ಎಎಪಿ ರಾಷ್ಟ್ರೀಯ ಪಕ್ಷವಾಗಲು ಇನ್ನೂ ಒಂದೇ ಹೆಜ್ಜೆ ಬಾಕಿ
ನವದೆಹಲಿ,ಆಗಸ್ಟ್ 9: ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಘೋಷಿಸಲು ಒಂದು ಹೆಜ್ಜೆ ದೂರವಿದೆ ಎಂದು ಹೇಳಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಷದ ಸ್ವಯಂಸೇವಕರನ್ನು ಅವರ ಶ್ರಮಕ್ಕಾಗಿ ಅಭಿನಂದಿಸಿದ್ದಾರೆ.
ಭಾರತದ ಚುನಾವಣಾ ಆಯೋಗವು ಎಎಪಿಯನ್ನು ಗೋವಾದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿದ ನಂತರ ಅರವಿಂದ್ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಪಂಜಾಬ್ ನಂತರ, ಎಎಪಿ ಈಗ ಗೋವಾದಲ್ಲಿ ರಾಜ್ಯ ಮಾನ್ಯತೆ ಪಡೆದ ಪಕ್ಷವಾಗಿದೆ. ನಾವು ಇನ್ನೂ ಒಂದು ರಾಜ್ಯದಲ್ಲಿ ಗುರುತಿಸಿಕೊಂಡರೆ ಅಧಿಕೃತವಾಗಿ ರಾಷ್ಟ್ರೀಯ ಪಕ್ಷ ಎಂದು ಘೋಷಿಸಲಾಗುವುದು. ಅವರ ಶ್ರಮಕ್ಕಾಗಿ ಪ್ರತಿಯೊಬ್ಬ ಸ್ವಯಂಸೇವಕರನ್ನು ನಾನು ಅಭಿನಂದಿಸುತ್ತೇನೆ. ನಾನು ಎಎಪಿ ಮತ್ತು ಅದರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದಗಳು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಉಚಿತ ಶಿಕ್ಷಣ, ವಿದ್ಯುತ್, ಆರೋಗ್ಯ ಸೇವೆಗೆ ಕೇಜ್ರಿವಾಲ್ ಆಗ್ರಹ
ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯಲು ಭಾರತದಲ್ಲಿನ ಒಂದು ರಾಜಕೀಯ ಪಕ್ಷವು ಈ ಮೂರು ಮಾನದಂಡಗಳಲ್ಲಿ ಯಾವುದನ್ನಾದರೂ ಪೂರೈಸಬೇಕು. 1.ಯಾವುದೇ 4 ರಾಜ್ಯಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 6 ರಷ್ಟು ಮತ ಗಳಿಕೆ, 2. ಹಾಗೆಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ 4 ಸ್ಥಾನಗಳು ಅಥವಾ 3. ಕನಿಷ್ಠ 3 ರಾಜ್ಯಗಳಿಂದ ಚುನಾಯಿತರಾದ ಸಂಸದರೊಂದಿಗೆ ಕಳೆದ ಅಂತಹ ಚುನಾವಣೆಯಲ್ಲಿ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 2%; ಅಥವಾ ಕನಿಷ್ಠ 4 ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಮಾನ್ಯತೆ ಇದನ್ನು ಪೂರೈಸಿದರೆ ರಾಷ್ಟ್ರೀಯ ಪಕ್ಷವಾಗುತ್ತದೆ.
ಕಾಂಗ್ರೆಸ್ ಬೆಂಬಲದ ಕೊರತೆ
ಜನಲೋಕಪಾಲ್ ಚಳವಳಿಯ ನಂತರ 2012 ರಲ್ಲಿ ಸ್ಥಾಪನೆಯಾದ ಎಎಪಿ 2013 ರ ದೆಹಲಿ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ ಬೆಂಬಲದ ಕೊರತೆಯಿಂದಾಗಿ ಭ್ರಷ್ಟಾಚಾರ ವಿರೋಧಿ ಜನಲೋಕಪಾಲ್ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾದ ನಂತರ ಸರ್ಕಾರವು 49 ದಿನಗಳಲ್ಲಿ ರಾಜೀನಾಮೆ ನೀಡಿತು.
ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!
ಈಗ ಪಂಜಾಬ್ನಲ್ಲಿಯೂ ಸರ್ಕಾರ
ಅದರ ನಂತರ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಮತ್ತು ಎಎಪಿ 2015ರ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿತು. ರಾಷ್ಟ್ರ ರಾಜಧಾನಿಯಲ್ಲಿ 2020ರ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಮರಳಿತು. ಎಎಪಿ ಈಗ ಪಂಜಾಬ್ನಲ್ಲಿಯೂ ಸರ್ಕಾರವನ್ನು ಹೊಂದಿದೆ. ಅಲ್ಲಿ ಜನರು ಹೊಸ ಪರ್ಯಾಯ ಸರ್ಕಾರಕ್ಕಾಗಿ ಮತ ಚಲಾಯಿಸಿದ್ದರಿಂದ ಅದು ಅಕಾಲಿದಳ ಮತ್ತು ಕಾಂಗ್ರೆಸ್ನ ಸಾಂಪ್ರದಾಯಿಕ ಶಕ್ತಿಗಳನ್ನು ಸೋಲಿಸಿತು.
ಸಿಂಗ್ರೌಲಿಯಲ್ಲಿ ಎಎಪಿಗೆ ಮೇಯರ್ ಸ್ಥಾನ
ಪಕ್ಷವು ತನ್ನ ರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗೆ ಮೊದಲ ಬಾರಿಗೆ ಮಧ್ಯಪ್ರದೇಶದ ಮುನ್ಸಿಪಲ್ ಚುನಾವಣೆಗೆ ಪ್ರವೇಶಿಸಿದ ಆಮ್ ಆದ್ಮಿ ಪಕ್ಷ (ಎಎಪಿ), ಗೆಲುವಿನ ಮೂಲಕ ಶುಭಾರಂಭ ಮಾಡಿತ್ತು. ಸಿಂಗ್ರೌಲಿಯಲ್ಲಿ ಎಎಪಿಯ ರಾಣಿ ಅಗರ್ವಾಲ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಪ್ರಕಾಶ್ ವಿಶ್ವಕರ್ಮ ಅವರನ್ನು 9,352 ಮತಗಳಿಂದ ಸೋಲಿಸಿ ಮೇಯಗಿರಿಯನ್ನು ಗೆದ್ದಿದ್ದರು. ಕಾಂಗ್ರೆಸ್ ಪ್ರತಿಸ್ಪರ್ಧಿ ಅರವಿಂದ್ ಸಿಂಗ್ ಚಾಂಡೆಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು.
ಕೇರಳದ ಟ್ವೆಂಟಿ20 ಪಕ್ಷದ ಜೊತೆ ಮೈತ್ರಿ
ಇದಲ್ಲದೆ ಕೇರಳದಲ್ಲೂ ಅರವಿಂದ್ ಕೇಜ್ರಿವಾಲ್ ಹೊಸ ಮೈತ್ರಿಕೂಟವನ್ನು ಪ್ರಕಟಿಸಿದ್ದರು. ಕೇರಳದ ಟ್ವೆಂಟಿ20 ಪಕ್ಷದ ಜೊತೆ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದ್ದರು. ಈ ಮೈತ್ರಿಕೂಟಕ್ಕೆ ಜನತಾ ಕಲ್ಯಾಣ ಮೈತ್ರಿಕೂಟ (ಪೀಪಲ್ಸ್ ವೆಲ್ಫೇರ್ ಅಲೈಯನ್ಸ್) ಎಂದು ಅವರು ಹೆಸರಿಟ್ಟಿದ್ದರು. ಇದರೊಂದಿಗೆ ಕೇರಳದಲ್ಲಿ ನಾಲ್ಕನೇ ಮೈತ್ರಿಕೂಟ ಉದಯವಾದಂತಾಗಿತ್ತು.