ತಿಹಾರ್ ಜೈಲಿಗೆ ಹೋಗುವಾಗಲೂ ಮೋದಿ ಸರಕಾರವನ್ನು ಅಣಕಿಸಿದ ಚಿದಂಬರಂ
Recommended Video
ನವದೆಹಲಿ, ಸೆ 6: ಮೂರು ದಿನದ ಹಿಂದೆ ಸಿಬಿಐ ಕಸ್ಟಡಿ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿದಾಗ, ಸರಕಾರವನ್ನು ಅಣಕಿಸಿದ್ದ ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ, ಗುರುವಾರ (ಸೆ 5) ಮತ್ತೆ ಸರಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ.
ತಿಹಾರ್ ಜೈಲಿಗೆ ಹೋಗುವ ಮುನ್ನ ಪತ್ರಕರ್ತರ ಜೊತೆ ಮಾತನಾಡುತ್ತಾ, " ನನಗೆ ನನ್ನ ಜೈಲಿನ ಚಿಂತೆಯಿಲ್ಲ. ನನಗೆ ಚಿಂತೆ ಇರುವುದು, ಈ ದೇಶದ ಆರ್ಥಿಕತೆಯ ಬಗ್ಗೆ" ಎಂದು ಮತ್ತೆ ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ತಿಹಾರ್ ಜೈಲಿನಲ್ಲಿ ಪಿ.ಚಿದಂಬರಂಗೆ ಏನೇನೆಲ್ಲಾ ವ್ಯವಸ್ಥೆ
ಕಳೆದ ಮಂಗಳವಾರ (ಸೆ 3) ಸಿಬಿಐ ಕಸ್ಟಡಿ ವಿಸ್ತರಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, " ನಿಮಗೆ ಐದು ಪರ್ಸೆಂಟ್ ಅಂದರೆ ಗೊತ್ತಾ" ಎಂದು ದೇಶದ ಜಿಡಿಪಿ ಶೇ. 5ಕ್ಕೆ ಇಳಿದಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಪಿ.ಚಿದಂಬರಂಗೆ ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕ ಬೆನ್ನಲ್ಲೇ ರೋಸ್ ಅವಿನ್ಯೂ ಕೋರ್ಟ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿತ್ತು.
ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪಿ ಚಿದಂಬರಂರನ್ನು ತಿಹಾರ್ ಜೈಲಿಗೆ ಕಳುಹಿಸಿದ ರೋಸ್ ಅವಿನ್ಯೂ ಕೋರ್ಟ್
ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದರು. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು. (ಚಿತ್ರ: ಪಿಟಿಐ)