ಮಾತು ಮನೆ ಕೆಡಿಸಿತು, ಮುತ್ತು ಮದುವೆಯನ್ನೇ ಕೆಡಿಸಿತು!
ಅಲಿಘರ್, ಡಿ. 6 : ಒಂದು ಮುತ್ತನ್ನು ಸರಿಯಾದ ರೀತಿಯಲ್ಲಿ ಅರ್ಥೈಸದಿದ್ದರೆ ಎಷ್ಟು ಅಪಾರ್ಥಗಳಿಗೆ ಮತ್ತು ಎಷ್ಟು ಅನಾಹುತಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಆ ಮದುವೆ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು, ವಧು ಮತ್ತು ವರರಿಬ್ಬರ ಜೋಡಿ ಮೇಡ್ ಫಾರ್ ಈಚ್ ಅದರ್ ಅಂತಿತ್ತು, ಸಾಮಾಜಿಕ ತಾಣದ ಮೂಲಕ ಭೇಟಿಯಾದ ಅವರಿಬ್ಬರ ಮದುವೆಗೆ ಹೂಸುರಿಸಲು ಅಶ್ವಿನಿ ದೇವತೆಗಳು ಕೂಡ ಅಸ್ತು ಅಂದಿದ್ದರು. ಆದರೆ, ಆ ಮುತ್ತು ಇದೆಯಲ್ಲ... ಆ ಮುತ್ತು ಮದುವೆಯನ್ನೇ ಕೆಡಿಸಿದೆ!
ಮದುವೆಯ ಹಿಂದಿನ ರಾತ್ರಿ ವರೋಪಚಾರದ ಸಂದರ್ಭದಲ್ಲಿ ಹೀಗಾಗುತ್ತದೆ ಎಂದು ಬ್ರಹ್ಮನು ಕೂಡ ಎಣಿಸಿರಲಿಲ್ಲವೇನೋ. ಮದುವೆಯಾಗಲಿರುವ ತನ್ನ ಮುದ್ದಿನ ಮೈದುನನಿಗೆ, ವಧುವಿನ ಕಡೆಯವರಿಗೆ ಅಚ್ಚರಿ ಮೂಡುವಂತೆ ಅತ್ತಿಗೆ ಬಂದು ಸಂತೋಷದಲ್ಲಿ ಒಂದು ಹೂಮುತ್ತು ಕೊಟ್ಟಿದ್ದೇ ಅನರ್ಥಕ್ಕೆ ಕಾರಣವಾಯಿತು. ಸಾಲದೆಂಬಂತೆ ನರ್ತನಕ್ಕೂ ಎಳೆದುಕೊಂಡು ಹೋದಳು. [ಮದುವೆ ಪ್ರಮಾಣಪತ್ರ ಪಡೆಯುವುದು ಹೇಗೆ?]
ತಗೋ ನೋಡಿ. ಇದನ್ನು ಸಹಿಸದ ವಧುವಿನ ಕಡೆಯವರು ಇದೇನು ಛೀ ಅಂದರು. ಅದರಲ್ಲೇನು ತಪ್ಪು ಅಂತ ವರನ ಕಡೆಯವರು ಸಮಜಾಯಿಷಿ ಕೊಟ್ಟರು. ಇಡೀ ಮದುವೆ ಮಂಟಪವೇ ರಣರಂಗವಾಯಿತು. ನೆರೆದಿದ್ದ ಐನೂರು ಜನರ ನಡುವೆ ಮಾರಾಮಾರಿ ಹತ್ತಿಕೊಂಡಿತು. ಎರಡೂ ಕಡೆಯಿಂದ ಮಾತಿನ ಈಟಿಗಳು ತೂರಿಬಂದವು. ಕೆಲವರಿಗೆ ಸರಿಯಾಗಿ ಪೆಟ್ಟೂ ಬಿದ್ದವು. [ಎಡವಟ್ಟಾಯ್ತು ತಲೆಕೆಟ್ಟೋಯ್ತು!]
ಅವರಿಬ್ಬರ ಮಧ್ಯೆ ಏನೋ ಅನೈತಿಕ ಸಂಬಂಧ ಇದೆಯೆಂದು ಬಗೆದು ವಧುವಿನ ಕಡೆಯವರು ಎಷ್ಟು ರೊಚ್ಚಿಗೆದ್ದಿದ್ದರೆಂದರೆ, ವರನ ಕಡೆಯವರನ್ನು ಸರಿಯಾಗಿ ಝಾಡಿಸಿದ್ದಲ್ಲದೆ, ವರನನ್ನು ಅಲ್ಲಿಯೇ ಕಿಡ್ನಾಪ್ ಮಾಡಿ ಒತ್ತೆಯಾಳಾಗಿ ಇಟ್ಟುಕೊಂಡರು. ಅಲಿಘರ್ ಮೇಯರ್ ಶಕುಂತಲಾ ಭಾರತಿ ಅಲ್ಲೇ ಇದ್ದರೂ ಕೂಡ ಏನೂ ಮಾಡಲಾಗಲಿಲ್ಲ. [ಹುಡುಗಿ ಐಕ್ಯೂ ನೋಡಿ ಮದವಿ ಆಗ್ರೀಪಾ ಮತ್ತ!]
ಎರಡು ಕುಟುಂಬದವರು ಅತ್ಯಂತ ಸುಶಿಕ್ಷಿತರಾಗಿದ್ದಾರೆ, ಉತ್ತಮ ಹಿನ್ನೆಲೆಯವರಾಗಿದ್ದರೂ ಹೀಗೇಕೆ ಮಾಡಿಕೊಂಡರೋ ತಿಳಿಯುತ್ತಿಲ್ಲ. ವಧುವರರಿಗೆ ಆಶೀರ್ವಾದ ಮಾಡಬೇಕೆಂದು ಬಂದಿದ್ದ ನನಗೆ ನಿಜಕ್ಕೂ ಆಘಾತವಾಯಿತು. ಕಡೆಗೆ ವಧುವಿನ ಕಡೆಯವರ ಮನವೊಲಿಸಿ ವರನನ್ನು ಬಿಡುಗಡೆ ಮಾಡಿಸಬೇಕಾಯಿತು ಎಂದು ಮೇಯರ್ ಹೇಳಿದ್ದಾರೆ.
ಈ ಜಗಳವನ್ನು ಬಿಡಿಸಲು ಕಡೆಗೆ ಪೊಲೀಸರು ಆಗಮಿಸಬೇಕಾಯಿತು. ಇಷ್ಟಾದರೂ ಇಬ್ಬರ ಕಡೆಯವರು ಪೊಲೀಸರಿಗೆ ದೂರು ನೀಡದ್ದರಿಂದ, ಇದು ಅವರವರಿಗೆ ಬಿಟ್ಟ ವೈಯಕ್ತಿಕ ವಿಚಾರ ಎಂದು ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದು ಕಿಸ್ ಕೊಟ್ಟಿದ್ದನ್ನು ಕಿಸ್ ಆಫ್ ಲವ್ ಅಂತ ಪರಿಗಣಿಸಿದರೋ ಏನೋ? ಇವರ ಜಗಳಕ್ಕೆ ಬೆರಗಾಗಿ ದೇವತೆಗಳೂ ಪರಾರಿಯಾಗಿದ್ದಾರೆ! [ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ ಬೇಡವೋ]