿಯೋ ಸ್ಪರ್ಧೆಗೆ ಭಾಗವಹಿಸಲು ಏಪ್ರಿಲ್ 22 ಕೊನೆ ದಿನ.
ಮಕ್ಕಳು ಆಧಾರ್ ಅನುಕೂಲಗಳ ಬಗ್ಗೆ ವಿವರಿಸಿರುವುದನ್ನು ಪೋಷಕರು ವಿಡಿಯೋ ಚಿತ್ರೀಕರಣ ಮಾಡಬೇಕು. ಆಧಾರ್ ಯಾಕೆ ಮಾಡಿಸಬೇಕು ಅಥವಾ ಅವರಿಗೆ ಗೊತ್ತಿರುವವರ ಪೈಕಿ ಯಾರಿಗಾದರೂ ಆಧಾರ್ ನಿಂದ ಹೇಗೆ ಪ್ರಯೋಜನವಾಯಿತು ಎಂಬ ಬಗ್ಗೆ ವಿವರಣೆಯನ್ನು ಹೊಂದಿರಬೇಕು.[ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಸಿದ್ಧತೆ]
ಯಾವುದೇ ಭಾರತೀಯ ಭಾಷೆಯಲ್ಲಿ ವಿಡಿಯೋ ಇರಬಹುದು. ಆದರೆ ಮೂವತ್ತು ಸೆಕೆಂಡ್ ಗಳ ಅವಧಿಯ ವಿಡಿಯೋ ಆಗಿರಬೇಕು. ಪೋಷಕರು ಆನ್ ಲೈನ್ ಮೂಲಕ ವಿಡಿಯೋ ಸಲ್ಲಿಸಬಹುದು ಮತ್ತು ನಗದು ಬಹುಮಾನವನ್ನು ಗೆಲ್ಲಬಹುದು. ಮೊದಲ ಇಪ್ಪತ್ತು ಮಂದಿ ವಿಜೇತರಿಗೆ 5 ಸಾವಿರ ನಗದು ಬಹುಮಾನ, ಆ ನಂತರದ 50 ವಿಜಯಿಗಳಿಗೆ ತಲಾ 1 ಸಾವಿರ ಬಹುಮಾನ ನೀಡಲಾಗುತ್ತದೆ. ವಿಜಯಿಗಳನ್ನು ಮೇ 3ರಂದು ಸಂಪರ್ಕಿಸಲಾಗುತ್ತದೆ.