ಹೊತ್ತಿ ಉರಿಯುತ್ತಿರುವ ಇಟಾನಗರ್ ನಲ್ಲಿ ವ್ಯಕ್ತಿ ಸಾವು, ಡಿಸಿಎಂ ಮನೆಗೆ ಬೆಂಕಿ
ಇಟಾನಗರ್ (ಅರುಣಾಚಲಪ್ರದೇಶ), ಫೆಬ್ರವರಿ 24: ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ್ ನಲ್ಲಿ ಭಾನುವಾರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉಪ ಮುಖ್ಯಮಂತ್ರಿ ಚೌನಾ ಮೀನ್ ಅವರಿಗೆ ಸೇರಿದ ಬಹು ಮಹಡಿ ಖಾಸಗಿ ನಿವಾಸಕ್ಕೆ ಉದ್ರಿಕ್ತರ ಗುಂಪು ಬೆಂಕಿ ಹೊತ್ತಿಸಿದೆ.
ಹಲವು ಜನರಿದ್ದ ಗುಂಪು ಮುಖ್ಯಮಂತ್ರಿ ಪೇಮಾ ಖಂಡು ಅವರ ಖಾಸಗಿ ನಿವಾಸದತ್ತ ತೆರಳಿದ್ದಾರೆ. ಅದಕ್ಕೂ ಮುನ್ನ ಇಟಾನಗರ್ ನ ಮುಖ್ಯ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿ, ಆ ನಂತರ ಡೆಪ್ಯೂಟಿ ಕಮಿಷನರ್ ಕಚೇರಿ ನಾಶ ಮಾಡಿದ್ದಾರೆ. ಶಾಂತಿ ಪರಿಸ್ಥಿತಿ ಮರು ಸ್ಥಾಪಿಸಲು ಸೇನೆ ಹಾಗೂ ಅರೆಸೇನಾ ಪಡೆಯನ್ನು ಕರೆಸಿದ್ದು, ಅವರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.
5920 ಕೋಟಿಯ ದೇಶದ ಅತಿ ದೊಡ್ಡ ಸೇತುವೆ ಬಳಕೆಗೆ ಸಿದ್ಧ, ಏನು ವಿಶೇಷ?
ದಶಕಗಳಿಂದ ಅರುಣಾಚಲ ಪ್ರದೇಶದಲ್ಲಿ ಇರುವ ಬುಡಕಟ್ಟು ಜನಾಂಗವನ್ನು ಹೊರತುಪಡಿಸಿದ ಆರು ಜನಾಂಗದವರಿಗೆ ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ಸ್ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲ್ಲ ಎಂದು ಶುಕ್ರವಾರ ಖಂಡು ಹೇಳಿದ್ದರು. ಆ ನಂತರವೂ ಹಿಂಸಾಚಾರ ಬುಗಿಲೆದ್ದಿದೆ.
ಶನಿವಾರದಂದು ಇಟಾನಗರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಸೇನೆಯ ನೆರವು ಕೋರಿ, ಧ್ವಜ ಮೆರವಣಿಗೆ ನಡೆಸಿದ್ದರು. ಶುಕ್ರವಾರದಂದು ಗುಂಡು ತಿಂದು, ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಗುವಾಹತಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ರಾಜ್ಯ ಕಾರ್ಯಾಲಯದ ಮೇಲೆ ಗುಂಪೊಂದು ದಾಳಿ ನಡೆಸುವಾಗ ಗುಂಡು ಹಾರಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾರೆ. ಪೊಲೀಸರು ಹಾರಿಸಿದ್ದೋ ಅಥವಾ ದುಷ್ಕರ್ಮಿಗಳು ಹಾರಿಸಿದ ಗುಂಡೋ ಎಂಬುದು ಖಚಿತವಾಗಿಲ್ಲ.