ಮೋದಿ ಸರ್ಕಾರ ಉಗ್ರವಾದ ಮೆಟ್ಟಿ ನಿಂತಿದ್ದು ಹೇಗೆ?
ನವದೆಹಲಿ, ಮೇ 25: ಉಗ್ರರ ಕರಿನೆರಳ ಆತಂಕದಲ್ಲೇ ನರೇಂದ್ರ ಮೋದಿ ಅಧಿಕಾರ ಹಿಡಿದು ಒಂದು ವರ್ಷ ಕಳೆಯುತ್ತಿದೆ. ದೇಶ ಸಾಕಷ್ಟು ಆಂತರಿಕ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭವನ್ನು ಮೋದಿ ಮೆಟ್ಟಿ ನಿಂತಿದ್ದಾದರೂ ಹೇಗೆ?
ಜೀಹಾದ್ ಮತ್ತು ಉಗ್ರವಾದ ಮುಖೇನ ರಾಷ್ಟ್ರದ ಆಂತರಿಕ ಭದ್ರತೆಗೆ ತಡೆ ಒಡ್ಡುವಂಥ ಅನೇಕ ಸಂದರ್ಭಗಳು ಎದುರಾಗುತ್ತಿದ್ದವು. ಭಾರತೀಯ ಯುವಕರನ್ನು ವಿವಿಧ ವಾಮಮಾರ್ಗದ ಮೂಲಕ ಐಎಸ್ ಐಸ್ ಸಂಘಟನೆ ತನ್ನ ಮುಷ್ಟಿಗೆ ತೆಗೆದುಕೊಳ್ಳುವ ಯತ್ನ ಮಾಡುತ್ತಿತ್ತು.[ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]
ಮೋದಿ ಇವುಗಳನ್ನು ಹೇಗೆ ನಿಭಾಯಿಸಿದರು? ಕಳೆದ ಒಂದು ವರ್ಷದ ಅವಧಿಯಲ್ಲಿ ಆಂತರಿಕ ಭದ್ರತೆಗೆ ಸಂಬಂಧಿಸಿ ಯಾವೆಲ್ಲ ಪ್ರಮುಖ ಬೆಳವಣಿಗಳಾದವು? ಹಿಂದಿನ ಸರ್ಕಾರದ ನೀತಿ ಹೇಗೆ ಬದಲಾಯಿತು? ಎಂಬ ಎಲ್ಲ ಸಂಗತಿಗಳ ಮೇಲೆ ಒಂದು ನೋಟ ಇಲ್ಲಿದೆ.
ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿ
ಮೋದಿ ಇಟ್ಟ ಮೊದಲ ಹೆಜ್ಜೆ ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿ (ಎನ್ ಎಸ್ ಎ) ನೇಮಕ. ಗುಪ್ತಚರದಳ ಮತ್ತು ' ರಾ' ನಡುವೆ ಇದ್ದ ಸಂವಹನ ಕೊರತೆ ಮಾಹಿತಿ ಸಂಗ್ರಹಣಕ್ಕೆ ಕೊಂಚ ಅಡ್ಡಿಯಾಗುತ್ತಿದ್ದುದನ್ನು ಮನಗಂಡ ಮೋದಿ ಈ ಕ್ರಮ ತೆಗೆದುಕೊಂಡರು.
ಐಎಎಸ್ ಗ್ರೇಡ್ ನ ಅಧಿಕಾರಿ ನೇಮಕ
ಐಎಎಸ್ ಗ್ರೇಡ್ ನ ಅಧಿಕಾರಿಗಳನ್ನು ಎನ್ ಎಸ್ ಎಗೆ ನೇಮಕ ಮಾಡಿಕೊಳ್ಳಲಾಯಿತು. ಪ್ರತಿಯೊಂದು ಇಲಾಖೆಯನ್ನು ಇದರ ವ್ಯಾಪ್ತಿಗೆ ತರುವಂತೆ ಮಾಡಲಾಯಿತು. ಅಲ್ಲದೇ ರಾಜ್ಯ ಮತ್ತು ಸೂಕ್ಷ್ಮ ಪ್ರದೇಶಗಳಲ್ಲೂ ಏಜೆನ್ಸಿಗೆ ಸಂಬಂಧಿಸಿದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು ಮಾಹಿತಿಯ ಶೀಘ್ರ ಹರಿವಿಗೆ ಕಾರಣವಾಯಿತು.
