ಓಮಿಕ್ರಾನ್: ಪರೀಕ್ಷೆ ಹೆಚ್ಚಿಸಿ, ಹಾಟ್ಸ್ಪಾಟ್ಗಳನ್ನು ಪರಿಶೀಲಿಸಿ- ರಾಜ್ಯಗಳಿಗೆ ಕೇಂದ್ರ ಸೂಚನೆ
ನವದೆಹಲಿ, ನವೆಂಬರ್ 28: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರ ಓಮಿಕ್ರಾನ್ ಕಾಣಿಸಿಕೊಂಡಿದ್ದು, ಬಳಿಕ ಹಲವು ದೇಶಗಳಲ್ಲಿಯೂ ರೂಪಾಂತರವು ಪತ್ತೆಯಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಈ "ಕಾಳಜಿಯ ರೂಪಾಂತರ" ಎಂದು ಕರೆದಿದೆ. "ಕೋವಿಡ್ -19ನ ಹೊಸ ರೂಪಾಂತರವು ಭಾರತದಲ್ಲಿ ಕೋವಿಡ್ ಸೂಕ್ತ ನಡವಳಿಕೆ ಕುರಿತು ಎಚ್ಚರಿಸುವ ಕರೆಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸೂಚನೆ ನೀಡಿದೆ. ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ, ಹಾಟ್ಸ್ಪಾಟ್ಗಳನ್ನು ಪರಿಶೀಲಿಸಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಹೇಳಿದೆ. ಹಾಗೆಯೇ ಕೋವಿಡ್ ಲಸಿಕೆ ವ್ಯಾಪ್ತಿಯನ್ನು ವಿಸ್ತಾರ ಮಾಡುವಂತೆ ತಿಳಿಸಿದೆ.
ಓಮಿಕ್ರಾನ್ ರೂಪಾಂತರ ಯಾವೆಲ್ಲಾ ದೇಶದಲ್ಲಿ ಪತ್ತೆಯಾಗಿದೆ?, ಇಲ್ಲಿದೆ ಪಟ್ಟಿ
ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ ರೂಪಾಂತರದ ಕಂಡು ಬಂದ ಬೆನ್ನಲ್ಲೇ ಹಲವಾರು ದೇಶಗಳು ಬೇರೆ ಬೇರೆ ದೇಶಗಳಿಗೆ ನಿರ್ಬಂಧವನ್ನು ವಿಧಿಸಿದೆ. ಭಾರತವೂ ಕೂಡಾ ನಿರ್ಬಂಧವನ್ನು ವಿಧಿಸಿದೆ. ಆದರೆ ಈ ನಡುವೆ ಕೊರೊನಾ ವೈರಸ್ನ ಹೊಸ ರೂಪಾಂತರದಿಂದಾಗಿ ಅಪಾಯದಲ್ಲಿರುವ ದೇಶಗಳ ಪೈಕಿ ಭಾರತವು ಕೂಡಾ ಸೇರಿಕೊಂಡಿದೆ.
ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದೆ, "ಕೋವಿಡ್ನ ಹೊಸ ರೂಪಾಂತರ ಓಮಿಕ್ರಾನ್ ಹಿನ್ನೆಲೆಯಿಂದಾಗಿ ನಿಯಂತ್ರಣವನ್ನು ತೀವ್ರಗೊಳಿಸಿ, ಸಕ್ರಿಯವಾಗಿ ನಿಗಾ ವಹಿಸಿ, ಕೋವಿಡ್ ಲಸಿಕೆಯನ್ನು ಅಧಿಕಗೊಳಿಸಿ ಹಾಗೂ ಕೋವಿಡ್ ನಡವಳಿಕೆಯನ್ನು ಜನರು ಪಾಲನೆ ಮಾಡುತ್ತಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳಿ," ಎಂದು ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಬರುವ ಪ್ರಯಾಣಿಕರು ಈ ಹಿಂದೆ ಮಾಡಿದ ಪ್ರಯಾಣಗಳ ವಿವರವನ್ನು ನೀಡುವಂತೆ ಭಾರತವು ಕೇಳಿದೆ. ಅದಕ್ಕಾಗಿ ರಾಜ್ಯ ಸರ್ಕಾರಗಳಿಗೆ ಕಾರ್ಯ ವಿಧಾನವನ್ನು ಕೇಂದ್ರ ಸರ್ಕಾರವು ವಿವರಿಸಿದೆ. ತಳ ಮಟ್ಟದಲ್ಲೇ ಎಲ್ಲಾ ಪರಿಶೀಲನೆಯನ್ನು ನಡೆಸಲು ಕೇಂದ್ರವು ರಾಜ್ಯಗಳಿಗೆ ತಿಳಿಸಿದೆ.
