ಉತ್ತರಾಖಂಡದಲ್ಲಿ ಕಾರ್ಮಿಕರ ರಕ್ಷಣೆಗೆ ಸುರಂಗ ಕೊರೆದ ಸಿಬ್ಬಂದಿ
ಡೆಹ್ರಾಡೂನ್, ಫೆಬ್ರವರಿ.12: ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿ ಆರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಹೈಡಲ್ ಪವರ್ ಪ್ಲಾಂಟ್ ಗಾಗಿ ತೋಡಿದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಅಗೆಯುವ ಕಾರ್ಯ ನಡೆಸಲಾಗುತ್ತಿದೆ.
ಉತ್ತರಾಖಂಡ್ ಚಮೇಲಿ ಜಿಲ್ಲೆಯಲ್ಲಿ ಹಿಮಪಾತ ಮತ್ತು ಹಿಮನದಿ ಪ್ರವಾಹದಲ್ಲಿ ಇದುವರೆಗೂ 36 ಮಂದಿ ಮೃತದೇಹಗಳು ಪತ್ತೆಯಾಗಿದೆ. ಇಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಇನ್ನೂ 204 ಜನರು ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಭಡೋರಿಯಾ ತಿಳಿಸಿದ್ದಾರೆ.
ದೇವರ ಶಾಪ: ಉತ್ತರಾಖಂಡ್ ವಿಕೋಪಕ್ಕೆ ಕಾರಣವೇ "ದೇವಿ"ಯ ಕೋಪ!?
ಎನ್ ಟಿಪಿಸಿ 480 ಮೆಗಾ ವ್ಯಾಟ್ ತಪೋವನ-ವಿಷ್ಣುಗಢ್ ಹೈಡ್ರೋ ಪವರ್ ಪ್ರಾಜೆಕ್ಟ್ ಮತ್ತು 13.2 ಮೆಗಾ ವ್ಯಾಟ್ ನ ರಿಷಿಗಂಗಾ ಹೈಡಲ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿ ಅವಲೋಕನೆಗೆ ತಜ್ಞರ ತಂಡ:
ಉತ್ತರಾಖಂಡ್ ಚಮೋಲಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನದಿಯ ನೀರಿನ ಪ್ರಮಾಣ ಮತ್ತು ಹವಾಮಾನದಲ್ಲಿನ ಬದಲಾವಣೆಯನ್ನು ಮನಗಂಡು ಗುರುವಾರ ಕೆಲವು ಗಂಟೆಗಳವರೆಗೂ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಕೇಂದ್ರ ರಕ್ಷಣೆ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರ ತಂಡವನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದ್ದು, ಹವಾಮಾನವನ್ನು ಗಮನದಲ್ಲಿ ಇಟ್ಟುಕೊಂಡು ರಕ್ಷಣಾ ಕಾರ್ಯ ಮುಂದುವರಿಸಲಾಗುವುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮಾಹಿತಿ ನೀಡಿದ್ದಾರೆ.
600 ಭದ್ರತಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ:
ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಉತ್ತರಾಖಂಡ್ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರೇನಿ ಪಲ್ಲಿ, ಪಾಂಗ್, ಲಟಾ, ಸುರೈತೋಟಾ, ಸುಕಿ, ಭಲ್ಗೋನ್, ತೋಲ್ಮಾ, ಫಾಗ್ರಸು, ಲೊಂಗ್ ಸೇಗ್ದಿ, ಗಹಾರ್, ಭಂಗ್ಯೂಲ್, ಜುವಾಗ್ವಾಡ್, ಜುಗ್ಜು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಪಡೆಯ 600ಕ್ಕೂ ಹೆಚ್ಚು ಸಿಬ್ಬಂದಿಯು ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.