ಬರ್ಧ್ವಾನ್ ಬಾಂಬ್ ಸ್ಫೋಟ
ಪಶ್ಚಿಮ ಬಂಗಾಳದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಇಡೀ ದೇಶದಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಬಾಂಗ್ಲಾದ ಉಗ್ರ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ ಘಟನೆಯ ಹೊಣೆ ಹೊತ್ತುಕೊಂಡಿತ್ತು.
ಪೊಲೀಸರಿಗೆ ಮಾರ್ಗದರ್ಶಕ ಸೂತ್ರ
ಕೇಂದ್ರ ಸರ್ಕಾರ ಭದ್ರತಾ ವೈಫಲ್ಯ ಎದುರಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ ಕೇಂದ್ರ ಸರ್ಕಾರ ಪ್ರಕರಣವನ್ನು ಎನ್ ಎಸ್ ಎಗೆ ವಹಿಸಿತ್ತು. ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು ಮುಂದೆ ಇಂಥ ಪ್ರಕರಣ ನಡೆಯದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರು. ಅಲ್ಲದೆ ಸ್ಥಳೀಯ ಪೊಲೀಸ್ ಇಲಾಖೆಗೂ ಮಾರ್ಗದರ್ಶನ ಸೂತ್ರ ನೀಡಿದ್ದರು.
ಇಂಡಿಯನ್ ಮುಜಾಹಿದ್ದೀನ್ ಸದ್ದು ಅಡಗಿತು
ಇಂಡಿಯನ್ ಮುಜಾಹಿದ್ದೀನ್ ದೇಶದ ಒಳಗೆ ಭಯದ ಬೀಜ ಬಿತ್ತುತ್ತಿತ್ತು. ಸಂಘಟನೆಯ ಯಾಸಿನ್ ಭಟ್ಕಳ್ ನನ್ನು ಬಂಧಿಸುವ ಮೂಲಕ ಉಗ್ರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಯಿತು.
ಅಮಾಯಕರಿಗೆ ಇಲ್ಲ ಶಿಕ್ಷೆ
ಇದರ ಜತೆಗೆ ಸಿಮಿ ಉಗ್ರರಿಗೂ ಮೋದಿ ಸರ್ಕಾರ ಸಿಂಹಸ್ವಪ್ನವಾಯಿತು. ಹಿಂದಿನ ಸರ್ಕಾರಗಳು ಅಮಾಯಕರಿಗೆ ಉಗ್ರರು ಎಂಬ ಹಣೆಪಟ್ಟಿ ಕಟ್ಟುತ್ತಿದ್ದ ಆರೋಪ ಹೊಂದಿತ್ತು. ಆದರೆ ಮೋದಿ ಸರ್ಕಾರ ಈ ಆರೋಪಕ್ಕೆ ಗುರಿಯಾಗಲಿಲ್ಲ.