"ಪರೀಕ್ಷೆ ಹೆಚ್ಚಿಸಿ, ಇಲ್ಲವಾದರೆ ಹರಡುವಿಕೆ ತಿಳಿಯಲು ಕಷ್ಟ"
"ಈ ಕೊರೊನಾ ವೈರಸ್ನ ಹೊಸ ರೂಪಾಂತರದ ಕಾರಣದಿಂದಾಗಿ ದೇಶದಲ್ಲಿ ಕೋವಿಡ್ ಹೆಚ್ಚಾದರೆ ಅದನ್ನು ನಿರ್ವಹಣೆ ಮಾಡಲು ಸಾಕಷ್ಟು ಪರೀಕ್ಷಾ ಕೇಂದ್ರಗಳು, ಮೂಲ ಸೌಕರ್ಯಗಳನ್ನು ಈಗಲೇ ಸಿದ್ಧ ಮಾಡಿಕೊಳ್ಳಬೇಕಾಗಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಆರ್ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣವು ಕುಸಿತ ಕಂಡಿದೆ ಎಂಬುವುದನ್ನು ನಾವು ಗಮನಿಸಿದ್ದೇವೆ. ಸಾಕಷ್ಟು ಪರೀಕ್ಷೆ ಮಾಡದಿದ್ದರೆ, ಸೋಂಕು ಯಾವ ರೀತಿ ಹರಡುತ್ತಿದೆ ಎಂಬುವುದನ್ನು ಸರಿಯಾಗಿ ತಿಳಿದು ಕೊಳ್ಳಲು ಕಷ್ಟ," ಎಂದು ಕೂಡಾ ಆರೋಗ್ಯ ಸಚಿವಾಲಯ ಹೇಳಿದೆ
ಹಾಟ್ಸ್ಪಾಟ್ಗಳ ಮೇಲೆ ಅಥವಾ ಎಲ್ಲಿ ಅಧಿಕ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆಯೋ ಅಲ್ಲಿ ನಿಗಾ ವಹಿಸಿ, ಹಾಟ್ಸ್ಪಾಟ್ಗಳಲ್ಲಿ ಸ್ಯಾಚುರೇಶನ್ ಪರೀಕ್ಷೆಯ ಅಗತ್ಯವಿದೆ ಮತ್ತು ಕೋವಿಡ್ ಪಾಸಿಟಿವ್ ಎಲ್ಲಾ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಿಕೊಡಿ. ರಾಜ್ಯವು ಶೇಕಡಾ 5 ಕ್ಕಿಂತ ಕಡಿಮೆ ಪಾಸಿಟಿವ್ ದರವನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು. ಆದರೆ ಮೊದಲು ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನು ಅಧಿಕ ಮಾಡಬೇಕು ಎಂದು ಕೇಂದ್ರ ಸರ್ಕಾರವು ಪುನರುಚ್ಚರಿಸಿದೆ.
ಜನರ ಆತಂಕ ನಿವಾರಿಸಿ: ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ
ಇನ್ನು ಈ ಸಂದರ್ಭದಲ್ಲೇ ಜನರು ತಪ್ಪು ಮಾಹಿತಿಯನ್ನು ನಂಬಬೇಡಿ ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. "ದೇಶದಲ್ಲಿ ಇತ್ತೀಚೆಗೆ ಕೋವಿಡ್ ಬಗ್ಗೆ ತಪ್ಪು ಮಾಹಿತಿಗಳು ಹರಡುತ್ತಿದೆ. ಇದು ಜನ ಸಾಮಾನ್ಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಿಂದಾಗಿ ರಾಜ್ಯ ಸರ್ಕಾರವು ಪತ್ರಿಕಾಗೋಷ್ಠಿ ಹಾಗೂ ಬುಲೆಟಿನ್ ಮೂಲಕ ಜನರಿಗೆ ಸರಿಯಾದ ಮಾಹಿತಿ ನೀಡಿ, ಜನರಲ್ಲಿ ಇರುವ ಆತಂಕವನ್ನು ನಿವಾರಿಸಬೇಕು," ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
(ಒನ್ಇಂಡಿಯಾ ಸುದ್ದಿ)