ಶಾರುಖ್ ಖಾನ್ ಸಿನಿಮಾ ಪ್ರಚಾರದ ವೇಳೆ ವ್ಯಕ್ತಿ ಸಾವು
ವಡೋದರಾ, ಜನವರಿ 24: ಹಿಂದಿ ಚಿತ್ರ ನಟ ಶಾರುಖ್ ಖಾನ್ ಸಿನಿಮಾ ಪ್ರಚಾರದ ವೇಳೆ ಒಬ್ಬ ವ್ಯಕ್ತಿ ಮೃತಪಟ್ಟು, ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ತಮ್ಮ ಮುಂಬರುವ ಸಿನಿಮಾ 'ರಾಯಿಸ್'ನ ಪ್ರಚಾರಕ್ಕಾಗಿ ಸೋಮವಾರ ರಾತ್ರಿ ಗುಜರಾತ್ ನ ವಡೋದರಾ ರೈಲು ನಿಲ್ದಾಣಕ್ಕೆ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, "ರಾತ್ರಿ 10.30ರ ವೇಳೆಗೆ ರೈಲು ಪ್ಲಾಟ್ ಫಾರಂ ನಂಬರ್ ಆರಕ್ಕೆ ಬಂತು. ಹತ್ತು ನಿಮಿಷಗಳ ಕಾಲ ನಿಂತಿತ್ತು. ಶಾರುಖ್ ಅಭಿಮಾನಿಗಳು ತುಂಬ ಜನ ಸೇರಿದ್ದರು. ಮುಂಬೈನಿಂದ ರೈಲಿನಲ್ಲಿ ಬಂದಿದ್ದ ಶಾರುಖ್, ತಮ್ಮ ಚಿತ್ರದ ಪ್ರಚಾರಕ್ಕಾಗಿಯೇ ದೆಹಲಿಗೆ ಹೊರಟಿದ್ದರು".[ಪಟಾಕಿ ದುರಂತ: ವಡೋದರಾದಲ್ಲಿ ಬೆಂಕಿಗೆ 8 ಜನ ಬಲಿ]
ರೈಲು ನಿಲ್ಲುತ್ತಿದ್ದಂತೆಯೇ ಅಭಿಮಾನಿಗಳ ನೂಕುನುಗ್ಗಲಾಗಿ, ಒಬ್ಬರ ಮೇಲೆ ಒಬ್ಬರು ಬಿದ್ದು, ಕಿಟಕಿ ಒಳಗಿನಿಂದ ರೈಲಿನೊಳಗೆ ತೂರಲು ಯತ್ನಿಸಿದ್ದಾರೆ. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ರೈಲು ಚಲಿಸುತ್ತಿದ್ದಂತೆ ಅದರ ಜೊತೆಗೆ ಅಭಿಮಾನಿಗಳು ಓಡಲು ಆರಂಭಿಸಿದ್ದಾರೆ. ಆಗ ಏರ್ಪಟ್ಟು ಜಂಗುಳಿಯಲ್ಲಿ ಉಸಿರುಗಟ್ಟಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಅಭಿಮಾನಿಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಮೃತರನ್ನು ಸ್ಥಳೀಯ ರಾಜಕಾರಣಿ ಫರ್ಹೀದ್ ಖಾನ್ ಪಠಾಣ್ ಎಂದು ಗುರುತಿಸಲಾಗಿದೆ. ಕ್ರಿಕೆಟರ್ ಗಳಾದ ಇರ್ಫಾನ್ ಹಾಗೂ ಯೂಸುಫ್ ಪಠಾಣ್ ಕೂಡ ಶಾರುಖ್ ರನ್ನು ಭೇಟಿ ಮಾಡಬೇಕು ಎಂದು ರೈಲು ನಿಲ್ದಾಣದಲ್ಲಿ ಇದ್ದರು.