2020ರ ಜೂನ್ ತಿಂಗಳಲ್ಲಿ ''ಒಂದು ದೇಶ, ಒಂದು ಪಡಿತರ ಚೀಟಿ'' ಜಾರಿಗೆ
ನವದೆಹಲಿ, ಡಿಸೆಂಬರ್ 03: ''ಒಂದು ದೇಶ, ಒಂದು ಪಡಿತರ ಚೀಟಿ'' ವ್ಯವಸ್ಥೆಯನ್ನು ಜಾರಿಗೆ ತರಲು ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಂದಾಗಿದೆ. ಈ ಯೋಜನೆ ಯೋಜನೆ ಜೂನ್ 01, 2020ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಜನವರಿ ಬದಲಿಗೆ ಜೂನ್ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದಿದ್ದಾರೆ.
ಆನ್ ಲೈನ್ ಮೂಲಕ ಹೊಸ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹೇಗೆ?
ಈ ವ್ಯವಸ್ಥೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ. ಇಪಿಒಎಸ್ ಗಳಲ್ಲಿ ಬಯೋಮೆಟ್ರಿಕ್/ ಆಧಾರ್ ದೃಢೀಕರಣದ ನಂತರ ಪಡಿತರ ವ್ಯವಸ್ಥೆಯಲ್ಲಿ ಸಿಗುವ ಸೌಲಭ್ಯಗಳನ್ನು ಗಳಿಸಬಹುದು.
ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಒದಗಿಸುತ್ತಿವೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.
ಒಂದು ಕುಟುಂಬ ಅಥವಾ ವ್ಯಕ್ತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸ ಸ್ಥಳ ಬದಲಿಸಿದರೂ ಪಿಡಿಎಸ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಂದಿದೆ. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ ಎಂದು ತಿಳಿಸಿದರು.
ಅಂತಾರಾಜ್ಯ ವಲಸಿಗರು, ದಿನಗೂಲಿಗಳು, ನೀಲಿ ಕೊರಳಪಟ್ಟಿ ಕಾರ್ಮಿಕರು ಎಂದು ಗುರುತಿಸಿಕೊಂಡವರಿಗೆ ಈ ಆನ್ ಲೈನ್ ಪಿಡಿಎಸ್ ವ್ಯವಸ್ಥೆ ನೆರವಾಗಲಿದೆ.
ಸರ್ಕಾರವು ಆಹಾರದ ಮೇಲೆ ನೀಡುವ ಸಬ್ಸಿಡಿಯು 1.45 ಕೋಟಿ ತಲುಪಿದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಾಗುತ್ತಿದ್ದರೂ ಸಹಿತ ಜನರಿಗೆ ಕಡಿಮೆ ದರದಲ್ಲಿಯೇ ಆಹಾರ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.