ಒನ್ಇಂಡಿಯಾದ 9ನೇ ವೆಬ್ ಪೋರ್ಟಲ್ ಒಡಿಯಾ ಲೋಕಾರ್ಪಣೆ
ಸುದ್ದಿ ಸ್ವಾರಸ್ಯಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ತನ್ನದಾಗಿಸಿಕೊಂಡಿರುವ ಒನ್ಇಂಡಿಯಾ ತನ್ನ ವೆಬ್ ಪೋರ್ಟಲ್ ಗಳ ಸಂಖ್ಯೆಯನ್ನು 9ಕ್ಕೇರಿಸಿಕೊಂಡಿದೆ. ಭಾರತದ ಸಂಪದ್ಭರಿತ, ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವೆನಿಸಿಕೊಂಡಿರುವ ಒಡಿಶಾ ಜನತೆಗಾಗಿ ಒಡಿಯಾ ಭಾಷೆಯಲ್ಲಿ ಒನ್ಇಂಡಿಯಾ ವೆಬ್ ಪೋರ್ಟಲ್ ಲೋಕರ್ಪಣೆ ಮಾಡಲಾಗಿದೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಜೊತೆಗೆ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಗುಜರಾತಿ ಭಾಷೆಗಳಲ್ಲಿ ಒನ್ಇಂಡಿಯಾ ವೆಬ್ ಪೋರ್ಟಲ್ ಕಾರ್ಯ ನಿರ್ವಹಿಸುತ್ತಿದೆ.
ಭಾರತದ ಆಗ್ನೇಯ ಭಾಗದಲ್ಲಿರುವ ಒಡಿಶಾ(ಈ ಹಿಂದಿನ ಒರಿಸ್ಸಾ ರಾಜ್ಯ)ಮಹಾಭಾರತ ಕಾಲದಿಂದಲೂ ಕಳಿಂಗ ನಾಡು ಎಂದು ಜನಪ್ರಿಯ. ಬುಡಕಟ್ಟು ಜನಾಂಗಕ್ಕೆ ಆಶ್ರಯ ನೀಡಿರುವ ಒಡಿಶಾಕ್ಕೆ ಸುಮಾರು 5000ಕ್ಕೂ ಹಿಂದಿನ ಇತಿಹಾಸವಿದೆ. ಇಲ್ಲಿನ ಕಲೆ, ಪರಂಪರೆ, ಇತಿಹಾಸ, ಸಂಸ್ಕೃತಿ, ಸಂಪ್ರದಾಯ, ಪ್ರವಾಸಿ ತಾಣ, ದೇಗುಲಗಳನ್ನು ಹೆಮ್ಮೆಯಿಂದ ಪರಿಚಯಿಸುವ, ಎಲ್ಲಾ ದಿಕ್ಕುಗಳ ಆಗು ಹೋಗುಗಳನ್ನು ಹೆಕ್ಕಿ ಸುದ್ದಿಯಾಗಿ ಮುಂದಿಡುವ ಪ್ರಯತ್ನವನ್ನು ಒನ್ಇಂಡಿಯಾದ ಒಡಿಯಾ ವೆಬ್ ತಾಣ https://odia.oneindia.com ಮಾಡಲಿದೆ. ಜೊತೆಗೆ ದೇಶ, ವಿದೇಶ, ಕ್ರೀಡಾ ಸುದ್ದಿಗಳು ಓದುಗರಿಗೆ ಸಿಗಲಿದೆ.
ಕಳಿಂಗ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ. ಈ ಪ್ರದೇಶವನ್ನು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರು ಆಳಿದ್ದಾರೆ. ಬ್ರಿಟಿಷರಿಂದ 1936ರಲ್ಲಿ ಮುಕ್ತಿ ಪಡೆದ ರಾಜ್ಯಕ್ಕೆ ಸದ್ಯ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಾ ಬಂದಿದ್ದಾರೆ.
ಹಿಂದೂ, ಬೌದ್ಧ, ಜೈನ ಧರ್ಮೀಯರು, 62ಕ್ಕೂ ಅಧಿಕ ಬುಡಕಟ್ಟು ಜನಾಂಗದವರು ನೆಲೆಸಿದ ಈ ನಾಡಿನಲ್ಲಿ ಸಂಗೀತ ಪರಂಪರೆಗೆ 2000 ವರ್ಷಗಲ ಇತಿಹಾಸವಿದೆ. ಒಡಿಸ್ಸಿ ನೃತ್ಯಪ್ರಕಾರವು ಜಗತ್ ಪ್ರಸಿದ್ಧವಾಗಿದೆ. ಪುರಿಯ ಜಗನ್ನಾಥ ದೇಗುಲ, ಕೋನಾರ್ಕ್ ಸೂರ್ಯ ದೇಗುಲ, ಚಿಲ್ಕಾ ಸರೋವರ, ಬೆಂಗಾಲಿಗಳಂತೆ ಒಡಿಶಾದಲ್ಲಿ ರಸಗುಲ್ಲಾ, ಚೆನ್ನಾ ಪೋಡಾ ಜನಪ್ರಿಯ. ಭಾರತದ ಹೆಮ್ಮೆಯ ರಾಜ್ಯಕ್ಕೆ ಕೊಡುಗೆ ರೂಪದಲ್ಲಿ ಒನ್ಇಂಡಿಯಾ ತಂಡವು ಈ ಹೊಸ ವೆಬ್ ಪೋರ್ಟಲ್ ಮುಂದಿಡುತ್ತಿದೆ.