ಪ್ರಧಾನಿ ಮೋದಿಗೆ ಲಕ್ಷಾಂತರ ರಾಖಿ ರವಾನೆ!
ಬೆಂಗಳೂರು, ಆಗಸ್ಟ್ 24: ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ರಕ್ಷಾ ಬಂಧನ ಹಬ್ಬಕ್ಕೆ ಭಾರತದೆಲ್ಲೆಡೆ ಭರ್ಜರಿ ತಯಾರಿ ಆರಂಭವಾಗಿದೆ. ಪ್ರಧಾನಿ ಮೋದಿ ಅವರಿಗೆ 'ರಕ್ಷಾ ಬಂಧನ' ನಿಮಿತ್ತ ಶುಭ ಹಾರೈಸಿ ಗುಜರಾತಿನ ಬಿಜೆಪಿ ಘಟಕ 1 ಲಕ್ಷ ರಾಖಿಯನ್ನು ಕಳಿಸಿದೆ.
ಗುಜರಾತಿನ ಎಲ್ಲೆಡೆಯಿಂದ ರಾಖಿಗಳನ್ನು ಸಂಗ್ರಹಿಸಿರುವ ಅಲ್ಲಿನ ಬಿಜೆಪಿ ಘಟಕ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿ ಒಂದು ಲಕ್ಷ ರಾಖಿಗಳನ್ನು ಕಳುಹಿಸಿದೆ. ಮಹಿಳಾ ಸಾಮಾಜಿಕ ಕಾರ್ಯಕರ್ತೆಯರು ಹಾಗೂ ಪಕ್ಷದ ನಾಯಕಿಯರೇ ಹೆಚ್ಚಾಗಿ ರಾಖಿ ಸಂಗ್ರಹಣೆಯಲ್ಲಿ ಮುತುವರ್ಜಿ ತೋರಿಸಿದ್ದಾರೆ. [ನೂಲಿನ ನಂಟು:ಇದೇ ರಕ್ಷಾ ಬಂಧನ]
ಈ ವರ್ಷ ಶನಿವಾರ ಆಗಸ್ಟ್ 29ರಂದು ರಕ್ಷಾ ಬಂಧನ್ ಎಲ್ಲೆಡೆ ಆಚರಿಸಲಾಗುತ್ತದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ದೆಹಲಿಯ ಶಾಲಾ ಮಕ್ಕಳು ರಾಖಿ ಕಟ್ಟುವ ಮೂಲಕ ಸಂಭ್ರಮಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ರಕ್ಷಾ ಬಂಧನವನ್ನು ಆಚರಿಸುವ ರಾಖಿ ಶ್ರಾವಣ ಹುಣ್ಣಿಮೆ ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ.
ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಈ ದಿನವು ಅತ್ಯಂತ ಮಂಗಳಕರವೆಂದು ಪ್ರತೀತಿ. ಸಂಗಮ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.