ಪಾಕಿಸ್ತಾನದ ಬೋಟ್ ಸ್ಫೋಟ
2014 ರ ಡಿಸೆಂಬರ್ ನಲ್ಲಿ ನಡೆಸ ಪಾಕಿಸ್ತಾನದ ಬೋಟ್ ಸ್ಫೋಟ ಸವಾಲಾಗಿ ಪರಿಣಮಿಸಿತ್ತು. ಮುಂಬೈ ದಾಳಿ ಮಾದರಿಯಲ್ಲೇ ಉಗ್ರರು ದೇಶದ ಒಳಕ್ಕೆ ನುಗ್ಗಲು ಯತ್ನ ನಡೆಸಿದ್ದರು ಎಂಬ ಮಾಹಿತಿ ನಂತರ ಬಹಿರಂಗವಾಗಿತ್ತು. ಸಮುದ್ರದಲ್ಲಿ ಗಡಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಯುವಕರನ್ನು ಸೆಳೆವ ಐಎಸ್ ಐಎಸ್
ಐಎಸ್ ಐಎಸ್ ಸಂಘಟನೆ ಸೇರಲು ಮುಂದಾಗಿದ್ದವರು, ಸೇರಿ ಹಿಂದಕ್ಕೆ ಬಂದವರು ಸುದ್ದಿಯಾದರು. ಭಾರತದಲ್ಲಿನ 300 ಕ್ಕೂ ಅಧಿಕ ಯುವಕರನ್ನು ಸೆಳೆಯಲು ಉಗ್ರ ಸಂಘಟನೆ ವಿವಿಧ ಮಾರ್ಗಗಳ ಮೂಲಕ ಪ್ರಯತ್ನ ಮಾಡಯತ್ತಲೇ ಇತ್ತು. ಇದಕ್ಕೆ ತಡೆಯೊಡ್ಡಿದ್ದು ಮೋದಿ ಸರ್ಕಾರದ ಸಾಧನೆಯೇ.
ಅರೀಬ್ ಮಜೀದ್ ಬಂಧನ
ಬಂಧಿತ ಉಗ್ರ ಅರೀಬ್ ಮಜೀದ್ ಯಾವ ಬಗೆಯಲ್ಲಿ ಉಗ್ರರು ತಮ್ಮ ಲಾಭ ಮಾಡಿಕೊಳ್ಳುತ್ತಾರೆ ಎಂಬುದನ್ನು ಹೇಳಿದ್ದ. ಇರಾಕ್ ಮತ್ತು ಇರಾನ್ ಗೆ ತೆರಳುವವರ ಬಗ್ಗೆಯೂ ಸರ್ಕಾರ ವಿಶೇಷ ನಿಗಾ ವಹಿಸಿತ್ತು.
ಸುದ್ದಿಗೆ ಬಂದ ದಾವೂದ್ ಇಬ್ರಾಹಿಂ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹುಡುಕಾಟ ಮತ್ತು ಹಸ್ತಾಂತರದ ಬಗೆಗೂ ಅನೇಕ ಕ್ರಮ ತೆಗೆದುಕೊಳ್ಳಲಾಯಿತು. ದಾವೂದ್ ಗೆ ಸಂಬಂಧಿಸಿದ ಹಣದ ಹರಿವನ್ನು ಭಾರತದಲ್ಲಿ ತಡೆಯಲಾಯಿತು. ಆದರೆ ದಾವೂದ್ ಗೆ ಸಂಬಂಧಿಸಿ ಪಾಕಿಸ್ತಾನದ ಜತೆ ನಡೆದ ಮಾತುಕತೆಗಳು ಯಾವುದೂ ಫಲಪ್ರದವಾಗಲಿಲ್ಲ.
ಗುಪ್ತಚರದಳದ ನಿರ್ವಹಣೆ
ಕೇಂದ್ರ ಸರ್ಕಾರ ಗುಪ್ತಚರದಳಕ್ಕೆ ಇನ್ನು ಹೆಚ್ಚಿನ ಬಲ ತುಂಬಬೇಕಾಗಿದೆ. ದಾಖಲೆಗಳನ್ನು ಕಲೆ ಹಾಕಲು ಎಲ್ಲ ಇಲಾಖೆಗಳಿಂದ ಇನ್ನು ಹೆಚ್ಚಿನ ಸಹಕಾರದ ಅಗತ್ಯವಿದೆ. ಗುಪ್ತಚರದಳ ಸ್ವತಂತ್ರವಾಗಿ ತನಿಖೆ ನಡೆಸಬಹುದಾಗಿದ್ದರೂ ಆಯಾ ರಾಜ್ಯದ ಭದ್ರತಾ ಇಲಾಖೆಗಳಿಂದ ಉತ್ತಮ ಬೆಂಬಲ ಸಿಗಬೇಕಿದೆ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಆಂತರಿಕ ಭದ್ರತೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಕಾಪಾಡಿಕೊಳ್ಳಲು ಸಾಧ್ಯವಿದೆ.